ಬೆಂಗಳೂರು: ಸೋಂಕು ಕೆಲವೇ ಜಿಲ್ಲೆಗಳಲ್ಲಿ ಹೆಚ್ಚಿದೆ. ಆದರೆ, ವೀಕೆಂಡ್ ಕರ್ಫ್ಯೂವನ್ನು ಇಡೀ ರಾಜ್ಯಕ್ಕೆ ವಿಧಿಸಿರುವುದು ಅವೈಜ್ಞಾನಿಕ ಮತ್ತು ಜನ ಜೀವನಕ್ಕೆ ನೀಡಿದ ದೊಡ್ಡ ಹೊಡೆತ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಹೋಟೆಲ್ ಉದ್ಯಮಿಗಳು, ಆಟೋ ಚಾಲಕರು, ವ್ಯಾಪಾರಿಗಳು, ವಲಯದ ಪ್ರಮುಖರು ಇದನ್ನು ಪ್ರಶ್ನಿಸಿದ್ದು, ವಿನಾಯಿತಿಗೆ ಆಗ್ರಹಿಸಿದ್ದಾರೆ. ''ಮೈಸೂರು ಪ್ರಮುಖ ಪ್ರವಾಸೋದ್ಯಮದ ಜಿಲ್ಲೆ. ಹಾಗಾಗಿ ಪ್ರವಾಸಿಗರು ವೀಕೆಂಡ್ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮೈಸೂರಿಗೆ ಭೇಟಿ ನೀಡುತ್ತಾರೆ. ಸರಕಾರ ವೀಕೆಂಡ್ ಕರ್ಫ್ಯೂ ವಿಧಿಸಿರುವುದರಿಂದ ಹೋಟೆಲ್ ಉದ್ಯಮ, ವ್ಯಾಪಾರಸ್ಥರಿಗೆ ತುಂಬಾ ತೊಂದರೆಯಾಗುತ್ತದೆ. ನೈಟ್ ಕರ್ಫ್ಯೂ ಹಾಗೂ ವೀಕೆಂಡ್ ಕರ್ಫ್ಯೂ ಹೇರಿರುವುದು ಅವೈಜ್ಞಾನಿಕ. ಮೈಸೂರಿನಲ್ಲಿ ಕೊರೊನಾ ಪ್ರಕರಣಗಳು ಕಡಿಮೆ ಇರುವುದರಿಂದ ಕರ್ಫ್ಯೂ ಅಗತ್ಯವಿರಲಿಲ್ಲ,'' ಎನ್ನುವುದು ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ. ನಾರಾಯಣಗೌಡರ ಅಭಿಮತ. ಕೊಡಗಿನಲ್ಲೂಇದೇ ಅಭಿಪ್ರಾಯವಿದೆ. ಚಾಮರಾಜನಗರ, ಮಂಡ್ಯ, ಹಾಸನ ಜಿಲ್ಲೆಯಲ್ಲೂ ವ್ಯಾಪಾರಿಗಳು ಸಿಡಿದೆದ್ದಿದ್ದಾರೆ. ಎಲ್ಲಿ ಸಮಸ್ಯೆಯೋ ಅಲ್ಲಿ ಸರಿ ಮಾಡಿ: ''ಎಲ್ಲಿ ಜನದಟ್ಟಣೆ ಆಗುತ್ತಿದೆಯೋ ಅದಕ್ಕೆ ಕಾರಣ ಹುಡುಕಿ ಪರ್ಯಾಯ ವ್ಯವಸ್ಥೆ ಮತ್ತು ಜಾಗೃತಿಗೆ ಆದ್ಯತೆ ನೀಡಿದರೆ ಕರ್ಫ್ಯೂ, ಲಾಕ್ಡೌನ್ ತಪ್ಪಿಸಬಹುದು. ಇಲ್ಲದಿದ್ದರೆ ಅನವಶ್ಯಕವಾಗಿ ಸೀಮಿತ ವಲಯದವರು ಆರ್ಥಿಕ ತೊಂದರೆಗೆ ಸಿಲುಕುತ್ತಾರೆ,'' ಎನ್ನುವುದು ಬೆಳಗಾವಿಯ ಪಂಚಮುಖಿ ಟ್ರಾವೆಲ್ಸ್ನ ಮುಖ್ಯಸ್ಥ ಸುರೇಶ್ ಅರಳಿಕಟ್ಟಿ ಅಭಿಪ್ರಾಯ. ಕೊಡಗಿಗೆ ಯಾಕೆ ಬೇಕು? ಕೊಡಗು ಜಿಲ್ಲೆಯಲ್ಲಿ ಜನಜೀವನ ಸಹಜ ಸ್ಥಿತಿಯಲ್ಲಿದ್ದು, ಸರಕಾರ ಹೊರಡಿಸಿರುವ ವೀಕೆಂಡ್ ಕರ್ಫ್ಯೂ ಆದೇಶ ಅವೈಜ್ಞಾನಿಕ ಹಾಗೂ ಅಪ್ರಸ್ತುತ. ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವಿಟಿ ಪ್ರಮಾಣವೂ ಕಡಿಮೆಯಿದೆ. ಹೀಗಿದ್ದಾಗ ಜಿಲ್ಲಾಧಿಕಾರಿ ಯಾವ ಆಧಾರದ ಮೇಲೆ ಸರಕಾರಕ್ಕೆ ಸಲಹೆ ನೀಡಿದ್ದಾರೆ ಎಂದು ಜಿಲ್ಲಾಧಿಕಾರಿ ವಿರುದ್ಧ ಒಕ್ಕೂಟದ ಅಧ್ಯಕ್ಷ ಕೆ.ಕೆ. ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದರು. ಕೇಸೇ ಇಲ್ಲ, ಇಲ್ಲಿ ಯಾಕೆ? ರಾಯಚೂರು ಜಿಲ್ಲೆಯಲ್ಲಿ ಸದ್ಯ ಕೇವಲ ಐವರಲ್ಲಿ ಮಾತ್ರ ಕೋವಿಡ್ ಸೋಂಕಿರುವುದರಿಂದ ವಾರದ ಕೊನೆಗೆ ವೀಕೆಂಡ್ ಕರ್ಫ್ಯೂಗೆ ವಿರೋಧ ವ್ಯಕ್ತವಾಗಿದೆ. ಕೊಪ್ಪಳ, ವಿಜಯನಗರ, ಬಳ್ಳಾರಿ ಜಿಲ್ಲೆಯಲ್ಲೂಇದೇ ರೀತಿಯ ಅಭಿಪ್ರಾಯ ವ್ಯಕ್ತವಾಗಿದೆ. ''ಕೊರೊನಾ, ಓಮಿಕ್ರಾನ್ ಕೇಸ್ಗಳು ಹೆಚ್ಚು ಬೆಂಗಳೂರಲ್ಲಿ ಇದ್ದು, ಕಲಬುರಗಿಯಲ್ಲಿ ಕೇವಲ 0.443 ಕೇಸ್ಗಳಿವೆ. ಆದರೆ, ವೀಕೆಂಡ್ ಕರ್ಫ್ಯೂ ಹೇರುತ್ತಿರುವುದು ಸರಿಯಲ್ಲ. ಈಗಾಗಲೇ ನಷ್ಟ ಅನುಭವಿಸಿದ್ದೇವೆ. ರಾಜಕಾರಣಿಗಳಾದರೆ ಕಾರ್ಯಕ್ರಮಗಳು ಮಾಡಬಹುದು. ಆದರೆ, ನಮಗೆ ಅನಾನುಕೂಲ ಮಾಡುತ್ತಿದ್ದಾರೆ,'' ಎನ್ನುತ್ತಾರೆ ಕಲಬುರಗಿಯ ಹೋಟೆಲ್ ಮಾಲೀಕರ ಸಂಘದ ಉಪಾಧ್ಯಕ್ಷ ಪ್ರವೀಣ್ ಜತನ್. ಬುಕ್ಕಿಂಗ್ ಕ್ಯಾನ್ಸಲ್ ದಾವಣಗೆರೆಯಲ್ಲಿ ವಾರಾಂತ್ಯದಲ್ಲಿ ಪ್ರವಾಸ ಆಯೋಜಿಸಿ ವಾಹನ ಬುಕ್ ಮಾಡಿದ್ದ ಜನತೆ ಕರ್ಫ್ಯೂ ಜಾರಿಯಿಂದಾಗಿ ಬುಕ್ಕಿಂಗ್ ಕ್ಯಾನ್ಸಲ್ ಮಾಡುತ್ತಿರುವುದರಿಂದ ಟ್ರಾವೆಲ್ಸ್ ಕಂಪನಿಯವರು ವಾರಾಂತ್ಯ ಕರ್ಫ್ಯೂಗೆ ವಿರೋಧ ಮಾಡುತ್ತಿದ್ದಾರೆ.
from India & World News in Kannada | VK Polls https://ift.tt/3G5vvRZ