ರಾಯಪುರ: ಹೊಸದಿಲ್ಲಿಯ ಇಂಡಿಯಾ ಗೇಟ್ ಬಳಿ 50 ವರ್ಷ ಹಿಂದೆ ಸ್ಥಾಪಿಸಿದ್ದ 'ಅಮರ ಜವಾನ್ ಜ್ಯೋತಿ'ಯನ್ನು ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ವಿಲೀನಗೊಳಿಸಿದ ಕೇಂದ್ರ ಸರಕಾರದ ಕ್ರಮಕ್ಕೆ ಪ್ರತಿಯಾಗಿ ಕಾಂಗ್ರೆಸ್ ತನ್ನ ಆಡಳಿತವಿರುವ ಛತ್ತೀಸ್ಗಢದಲ್ಲಿ ಹೊಸದಾಗಿ 'ಅಮರ ಜವಾನ್ ಜ್ಯೋತಿ' ಸ್ಥಾಪಿಸಲು ಮುಂದಾಗಿದೆ. ''ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಫೆ.3ರಂದು ಶಂಕುಸ್ಥಾಪನೆ ನಡೆಸಲಿದ್ದಾರೆ,'' ಎಂದು ಮುಖ್ಯಮಂತ್ರಿ ಭೂಪೇಶ್ ಬಘೇಲ್ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಈ ಸಂಗತಿಯನ್ನು ಬಘೇಲ್ ಬಹಿರಂಗಪಡಿಸಿದ್ದಾರೆ. '' ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟವನ್ನೇ ನಡೆಸದವರಿಗೆ ಅಮರ ಜವಾನ್ ಜ್ಯೋತಿಯ ಮಹತ್ವ ತಿಳಿಯಲ್ಲ. ಹಾಗಾಗಿ ಅವರು ಅದನ್ನು ನಂದಿಸಿದರು. ಈ ಮೂಲಕ ದೇಶದ ಇತಿಹಾಸವನ್ನೇ ಅಳಿಸುವ ದುಷ್ಕೃತ್ಯವನ್ನು ಕೇಂದ್ರ ಸರಕಾರ ನಡೆಸಿದೆ. ಇದಕ್ಕೆ ಪರಿಹಾರವಾಗಿ ಮತ್ತೊಮ್ಮೆ ನಮ್ಮ ವೀರ ಹುತಾತ್ಮ ಯೋಧರ ಸ್ಮರಣಾರ್ಥವಾಗಿ ಅಮರ ಜವಾನ್ ಜ್ಯೋತಿಯನ್ನು ಬೆಳಗಿಸಲು ಕಾಂಗ್ರೆಸ್ ನಿರ್ಧರಿಸಿದೆ ,'' ಎಂದಿದ್ದಾರೆ. ಜ.21ರಂದು ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿಅಮರ ಜವಾನ್ ಜ್ಯೋತಿಯನ್ನು ವಿಲೀನಗೊಳಿಸಲಾಗಿದೆ. 1971ರ ಬಾಂಗ್ಲಾ ವಿಮೋಚನೆ ಯುದ್ಧದಲ್ಲಿ ಹುತಾತ್ಮರಾದ ಭಾರತೀಯ ಯೋಧರಿಗೆ ಗೌರವ ಸಲ್ಲಿಸುವ ಸಲುವಾಗಿ 1972ರ ಜ.26ರಂದು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಅಮರ ಜವಾನ್ ಜ್ಯೋತಿಯನ್ನು ಲೋಕಾರ್ಪಣೆ ಮಾಡಿದ್ದರು. ಇಂಡಿಯಾ ಗೇಟ್ನಲ್ಲಿರುವ ಅಮರ ಜವಾನ್ ಜ್ಯೋತಿಯನ್ನು ರಾಷ್ಟ್ರೀಯ ಯುದ್ಧ ಸ್ಮಾರಕದ ಜ್ಯೋತಿಯೊಂದಿಗೆ ವಿಲೀನಗೊಳಿಸುವ ಕೇಂದ್ರ ಸರಕಾರದ ನಡೆಯನ್ನು ಕಾಂಗ್ರೆಸ್ ವಿರೋಧಿಸಿತ್ತು. ಇದು 1971ರ ನಂತರದ ಯುದ್ಧಗಳಲ್ಲಿ ಮಡಿದ ಯೋಧರಿಗೆ ನೀಡುವ ಗೌರವ ಎಂದು ಸರಕಾರ ಸಮರ್ಥಿಸಿಕೊಂಡಿತ್ತು. 'ಅಮರ ಜವಾನ್ ಜ್ಯೋತಿಯ ದೀಪವನ್ನು ನಂದಿಸುತ್ತಿಲ್ಲ. ಅದನ್ನು ರಾಷ್ಟ್ರೀಯ ಯುದ್ಧ ಸ್ಮಾರಕದ ಜ್ವಾಲೆಯೊಂದಿಗೆ ವಿಲೀನಗೊಳಿಸಲಾಗುತ್ತಿದೆ. 1971ರ ಯುದ್ಧ ಹಾಗೂ ಇತರೆ ಯುದ್ಧಗಳಲ್ಲಿ ಹುತಾತ್ಮರಾದವರಿಗೆ ಅಮರ ಜ್ಯೋತಿ ಬೆಳಕಿನಲ್ಲಿ ಗೌರವ ಸಲ್ಲಿಸಲಾಗುತ್ತಿದೆ. ಆದರೆ ಅದರಲ್ಲಿ ಯಾರೊಬ್ಬರ ಹೆಸರೂ ಇಲ್ಲ. ಇದು ವಿಚಿತ್ರ ಸಂಗತಿಯಾಗಿದೆ' ಎಂದು ಸರಕಾರದ ಮೂಲಗಳು ತಿಳಿಸಿದ್ದವು. ಕೆಲವು ಜನರಿಗೆ ದೇಶಭಕ್ತಿ ಎಂದರೆ ಏನು ಎಂದು ಅರ್ಥವಾಗುವುದಿಲ್ಲ ಎಂದು ಕಿಡಿಕಾರಿದ್ದರು. ಮೊದಲನೇ ವಿಶ್ವಯುದ್ಧ ಮತ್ತು ಆಂಗ್ಲೋ ಆಫ್ಘನ್ ಯುದ್ಧಗಳಲ್ಲಿ ಬ್ರಿಟಿಷರ ಪರ ಹೋರಾಡಿ ಮೃತಪಟ್ಟವರ ಹೆಸರುಗಳನ್ನು ಇಂಡಿಯಾ ಗೇಟ್ನಲ್ಲಿ ಕೆತ್ತಲಾಗಿದೆ. ಇದು ನಮ್ಮ ವಸಾಹತುಶಾಹಿ ಇತಿಹಾಸದ ಸಂಕೇತವಾಗಿದೆ ಎಂದು ಸರ್ಕಾರ ಹೇಳಿದೆ.
from India & World News in Kannada | VK Polls https://ift.tt/JPKFnHErc