ಅತ್ಯಾಚಾರ ಸಂತ್ರಸ್ತೆಯರ ಎಲ್ಲ ತಾಯಂದಿರೂ ಆಶಾ ದೇವಿಯಾಗಲು ಸಾಧ್ಯವೆ?

- ರಮೇಶ್‌ ಕುಮಾರ್‌ ನಾಯಕ್‌ ಅಂದು ಸಂಜೆ, ಅಮ್ಮಾ ಎರಡೇ ಗಂಟೆಯೊಳಗೆ ವಾಪಸ್‌ ಬರುತ್ತೇನೆ ಎಂದು ಮನೆಯ ಹೊಸ್ತಿಲು ದಾಟಿ ಹೋಗಿದ್ದಳು ಮಗಳು. ರಾತ್ರಿ ಗಂಟೆ ಎಂಟಾದರೂ ಬಾರದಿರುವುದು ನೋಡಿ ಕಾಲ್‌ ಮಾಡಿದೆ. ಕನೆಕ್ಟ್ ಆಗಲಿಲ್ಲ. ಮಗನನ್ನು ಕರೆದುಕೊಂಡು ಬಸ್‌ಸ್ಟ್ಯಾಂಡ್‌ನತ್ತ ಹೋದೆ. ಆಕೆಯ ಸುಳಿವಿಲ್ಲ. ರಾತ್ರಿ 10 ಗಂಟೆ ಹೊತ್ತಿಗೆ ಆಕೆಯ ಅಪ್ಪ ಮನೆಗೆ ಬಂದವರೇ ಹುಡುಕಲು ಹೊರಟರು. ರಾತ್ರಿ 11 ಗಂಟೆಯವರೆಗೂ ನಾವು ಹುಡುಕುತ್ತಲೇ ಇದ್ದೆವು. ಅಷ್ಟರಲ್ಲಿ ದಿಲ್ಲಿಯ ಸಫ್ದರ್‌ಜಂಗ್‌ ಆಸ್ಪತ್ರೆಯಿಂದ ಕಾಲ್‌ ಬಂತು. ನಿಮ್ಮ ಮಗಳು ಇಲ್ಲಿದ್ದಾಳೆ ಬೇಗ ಬನ್ನಿ... ಆಸ್ಪತ್ರೆಗೆ ದೌಡಾಯಿಸಿ ನೋಡಿದರೆ ಆಘಾತ ಕಾದಿತ್ತು. ಮಗಳಿಗೆ ಪ್ರಜ್ಞೆಯೇ ಇರಲಿಲ್ಲ. ತುಟಿಗಳು ಸೀಳಿ ಹೋಗಿದ್ದವು. ಹಣೆ ಒಡೆದು ಹೋಗಿತ್ತು. ಮೈತುಂಬ ಗಾಯಗಳು. ಕೆಲವೆಡೆ ಮಾಂಸ ಕಿತ್ತು ಬಂದಿತ್ತು. ತೊಡೆಯ ಭಾಗದಲ್ಲಿ ರಕ್ತದ ಓಕುಳಿ. ಕಾಡು ಪ್ರಾಣಿಗಳ ದಾಳಿಯಿಂದ ಮಗಳು ಜೀವ ಉಳಿಸಿಕೊಂಡು ಬಂದಿದ್ದಾಳೇನೋ ಎಂದುಕೊಂಡೆ ನಾನು... ಕೆಲ ದಿನಗಳ ಬಳಿಕ ಆಕೆಗೆ ಪ್ರಜ್ಞೆ ಬಂತು. ಜೀವಚ್ಛವ ಸ್ಥಿತಿಯಲ್ಲೇ ನನ್ನತ್ತ ನೋಡಿ, ನೀರು ಬೇಕೆಂದು ಸಂಜ್ಞೆ ಮಾಡಿದಳು. ಆದರೆ ನೀರು ಕುಡಿಯುವ ಸ್ಥಿತಿಯಲ್ಲಿ ಆಕೆ ಇರಲಿಲ್ಲ. ಸರಿಯಾಗಿ ಹನ್ನೆರಡನೇ ದಿನ ಆಕೆ ಕಣ್ಣು ಮುಚ್ಚಿದಳು. ಕೈತುತ್ತು ತಿನ್ನಿಸಿ ಬೆಳೆಸಿದ ಚೆಂದದ ಹೆಣ್ಣು ಮಗುವಾಕೆ. ಕೊನೆಯುಸಿರೆಳೆಯುವಾಗ ನನ್ನ ಮುದ್ದು ಮಗಳಿಗೆ ಒಂದೇ ಒಂದು ಗುಟುಕು ನೀರು ಕುಡಿಸಲೂ ಆಗದೇ ಹೋಯಿತಲ್ಲ ಎಂಬ ನೋವು ದಿನವೂ ಕಾಡುತ್ತದೆ... ನಿರ್ಭಯಾಳ ತಾಯಿ ಆಶಾದೇವಿ ಅವರ ಬಾಯಿಂದ ಅಂದಿನ ಆ ಕರಾಳ ಘಟನೆ ಕೇಳುವಾಗಲೇ ಮೈಕಂಪಿಸುತ್ತದೆ. ಇನ್ನು ಆ 23 ವರ್ಷದ ಹೆಣ್ಣು ಜೀವ ಎಷ್ಟು ಚಿತ್ರ ಹಿಂಸೆ ಅನುಭವಿಸಿರಬಹುದು? ಆ ಆರು ಮಂದಿ ದುರುಳರು ಚಲಿಸುತ್ತಿದ್ದ ಬಸ್‌ನಲ್ಲೇ ಸಾಮೂಹಿಕ ಅತ್ಯಾಚಾರ ಎಸಗಿದ್ದು ಮಾತ್ರವಲ್ಲ, ಭೀಕರವಾಗಿ ಹಲ್ಲೆ ನಡೆಸಿದ್ದರು. ಅತ್ಯಾಚಾರಿಗಳಲೊಬ್ಬ ರಕ್ಕಸ ಆಕೆಯ ಗುಪ್ತಾಂಗದೊಳಗೆ ಕಬ್ಬಿಣದ ರಾಡ್‌ ತೂರಿಸಿದ್ದ. ಬಳಿಕ ಚಲಿಸುತ್ತಿದ್ದ ಬಸ್‌ನಿಂದಲೇ ಆಕೆಯನ್ನು ಹೊರಕ್ಕೆ ಎಸೆಯಲಾಗಿತ್ತು... ನಮ್ಮ ನ್ಯಾಯಾಂಗ ವ್ಯವಸ್ಥೆಯ ಸಕಲ ದೌರ್ಬಲ್ಯಗಳನ್ನು ಬಟಾಬಯಲು ಮಾಡಿದೆ. ತಾವು ಮಾಡಿರುವ ಹೀನಾತಿ ಹೀನ ಕೃತ್ಯದ ಕುರಿತಾಗಿ ಅರೆಪಾವಿನಷ್ಟೂ ಪಶ್ತಾತಾಪ ಅವರ ಮನದಲ್ಲಿರಲಿಲ್ಲ. ನಿರ್ಭಯಾ ಹತ್ಯೆ ನಡೆದ 9 ತಿಂಗಳ ಬಳಿಕ ಸ್ಥಳೀಯ ಕೋರ್ಟ್‌ ನಾಲ್ವರು ಹಂತಕರಿಗೆ ಗಲ್ಲುಶಿಕ್ಷೆ ವಿಧಿಸಿತ್ತು. ಇನ್ನಿಬ್ಬರಲ್ಲಿ ಒಬ್ಬ ಆರೋಪಿ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡರೆ, ಮತ್ತೊಬ್ಬ ಅಪ್ರಾಪ್ತ ವಯಸ್ಕ ಎಂಬ ಕಾರಣದಿಂದ ಮೂರೇ ಮೂರು ವರ್ಷ ಶಿಕ್ಷೆ ವಿಧಿಸಿ, ಜೀವನೋಪಾಯಕ್ಕೆಂದು ಒಂದು ಹೊಲಿಗೆ ಮೆಷಿನ್‌ ಕೊಡಿಸಿ ಬಿಡಲಾಯಿತು. ಸೋಜಿಗವೆಂದರೆ ಆತ, ನಿರ್ಭಯಾಳ ಮರ್ಮಾಂಗದಲ್ಲಿ ಕಬ್ಬಿಣದ ರಾಡ್‌ ತೂರಿಸಿ ಅದು ಕರುಳಿಗೆ ಚುಚ್ಚುವಷ್ಟು ಚಿತ್ರಹಿಂಸೆ ಕೊಟ್ಟ ಕ್ರೂರಿ. ನಾಲ್ವರ ಗಲ್ಲುಶಿಕ್ಷೆಯನ್ನು ಎತ್ತಿ ಹಿಡಿಯಲು ಹೈಕೋರ್ಟ್‌ ಎರಡು ವರ್ಷ ತೆಗೆದುಕೊಂಡಿತು. ಆ ಶಿಕ್ಷೆಯನ್ನು ಕಾಯಂ ಮಾಡಲು ಸುಪ್ರಿಂ ಕೋರ್ಟ್‌ಗೆ ಇನ್ನೂ ಎರಡು ವರ್ಷ ಹಿಡಿಯಿತು. ಮತ್ತೊಂದು ವರ್ಷದ ಬಳಿಕ ಅದೇ ಸುಪ್ರಿಂ ಕೋರ್ಟ್‌ ಮರು ವಿಚಾರಣೆಗೆ ಆದೇಶಿಸಿತು. ಕೊನೆಗೂ ಅದು 2018ರಲ್ಲಿ ಹಂತಕರ ಮೇಲ್ಮನವಿ ತಿರಸ್ಕರಿಸಿತು. ಆ ಬಳಿಕ ಹಂತಕರು ಕ್ಷಮಾದಾನ ಕೋರಿ ರಾಷ್ಟ್ರಪತಿಯವರ ಮೊರೆ ಹೋದರು. ಹತ್ತು ಹಲವು ನೆಪ ಹೇಳಿ ಕೋರ್ಟ್‌ನಿಂದ ಕೋರ್ಟ್‌ಗೆ ಅಪೀಲು ಸಲ್ಲಿಸುತ್ತ ಹೋದರು. ಗಲ್ಲುಶಿಕ್ಷೆ ಜಾರಿಯಾಗುವ ಕೇವಲ ಮೂರೇ ಮೂರು ಗಂಟೆಯ ಮೊದಲ ವರೆಗೂ ಪಾತಕಿಗಳ ಅಹವಾಲನ್ನು ಕೋರ್ಟ್‌ ಆಲಿಸುತ್ತ ಹೋಯಿತು. ನಮ್ಮ ನ್ಯಾಯಾಂಗ ವ್ಯವಸ್ಥೆಯನ್ನು ಅಣಕ ಮಾಡುತ್ತಲೇ ಇಷ್ಟು ವರ್ಷ ಬದುಕುಳಿದರು ನೋಡಿ! ಹೀಗೆ ಶಿಕ್ಷೆಯಿಂದ ಪಾರಾಗಲು, ಶಿಕ್ಷೆ ಮುಂದೂಡಲು, ಕಾಲಹರಣ ಮಾಡಲು ನಮ್ಮ ಕಾನೂನು ಚೌಕಟ್ಟಿನಲ್ಲೇ ಹಲವಾರು ದಾರಿಗಳಿವೆ. ದೇಶಾದ್ಯಂತ ಸಂಚಲನ ಉಂಟುಮಾಡಿದ ಈ ಪ್ರಕರಣದಲ್ಲೆ ಹೀಗಾದರೆ ಉಳಿದ ಪ್ರಕರಣಗಳ ಪಾಡೇನು? ಹೆತ್ತ ಮಗಳನ್ನು, ಜೀವನ ಸಂಗಾತಿಯನ್ನು, ಒಡಹುಟ್ಟಿದ ಸಹೋದರಿಯನ್ನು ದಾರುಣವಾಗಿ ಕಳೆದುಕೊಂಡ ಕುಟುಂಬಗಳ ಕಣ್ಣಂಚಿನಲ್ಲಿ ಸಣ್ಣದೊಂದು ಸಮಾಧಾನದ ಹನಿ ಜಿನುಗಲು ಅದೆಷ್ಟು ವರ್ಷಗಳು ಬೇಕು? ದೇಶದಲ್ಲಿ ಒಂದು ವರ್ಷದಲ್ಲಿ 4 ಲಕ್ಷ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ಆಕ್ರಮಣ ನಡೆಯುತ್ತದೆ. ಇವರಲ್ಲಿ 50 ಸಾವಿರದಷ್ಟು ಅಮಾಯಕ ಕಂದಮ್ಮಗಳಿದ್ದಾರೆ. ತಿಂಗಳಿಗೆ 4 ಸಾವಿರ, ದಿನಕ್ಕೆ 130, 5 ನಿಮಿಷಕ್ಕೊಂದು ಮಗು ಅತ್ಯಾಚಾರಕ್ಕೊಳಗಾಗುತ್ತಿದೆ. ಲಕ್ಷಾಂತರ ಅತ್ಯಾಚಾರ-ಕೊಲೆ ಪ್ರಕರಣಗಳು ನ್ಯಾಯಾಲಯಗಳಲ್ಲಿ ಕೊಳೆಯುತ್ತಿವೆ. ಅತ್ಯಾಚಾರಿಗಳು ಕೆಲವೇ ತಿಂಗಳಲ್ಲಿ ಜಾಮೀನು ಪಡೆದು ನಿರ್ಭಯವಾಗಿ ಮತ್ತೊಂದು ಹೆಣ್ಣು ಜೀವದ ಬೇಟೆಗಿಳಿಯುತ್ತಾರೆ. ಇದೆಂಥ ವಿಪರ್ಯಾಸ ನೋಡಿ. ತಿಹಾರ್‌ನಂಥ ದೊಡ್ಡ ಜೈಲಿನಲ್ಲೂ ಪಾಪಿಗಳನ್ನು ಗಲ್ಲಿಗೇರಿಸಲು ಕಾಯಂ ಫಾಸಿದಾರರಿಲ್ಲ, ನೇಣು ಹಗ್ಗಗಳಿಲ್ಲ! ಉತ್ತರ ಪ್ರದೇಶದಿಂದ ಹೊಟ್ಟೆ ಪಾಡಿಗಾಗಿ ದಿಲ್ಲಿಗೆ ವಲಸೆ ಬಂದಿದ್ದ ಬಡ ಕುಟುಂಬ ಅದು. ನಿರ್ಭಯಾಳ ತಂದೆಯದು ಏರ್‌ಪೋರ್ಟ್‌ನಲ್ಲಿ ಬ್ಯಾಗೇಜ್‌ ಸಹಾಯಕನ ಕೆಲಸ. ಮೂವರು ಮಕ್ಕಳು. ನಿರ್ಭಯಾಳೇ ದೊಡ್ಡವಳು. ಆಕೆಗೆ ಇಬ್ಬರು ತಮ್ಮಂದಿರಿದ್ದಾರೆ. ಸಂಬಳ ಸಾಲದೆ ಅಪ್ಪ ಡಬಲ್‌ ಶಿಫ್ಟ್‌ನಲ್ಲಿ ಬೆವರು ಸುರಿಸುತ್ತಾರೆ. ಇಂಥ ಸ್ಥಿತಿಯಲ್ಲೇ ಆಶಾದೇವಿ ಮಗಳಿಗೆ ನ್ಯಾಯ ಕೊಡಿಸಲು ಹೋರಾಡಿದರು. ಈ ಏಳು ವರ್ಷ ಅವರು ಸುರಿಸಿದ ಕಣ್ಣೀರಿಗೆ ಲೆಕ್ಕವೇ ಇಲ್ಲ. ಹಂತಕರನ್ನು ಫಾಸಿಗೆ ಏರಿಸಲು ಅವರು ಕೋರ್ಟ್‌ನಿಂದ ಕೋರ್ಟ್‌ಗೆ ಅಲೆಯುತ್ತ ಹತ್ತಿಳಿದ ಮೆಟ್ಟಿಲುಗಳ ಲೆಕ್ಕ ಇಟ್ಟವರಾರು? ದೇವಸ್ಥಾನದೊಳಗೆ ದೇವರನ್ನು ನಮಿಸುತ್ತಿರುವಾಗಲೇ ಹೊರಗಡೆ ಇಟ್ಟಿರುವ ನಮ್ಮ ಚಪ್ಪಲಿ ಯಾರು ಎತ್ತಿಕೊಂಡು ಹೋದರೇನೋ ಎಂಬ ಟೆನ್ಶನ್‌ ನಮಗೆ! ಹೀಗಿರುವಾಗ, ನಮ್ಮ ನ್ಯಾಯಾಂಗ ವ್ಯವಸ್ಥೆಯ ದೌರ್ಬಲ್ಯವನ್ನೇ ಅಸ್ತ್ರ ಮಾಡಿಕೊಂಡು ಎಲ್ಲಿ ತನ್ನ ಮಗಳ ಹಂತಕರು ಪಾರಾಗಿ ಬಿಡುತ್ತಾರೋ ಎಂದುಕೊಂಡು ಆಶಾದೇವಿ ಹಗಲು ರಾತ್ರಿ ಎಷ್ಟು ಒತ್ತಡ ಅನುಭವಿಸಿರಬಹುದು? ಕೊನೆಗೂ ನಾಲ್ವರು ಅತ್ಯಾಚಾರಿಗಳನ್ನು ನೇಣುಗಂಬದಲ್ಲಿ ನೇತಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಸಂತ್ರಸ್ತೆಯರ ಎಲ್ಲ ತಾಯಂದಿರೂ ಆಶಾ ದೇವಿಯಾಗಲು ಸಾಧ್ಯವೆ? ಮಗಳನ್ನೂ ಕಳೆದುಕೊಂಡು, ಕುಟುಂಬವನ್ನೂ ಪಣಕಿಟ್ಟು, ಮನೆಮಠ ಮಾರಿ ನ್ಯಾಯ ಪಡೆಯುವ ತಾಕತ್ತು ಎಷ್ಟು ತಾಯಂದಿರಿಗಿರಲು ಸಾಧ್ಯ? ಪಾಪಿಗಳು ಗಲ್ಲಿಗೇರಿದರು ನಿಜ. ಆದರೆ ತಮ್ಮ ಜೀವಿತಾವಧಿಯ ಆ ಅಮೂಲ್ಯ ಏಳು ವರ್ಷ ಆಶಾದೇವಿಯವರು ಸುರಿಸಿದ ಕಣ್ಣೀರಿಗೆ ಬೆಲೆ ಕಟ್ಟುವವರಾರು? ಅವರು ಎದುರಿಸಿದ ಬೆದರಿಕೆ, ಅವಮಾನ-ವ್ಯಂಗ್ಯ, ಕಷ್ಟ-ನಷ್ಟಗಳಿಗೆ ಹೊಣೆ ಹೊರುವವರು ಯಾರು?


from India & World News in Kannada | VK Polls https://ift.tt/2UuG1f0

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...