ರಿಷಭ್‌ ಪಂತ್‌ ಬೇಜವಾಬ್ದಾರಿಯುತ ಶಾಟ್‌ ಬಗ್ಗೆ ದ್ರಾವಿಡ್‌ ಹೇಳಿದ್ದಿದು!

ಜೊಹಾನ್ಸ್‌ಬರ್ಗ್: ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ ಅವರ ಶಾಟ್‌ ಸೆಲೆಕ್ಷನ್‌ ಬಗ್ಗೆ ಸಂವಹನ ನಡೆಸಬೇಕಾದ ಅಗತ್ಯವಿದೆ ಎಂದು ಭಾರತ ತಂಡದ ಮುಖ್ಯ ತರಬೇತುದಾರ ತಿಳಿಸಿದ್ದಾರೆ. ಇಲ್ಲಿನ ದಿ ವಾಂಡರರ್ಸ್‌ ಸ್ಟೇಡಿಯಂನಲ್ಲಿ ಗುರುವಾರ ಮುಕ್ತಾಯವಾಗಿದ್ದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ನಾಯಕ ಡೀನ್‌ ಎಲ್ಗರ್‌ (96*) ಅವರ ಅತ್ಯುತ್ತಮ ಬ್ಯಾಟಿಂಗ್ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡ, 7 ವಿಕೆಟ್‌ಗಳಿಂದ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ ಮೂರು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಆತಿಥೇಯರು 1-1 ಸಮಬಲ ಮಾಡಿಕೊಂಡರು. ಅಂದಹಾಗೆ ಪಂದ್ಯದ ದ್ವಿತೀಯ ಇನಿಂಗ್ಸ್‌ನಲ್ಲಿ ಅರ್ಧಶತಕ ಸಿಡಿಸಿ ಚೇತೇಶ್ವರ್‌ ಪೂಜಾರ ಹಾಗೂ ಅಜಿಂಕ್ಯ ರಹಾನೆ ವಿಕೆಟ್‌ ಒಪ್ಪಿಸಿದ ಬಳಿಕ ಭಾರತ ತಂಡ ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ರಿಷಭ್‌ ಪಂತ್‌ ಜವಾಬ್ದಾರಿಯುತ ಬ್ಯಾಟಿಂಗ್‌ ಪ್ರದರ್ಶಿಸಬೇಕಾಗಿತ್ತು. ಆದರೆ, ಅವರು ತಮ್ಮ ಮೂರನೇ ಎಸೆತದಲ್ಲಿಯೇ ಕಗಿಸೊ ರಬಾಡಗೆ ಫಾವರ್ಡ್ ಬಂದು ದೊಡ್ಡ ಹೊಡೆತಕ್ಕೆ ಕೈ ಹಾಕಿ ಸುಲಭವಾಗಿ ವಿಕೆಟ್‌ ಒಪ್ಪಿಸಿದ್ದರು. ಈ ಹಿನ್ನೆಲೆಯಲ್ಲಿ ಕ್ರಿಕೆಟ್‌ ಪಂಡಿತರು ಪಂತ್ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದರು. ಗುರುವಾರ ಪಂದ್ಯ ಸೋತ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಹುಲ್‌ ದ್ರಾವಿಡ್‌, "ರಿಷಭ್‌ ಪಂತ್‌ ಸಕಾರಾತ್ಮಕ ಆಟಗಾರ ಎಂದು ನಮಗೆ ತಿಳಿದಿದೆ. ಅವರು ಇದೇ ಹಾದಿಯಲ್ಲಿ ಆಡುವ ಮೂಲಕ ಈ ಹಿಂದೆ ಯಶಸ್ವಿಯಾಗಿದ್ದಾರೆ. ಹೌದು ಸಮಯ ಇಲ್ಲಿ ವಿಭಿನ್ನವಾಗಿರುತ್ತದೆ. ಅದಕ್ಕೆ ತಕ್ಕಂತೆ ಆಡಬೇಕಾಗುತ್ತದೆ. ಈ ಸಂಗತಿ ಬಗ್ಗೆ ಅವರ ಬಳಿ ಸಂವಹನ ನಡೆಸಬೇಕಾದ ಅಗತ್ಯವಿದೆ," ಎಂದು ಹೇಳಿದರು. "ಶಾಟ್‌ನ ಸಮಯದ ಸಂಗತಿ ಇದಾಗಿದೆ ಎಂದು ಎಲ್ಲರಿಗೂ ತಿಳಿದಿದೆ. ರಿಷಭ್‌ ಪಂತ್‌ ಪಾಸಿಟಿವ್‌ ಆಟಗಾರ ಅಲ್ಲ ಅಥವಾ ಆಕ್ರಮಣಕಾರಿ ಆಟಗಾರ ಅಲ್ಲ ಎಂದು ಯಾರೂ ಹೇಳುತ್ತಿಲ್ಲ. ಇಂಥಾ ಶಾಟ್‌ಗಳನ್ನು ಹೊಡೆಯುವಾಗ ಕೆಲವೊಮ್ಮೆ ನೀವು ಸಮಯವನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ," ಎಂದರು. "ಕ್ರೀಸ್‌ಗೆ ಬಂದಾಗ ಇಲ್ಲಿ ಹೊಂದಿಕೊಳ್ಳಲು ನಿಮಗೇ ಆದಂತಹ ಸಮಯವನ್ನು ನೀವು ನೀಡಬೇಕಾಗುತ್ತದೆ. ರಿಷಭ್‌ ಅವರಿಂದ ಏನು ಪಡೆಯುತ್ತಿದ್ದೀರಿ ಎಂಬ ಬಗ್ಗೆ ನಮಗೆ ತಿಳಿದಿದೆ, ಅವರು ನಿಜಕ್ಕೂ ಪಾಸಿಟಿವ್‌ ಪ್ಲೇಯರ್ ಹಾಗೂ ಯಾವುದೇ ಹಂತದಲ್ಲಿ ಪಂದ್ಯದ ದಿಕ್ಕನ್ನು ಬದಲಿಸಬಲ್ಲ ಆಟಗಾರ. ಹಾಗಾಗಿ ವಿಭಿನ್ನವಾಗಿ ಪ್ರಯತ್ನಿಸುವಂತೆ ಅವರಿಗೆ ನಾವು ಹೇಳುವುದಿಲ್ಲ. ಆದರೆ ಯಾವ ಸಮಯದಲ್ಲಿ ಅವರು ಆಕ್ರಮಣಕಾರಿ ಆಟ ಆಡಬೇಕೆಂಬ ಬಗ್ಗೆ ಮಾತನಾಡಬೇಕು. ಇವರಿನ್ನೂ ಕಲಿಯುತ್ತಿದ್ದಾರೆ," ಎಂದು ದ್ರಾವಿಡ್‌ ಯುವ ಆಟಗಾರನಿಗೆ ಬೆಂಬಲ ವ್ಯಕ್ತಪಡಿಸಿದರು. ಪಂತ್‌ ವಿರುದ್ಧ ಗಂಭೀರ್‌ ಕಿಡಿ: ರಿಷಭ್‌ ಪಂತ್‌ ಶಾಟ್‌ ಸೆಲೆಕ್ಷನ್‌ ಬಗ್ಗೆ ಸ್ಟಾರ್‌ ಸ್ಪೋರ್ಟ್ಸ್‌ ಚರ್ಚೆಯಲ್ಲಿ ಮಾಜಿ ಆರಂಭಿಕ ಗೌತಮ್‌ ಗಂಭೀರ್‌ ಅಸಮಾಧಾನ ವ್ಯಕ್ತಪಡಿಸಿದ್ದರು. "ಸ್ಲೆಡ್ಜಿಂಗ್‌ ಅಂದ್ರೆ ನನಗೂ ಕೂಡ ಇಷ್ಟ. ಮನುಷ್ಯರು ಕ್ರಿಕೆಟ್ ಆಡುತ್ತಾರೆ, ಆದ್ದರಿಂದ ನಿಸ್ಸಂಶಯವಾಗಿ ಭಾವನೆಗಳಿರುತ್ತವೆ. ಹಾಗಾಗಿ ಪಂದ್ಯದಲ್ಲಿ ಕನಿಷ್ಠ ಒಂದೇ ಒಂದು ಸ್ಲೆಡ್ಜ್‌ ಆದರೂ ಇದ್ದೇ ಇರುತ್ತದೆ. ಇಂಥಾ ಘಟನೆಗಳು ನಡೆಯುವುದು ಸಾಮಾನ್ಯ. ಸುಮ್ಮನೆ ಬೌಲ್‌ ಹಾಗೂ ಫೀಲ್ಡ್‌ ಮಾಡಿ ಮರಳಲು ಅವರೇನೂ ರೋಬೊಟ್‌ಗಳಲ್ಲ. ಆದರೆ, ನೀವು ಒತ್ತಡದ ಸನ್ನಿವೇಶವನ್ನು ಹೇಗೆ ನಿಭಾಯಿಸುತ್ತೀರಿ ಹಾಗೂ ಹೇಗೆ ವರ್ತಿಸುತ್ತೀರಿ ಎಂಬುದೇ ಟೆಸ್ಟ್ ಕ್ರಿಕೆಟ್," ಎಂದು ಗಂಭೀರ್‌ ಸ್ಟಾರ್‌ ಸ್ಪೋರ್ಟ್ಸ್ ಚರ್ಚೆ ವೇಳೆ ಹೇಳಿದ್ದರು. "ಓಡಿಐ ಕ್ರಿಕೆಟ್‌ನಲ್ಲಿ ಇಂಥಾ ಹೊಡೆತಕ್ಕೆ ಕೈ ಹಾಕಿದ್ದರೆ, ಈ ಬಗ್ಗೆ ಯಾರು ಟೀಕೆ ಮಾಡುತ್ತಿರಲಿಲ್ಲ. ಆದರೆ ಟೆಸ್ಟ್‌ ಪಂದ್ಯದ ಇಂಥಾ ಕಠಿಣ ಸನ್ನಿವೆಶದಲ್ಲಿ ಈ ಶಾಟ್‌ ಹೊಡೆಯುವ ಅಗತ್ಯವಿರಲಿಲ್ಲ. ಇಂಥಾ ಸಂದರ್ಭದಲ್ಲಿ ನಾನು ಶೌರ್ಯ ಮತ್ತು ಮೂರ್ಖತನದ ನಡುವೆ ಬಹಳ ತೆಳುವಾದ ಗೆರೆ ಇದೆ ಎಂದು ಭಾವಿಸುತ್ತೇನೆ. ಖಂಡಿತಾ ಇದು ಶೌರ್ಯವಲ್ಲ, ಇದು ಮೂರ್ಖತನ," ಎಂದು ಪಂತ್‌ ವಿರುದ್ಧ ಗಂಭೀರ್‌ ಕಿಡಿ ಕಾರಿದ್ದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3zyRPkG

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...