ಹೊಸದಿಲ್ಲಿ: ಪ್ರಧಾನಿ ಅವರ ಪಂಜಾಬ್ ಭೇಟಿ ವೇಳೆ ಬುಧವಾರ ನಡೆದ ಗಂಭೀರ ಭದ್ರತಾ ಲೋಪಕ್ಕೆ ರಾಜ್ಯ ಪೊಲೀಸ್ ಅಧಿಕಾರಿಗಳ ಉದಾಸೀನವೇ ಕಾರಣ ಎಂದು ಹೇಳಲಾಗಿದ್ದು, ಅವರ ವಿರುದ್ಧ ಕೇಂದ್ರ ಸರಕಾರ ಕಠಿಣ ಕ್ರಮಕ್ಕೆ ಚಿಂತನೆ ನಡೆಸಿದೆ. ಪಾಕಿಸ್ತಾನಕ್ಕೆ ಹೊಂದಿಕೊಂಡಿರುವ ಪಂಜಾಬ್ ಗಡಿ ಅತಿ ಸೂಕ್ಷ್ಮ ಪ್ರದೇಶ ಎಂದೇ ಗುರುತಿಸಲಾಗಿದೆ. ಈ ಗಡಿಯಿಂದ ಕೇವಲ 50 ಕಿ.ಮೀ ಅಂತರದ ಫಿರೋಜ್ಪುರದಲ್ಲಿ ಬುಧವಾರ ಪ್ರಧಾನಿ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಮಹತ್ವದ ಸಮಾವೇಶಕ್ಕೆ ಭಟಿಂಡಾದಿಂದ ರಸ್ತೆ ಮಾರ್ಗವಾಗಿ ಆಗಮಿಸಿದ ಮೋದಿ ಅವರಿಗೆ ಮಾರ್ಗ ಮಧ್ಯೆ ರೈತ ಪ್ರತಿಭಟನೆಯಿಂದ ತಡೆಬಿದ್ದಿತು. 20 ನಿಮಿಷ ಕಾಯ್ದು ನಡು ದಾರಿಯಿಂದಲೇ ದಿಲ್ಲಿಗೆ ವಾಪಸಾಗಿದ್ದರು. ಗಂಭೀರವಾದ ಈ ಭದ್ರತಾ ವೈಫಲ್ಯದ ಹೊಣೆ ಯಾರದ್ದು ಎನ್ನುವ ಚರ್ಚೆ ಮುಂದುವರಿದಿದೆ. ಪ್ರಧಾನಿ ಪ್ರಯಾಣಿಸುವ ಮಾರ್ಗ ಕೊನೆ ಘಳಿಗೆಯಲ್ಲಿ ಬದಲಾದದ್ದರಿಂದ ಈ ಎಡವಟ್ಟು ಘಟಿಸಿದೆ ಎಂದು ಕಾಂಗ್ರೆಸ್ ನೇತೃತ್ವದ ಪಂಜಾಬ್ ಸರಕಾರ ಸಬೂಬು ಹೇಳಿದೆ. ಆದರೆ, ಪ್ರಧಾನಿಯಂತಹ ಗಣ್ಯಾತಿಗಣ್ಯರ ವಿಷಯದಲ್ಲಿ ಸಮರ್ಪಕ ಸಂಯೋಜನೆ ಇಲ್ಲದೇ ಎಲ್ಲವೂ ಬದಲಾಗಲು ಸಾಧ್ಯವೇ ಎನ್ನುವ ಪ್ರಶ್ನೆ ಮೂಡಿದೆ. ರಾಜ್ಯ ಸರಕಾರ ಮತ್ತು ಪಂಜಾಬ್ ಪೊಲೀಸರ ಹೊಣೆಗೇಡಿ ತನವೇ ಈ ಭದ್ರತಾ ವೈಫಲ್ಯಕ್ಕೆ ಸ್ಪಷ್ಟ ಕಾರಣ ಎಂದು ಕೇಂದ್ರ ಗೃಹ ಸಚಿವಾಲಯ ದೂರಿದೆ. ಪೊಲೀಸ್ ವೈಫಲ್ಯಕ್ಕೆ ಕಡತಗಳ ಸಾಕ್ಷಿ ವಿಶೇಷ ಭದ್ರತಾ ಪಡೆಯು ಪ್ರಧಾನಿಯವರ ಆದ್ಯತೆಯ ಭದ್ರತಾ ಹೊಣೆಗಾರಿಕೆಯನ್ನು ನಿಭಾಯಿಸುತ್ತದೆ. ಪಂಜಾಬ್ ಪ್ರವಾಸ ಸಂದರ್ಭದಲ್ಲಿಯೂ 2 ದಿನ ಮೊದಲೇ ಎಸ್ಪಿಜಿ, ರಾಜ್ಯ ಪೊಲೀಸರನ್ನು ಸಂಪರ್ಕಿಸಿ ಮಾರ್ಗ ಸಿದ್ಧತೆ ಅಂತಿಮಗೊಳಿಸಿತ್ತು. ಮೊದಲ ವೇಳಾಪಟ್ಟಿ ಪ್ರಕಾರ, ದಿಲ್ಲಿಯಿಂದ ಭಟಿಂಡಾಕ್ಕೆ ವಿಮಾನದಲ್ಲಿ ಬಂದಿಳಿಯುವ ಪ್ರಧಾನಿ ಮೋದಿ ಅವರು, ಅಲ್ಲಿಂದ ಮುಂದೆ ಹೆಲಿಕಾಪ್ಟರ್ ಮೂಲಕ ಫಿರೋಜ್ಪುರಕ್ಕೆ ತೆರಳಬೇಕಿತ್ತು. ಆದರೆ ಮಳೆಯಿಂದ ಹವಾಮಾನ ಕೆಟ್ಟಿದ್ದರಿಂದ ಭಟಿಂಡಾದಲ್ಲಿ ಸ್ವಲ್ಪ ಹೊತ್ತು ಕಾಯ್ದ ಪ್ರಧಾನಿ, ರಸ್ತೆ ಮೂಲಕ 100 ಕಿ.ಮೀ ದೂರದ ಕಾರ್ಯಕ್ರಮ ಸ್ಥಳಕ್ಕೆ ತೆರಳಲು ನಿರ್ಧರಿಸಿ ಪ್ರಯಾಣ ಮುಂದುವರಿಸಿದ್ದರು. ಎರಡು ದಿನ ಮೊದಲೇ ಈ ತುರ್ತು ಬಳಕೆ ಮಾರ್ಗ ಕೂಡ ಪರಿಶೀಲನೆಗೆ ಒಳಪಟ್ಟು ಅಂತಿಮಗೊಂಡಿತ್ತು. ಎಸ್ಪಿಜಿಯು ರಾಜ್ಯ ಪೊಲೀಸರ ಜತೆ ಈ ಮಾರ್ಗದ ಸಮೀಕ್ಷೆ ನಡೆಸಿ, ಸೂಕ್ಷ್ಮ ಸ್ಥಳಗಳ ಪಟ್ಟಿ ಮಾಡಿ ಪೊಲೀಸ್ ಭದ್ರತೆ ಕಲ್ಪಿಸುವ ತೀರ್ಮಾನವೂ ಆಗಿತ್ತು ಎಂದು ಭದ್ರತಾ ಸಂಪರ್ಕ ಸುಧಾರಣೆ (ಎಎಸ್ಎಲ್) ಕಡತಗಳು ತಿಳಿಸಿವೆ. ''ಪ್ರಧಾನಿ ಪ್ರಯಾಣದ ಹಿಂದಿನ ದಿನ ಅಂದರೆ ಜ. 4 ರಂದು ಈ ಮಾರ್ಗದಲ್ಲಿ ಬೆಂಗಾವಲು ವಾಹನಗಳ ತಾಲೀಮು ಕೂಡ ನಡೆದಿತ್ತು. ಇದೆಲ್ಲವೂ ಪಂಜಾಬ್ ಡಿಜಿಪಿ ಸಂಯೋಜನೆಯಲ್ಲಿಯೇ ನಡೆದಿತ್ತು. ಹೀಗಿರುವಾಗ ಕೊನೆ ಘಳಿಗೆಯಲ್ಲಿ ಪ್ರಧಾನಿ ಪ್ರಯಾಣದ ಮಾರ್ಗ ಬದಲಾದ ಬಗ್ಗೆ ನಮ್ಮ ಅರಿವಿಗೆ ಬಂದಿಲ್ಲ ಎಂದು ರಾಜ್ಯ ಪೊಲೀಸರು ಹೇಳುವುದರಲ್ಲಿ ಅರ್ಥವೇ ಇಲ್ಲ. ಇಷ್ಟೊಂದು ದೊಡ್ಡ ವ್ಯಕ್ತಿಯ ಪ್ರಯಾಣದ ಮಾರ್ಗ ತಮಗೆ ತಿಳಿದೇ ಇಲ್ಲಎಂದು ಡಿಜಿಪಿ ಹೇಳಿದರೆ, ಅದು ಹೊಣೆಗೇಡಿತನವಾಗುತ್ತದೆ. ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು,'' ಎಂದು ಗೃಹ ಸಚಿವಾಲಯ ಅಧಿಕಾರಿಗಳು ಹೇಳಿದ್ದಾರೆ. ಡಿಜಿಪಿ ಹೊಣೆ ಪ್ರಧಾನಿ ರಾಜ್ಯದ ಗಡಿಯೊಳಕ್ಕೆ ಆಗಮಿಸಿದ ತರುವಾಯ ಅವರ ಸುರಕ್ಷತೆಯ ಸಂಪೂರ್ಣ ಹೊಣೆ ರಾಜ್ಯ ಪೊಲೀಸರದ್ದು. ಭದ್ರತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಹೊಣೆಗಾರಿಕೆ ಡಿಜಿಪಿಗೆ ಸೇರಿದ್ದು. ಇಷ್ಟಿದ್ದರೂ ಕೂಡ ಪ್ರಧಾನಿ ಪ್ರಯಾಣಿಸುವ ಮಾರ್ಗದಲ್ಲಿ ಪ್ರತಿಭಟನಾಕಾರರು ಬೀಡುಬಿಟ್ಟಿರುವ ಬಗ್ಗೆ ನಿಖರ ಮಾಹಿತಿ ನೀಡುವಲ್ಲಿ ಪಂಜಾಬ್ ಪೊಲೀಸ್ ಕಂಟ್ರೋಲ್ ರೂಮ್ ವಿಫಲಗೊಂಡಿದೆ. ''ಕಂಟ್ರೋಲ್ ರೂಮ್ ಶ್ರದ್ಧೆಯಿಂದ ಕೆಲಸ ಮಾಡಿದ್ದರೆ ಪ್ರಧಾನಿ ಆ ಮಾರ್ಗದಲ್ಲಿ ಬಂದು ಸಿಕ್ಕಿ ಬೀಳುವುದು ತಪ್ಪುತ್ತಿತ್ತು,'' ಎಂದು ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ. ಮುಖ್ಯ ಕಾರ್ಯದರ್ಶಿ ನಾಪತ್ತೆ ಪ್ರಧಾನಿ ಬೆಂಗಾವಲು ಪಡೆಯ ಜತೆಗೆ ಆ ದಿನ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿ ಅವರು ಪ್ರಯಾಣಿಸಬೇಕಿತ್ತು. ನಡು ರಸ್ತೆಯಲ್ಲಿ ಪ್ರಧಾನಿ ಸಿಕ್ಕಿಬಿದ್ದಾಗ ಆ ಇಬ್ಬರು ಹಿರಿಯ ಅಧಿಕಾರಿಗಳು ಸ್ಥಳದಲ್ಲಿ ಇರಲೇ ಇಲ್ಲ ಎಂದು ಮೂಲಗಳು ಖಚಿತಪಡಿಸಿವೆ. ಇದು ಸರಕಾರದ ಬೇಜವಾಬ್ದಾರಿಯ ನಡೆ ಎಂದು ವ್ಯಾಖ್ಯಾನಿಸಲಾಗಿದೆ. ಈ ಆರೋಪವನ್ನು ಅಲ್ಲಗಳೆದಿರುವ ಪಂಜಾಬ್ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ, ''ಕೇಂದ್ರ ಸರಕಾರ ರಾಜಕೀಯ ಕಾರಣಕ್ಕೆ ಭದ್ರತಾ ಲೋಪದ ಆರೋಪ ಮಾಡುತ್ತಿದೆ. ಅಂತಹ ಯಾವುದೇ ಲೋಪ ನಮ್ಮಿಂದ ಆಗಿಲ್ಲ. ತನಿಖೆ ನಡೆಸಲು ಸರಕಾರ ಸಿದ್ಧವಿದೆ,'' ಎಂದಿದ್ದಾರೆ.
from India & World News in Kannada | VK Polls https://ift.tt/3zxqYFJ