ಹೊಸದಿಲ್ಲಿ: ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್ನಲ್ಲಿ ಬೇಜವಾಬ್ದಾರಿಯುತ ಹೊಡೆತಕ್ಕೆ ಕೈ ಹಾಕಿ ಸುಲಭವಾಗಿ ವಿಕೆಟ್ ಒಪ್ಪಿಸಿದ್ದ ಟೀಮ್ ಇಂಡಿಯಾ ವಿಕೆಟ್ ಕೀಪರ್ ಅವರನ್ನು ಹಲವು ಕ್ರಿಕೆಟ್ ಪಂಡಿತರು ಟೀಕಿಸಿದ್ದರು. ಇದೀಗ ಈ ಪಟ್ಟಿಗೆ ಮಾಜಿ ಕ್ರಿಕೆಟಿಗ ರೀತಿಂದರ್ ಸಿಂಗ್ ಸೋಢಿ ಸೇರ್ಪಡೆಯಾಗಿದ್ದಾರೆ. ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು 1-1 ಸಮಬಲ ಕಾಯ್ದುಕೊಂಡಿವೆ. ಈ ಹಿನ್ನೆಲೆಯಲ್ಲಿ ನಾಳೆಯಿಂದ(ಮಂಗಳವಾರ) ಕೇಪ್ ಟೌನ್ನಲ್ಲಿ ಆರಂಭವಾಗಲಿರುವ ಮೂರನೇ ಹಾಗೂ ಸರಣಿ ನಿರ್ಣಾಯಕ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದೆ. ಎರಡನೇ ಟೆಸ್ಟ್ ನಿರ್ಣಾಯಕ ಸನ್ನಿವೇಶದಲ್ಲಿ ಕೆಟ್ಟ ಹೊಡೆತಕ್ಕೆ ಕೈ ಹಾಕಿ ಸುಲಭವಾಗಿ ವಿಕೆಟ್ ಒಪ್ಪಿಸಿದ್ದ ರಿಷಭ್ ಪಂತ್ ಅವರನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟೆಸ್ಟ್ಗೆ ಟೀಂ ಇಂಡಿಯಾದ ಪ್ಲೇಯಿಂಗ್ ಇಲೆವೆನ್ನಿಂದ ಕೈಬಿಟ್ಟರೂ ಯಾವುದೇ ಅಚ್ಚರಿ ಇಲ್ಲವೆಂದು ರೀತೀಂದರ್ ಸಿಂಗ್ ಸೋಢಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜೊಹಾನ್ಸ್ಬರ್ಗ್ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್ನಲ್ಲಿ ತಲಾ ಅರ್ಧಶತಕ ಸಿಡಿಸಿದ ಬಳಿಕ ಹಿರಿಯ ಬ್ಯಾಟ್ಸ್ಮನ್ಗಳಾದ ಚೇತೇಶ್ವರ್ ಪೂಜಾರ ಹಾಗೂ ಅಜಿಂಕ್ಯ ರಹಾನೆ ತಕ್ಷಣ ವಿಕೆಟ್ ಒಪ್ಪಿಸಿದ್ದರು. ಈ ವೇಳೆ ಕ್ರೀಸ್ಗೆ ಬಂದ ರಿಷಭ್ ಪಂತ್ ವಿಕೆಟ್ ಕಾಪಾಡಿಕೊಂಡು ತಂಡವನ್ನು ಅಪಾಯದಿಂದ ಪಾರು ಮಾಡಬೇಕಾಗಿತ್ತು. ಇಂಥಾ ಕಠಿಣ ಸನ್ನಿವೇಶದಲ್ಲಿ ಕಗಿಸೊ ರಬಾಡ ಎಸೆತದಲ್ಲಿ ಮುಂದೆ ಬಂದು ದೊಡ್ಡ ಹೊಡೆತಕ್ಕೆ ಕೈಹಾಕಿದ ಪಂತ್, ವಿಕೆಟ್ ಕೀಪರ್ಗೆ ಸುಲಭ ಕ್ಯಾಚಿತ್ತಿದ್ದರು. ಪಂದ್ಯದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿದ್ದ ಹೆಡ್ ಕೋಚ್ ರಾಹುಲ್ ದ್ರಾವಿಡ್, ಶಾಟ್ ಸೆಲೆಕ್ಷನ್ ಕುರಿತು ರಿಷಭ್ ಪಂತ್ ಬಳಿಕ ಸಂವಹನ ನಡೆಸಬೇಕಾದ ಅಗತ್ಯವಿದೆ ಎಂದು ಹೇಳಿದ್ದರು. ಇಂಡಿಯಾ ನ್ಯೂಸ್ ಜೊತೆ ಚರ್ಚೆಯಲ್ಲಿ ರೀತಿಂದರ್ ಸೋಧಿ, "ನೀವು ಕೆಟ್ಟ ಹೊಡೆತಕ್ಕೆ ಕೈ ಹಾಕಿದಾಗ ನಿಮ್ಮ ತಂಡ ಭಾರಿ ಹಿನ್ನಡೆಯನ್ನು ಅನುಭವಿಸುತ್ತದೆ. ಈ ಹಿನ್ನೆಲೆಯಲ್ಲಿ ನೀವು ಮಾಡಿದ ತಪ್ಪಿಗೆ ಮುಂದಿನ ಪಂದ್ಯದಲ್ಲಿ ಬೆಂಚ್ ಕಾಯಬೇಕು. ಆ ಮೂಲಕ ತಮ್ಮ ತಪ್ಪಿನಿಂದ ಪಾಠ ಕಲಿಯಬೇಕು. ಅಂದಹಾಗೆ ಇದೀಗ ಪಂತ್ ಸೂಪರ್ ಸ್ಟಾರ್ ಅಲ್ಲ," ಎಂದು ಕಿಡಿ ಕಾರಿದರು. ಒಂದು ವೇಳೆ ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯದಲ್ಲಿ ರಿಷಭ್ ಪಂತ್ ಅವರನ್ನು ಕೈ ಬಿಟ್ಟರೂ ನನಗೆ ಅಚ್ಚರಿಯಾಗುವುದಿಲ್ಲ ಎಂದು ಇದೇ ವೇಳೆ ಭಾರತ ತಂಡದ ಮಾಜಿ ಆಲ್ರೌಂಡರ್ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ. "ದೊಡ್ಡ ಆಟಗಾರ ಅಥವಾ ಸಣ್ಣ ಆಟಗಾರ ಎಲ್ಲರೂ ತಪ್ಪು ಮಾಡೇ ಮಾಡುತ್ತಾರೆ. ಯಾರು ಮಾಡಿದರೂ ತಪ್ಪು ತಪ್ಪೇ. ಈ ಸಂಬಂಧ ರಿಷಭ್ ಪಂತ್ ಬಳಿ ಸಾಕಷ್ಟು ಮಾತನಾಡಲಾಗಿರುತ್ತದೆ. ತಮ್ಮ ಪಾಠ ಕಲಿಯುವ ಸಲುವಾಗಿ ಮೂರನೇ ಟೆಸ್ಟ್ ಪಂದ್ಯಕ್ಕೆ ಅವರನ್ನು ಬೆಂಚ್ ಕಾಯಿಸಿದರೂ ದೊಡ್ಡ ಸಂಗತಿಯೇನಲ್ಲ. ಇಲ್ಲವಾದಲ್ಲಿ ತಪ್ಪುಗಳ ಪುನರಾವರ್ತನೆಯಾಗುತ್ತವೆ," ಎಂದು ಸೋಢಿ ವಾರ್ನಿಂಗ್ ಕೊಟ್ಟಿದ್ದಾರೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3navjtx