
ಬೆಂಗಳೂರು: ನಗರದ ಥಣಿಸಂದ್ರದ ಸಾರಾಯಿಪಾಳ್ಯದ ಸಾದಿಕ್ ಲೇಔಟ್ನಲ್ಲಿ ಕೊರೊನಾ ವೈರಸ್ ಸೋಂಕಿಗೆ ಸಂಬಂಧಿಸಿದಂತೆ ಆರೋಗ್ಯ ತಪಾಸಣೆ ಮಾಡಲು ತೆರಳಿದ್ದ ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ನೌಕರರ ಮೇಲೆ ಮುಸ್ಲಿಮರ ಗುಂಪೊಂದು ಹಲ್ಲೆನಡೆಸಿದೆ. ಇಡೀ ದೇಶವೇ ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿರುವ ಸಂಕಷ್ಟದ ಸಂದರ್ಭದಲ್ಲಿ ತಮ್ಮ ಜೀವ ಒತ್ತೆಯಿಟ್ಟು ಕರ್ತವ್ಯ ನಿರ್ವಹಿಸುತ್ತಿರುವ ಆರೋಗ್ಯ ಇಲಾಖೆ ನೌಕರರ ಮೇಲಿನ ಹಲ್ಲೆಗೆ ದೇಶಾದ್ಯಂತ ಖಂಡನೆ ವ್ಯಕ್ತವಾಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಮತ್ತು ಕರ್ತವ್ಯನಿರತ ನೌಕರರಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿಘಟನೆ ಕುರಿತು ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಎಸಿಪಿ ತಬ್ರಕ್ ಫಾತಿಮಾ ತನಿಖೆ ನಡೆಸಲಿದ್ದಾರೆ. ಕರ್ತವ್ಯ ನಿರ್ವಹಿಸುವ ಆರೋಗ್ಯ ಕಾರ್ಯಕರ್ತೆಯರಿಗೆ ಅಗತ್ಯ ರಕ್ಷಣೆ ನೀಡಲಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದರು. ಉಪ ಮುಖ್ಯಮಂತ್ರಿ ಭೇಟಿ ಘಟನೆ ಹಿನ್ನೆಲೆಯಲ್ಲಿಉಪ ಮುಖ್ಯಮಂತ್ರಿ ಡಾ.ಸಿ.ಎನ್ ಅಶ್ವ್ವತ್ಥನಾರಾಯಣ ಅವರು ಹೆಗಡೆ ನಗರದಲ್ಲಿರುವ ಆಶಾ ಕಾರ್ಯಕರ್ತೆ ಕೃಷ್ಣವೇಣಿ ನಿವಾಸಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದರು. ಆಶಾ ಕಾರ್ಯಕರ್ತೆಯ ಕುಟುಂಬಕ್ಕೆ ಧೈರ್ಯತುಂಬಿ ತಮ್ಮ ಕೆಲಸಗಳಿಗೆ ಯಾವುದೇ ರೀತಿ ತೊಂದರೆಯಾಗದಂತೆ ಸೂಕ್ತ ಕ್ರಮ ಜರುಗಿಸುವುದಾಗಿಯೂ ಭರವಸೆ ನೀಡಿದರು. ''ಆಶಾ ಕಾರ್ಯಕರ್ತೆ ಪುಷ್ಪವೇಣಿ ಮತ್ತು ಇನ್ನಿತರ ಆರು ಮಂದಿ ಸಾದಿಕ್ ನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆ ಪ್ರದೇಶದಲ್ಲಿ ಕೋವಿಡ್-19 ಸೋಂಕಿನ ರೋಗಿ ಇದ್ದ ಕಾರಣ ತಪಾಸಣೆ ನಡೆಸಲಾಗುತ್ತಿತ್ತು. ಪ್ರಾಣವನ್ನೇ ಒತ್ತೆಯಿಟ್ಟು ಕೆಲಸ ಮಾಡುತ್ತಿದ್ದ ಆರೋಗ್ಯ ಕಾರ್ಯಕರ್ತೆಯರ ಕರ್ತವ್ಯಕ್ಕೆ ಅಡ್ಡಿಪಡಿಸುವ ರೀತಿಯಲ್ಲಿಮಸೀದಿಯ ಮೈಕ್ನಲ್ಲಿ ಘೋಷಣೆ ಮಾಡಲಾಗಿದೆ. ಹೇಳದೇ, ಕೇಳದೆ ಯಾರೋ ಸರಕಾರಿ ನೌಕರರು ಬಂದಿದ್ದಾರೆ. ಅವರಿಗೆ ಕೆಲಸ ಮಾಡಲು ಅವಕಾಶ ನೀಡಬೇಡಿ. ಕೂಡಲೇ ಅವರನ್ನು ಕಳುಹಿಸಿ ಎಂದು ಮೈಕ್ನಲ್ಲಿ ಪ್ರಚೋದನಾಕಾರಿ ಘೋಷಣೆ ಮಾಡಿದ್ದಾರೆ,'' ಎಂದು ಅಶ್ವ್ವತ್ಥನಾರಾಯಣ ಅವರು ಘಟನೆಯನ್ನು ವಿವರಿಸಿದರು. ಆಗಿದ್ದೇನು? ಥಣಿಸಂದ್ರ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರಲ್ಲಿಕೋವಿಡ್- 19 ಸೋಂಕು ಕಾಣಿಸಿಕೊಂಡಿದೆ. ಆರೋಗ್ಯ ಇಲಾಖೆ ಅಧಿಕಾರಿಗಳ ಸೂಚನೆ ಮೇರೆಗೆ ಇಡೀ ಪ್ರದೇಶದಲ್ಲಿಮನೆ-ಮನೆಗೆ ತೆರಳಿ, ಸೋಂಕಿತರ ಸಂಪರ್ಕಕ್ಕೆ ಬಂದವರ ಮತ್ತು ಅನಾರೋಗ್ಯಕ್ಕೀಡಾದವರ ತಪಾಸಣೆ ನಡೆಸಲು ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಇಲಾಖೆ ನೌಕರರು ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿದ್ದರು. ಬುಧವಾರ ಮಧ್ಯಾಹ್ನ ಸಾದಿಕ್ ಲೇಔಟ್ಗೆ ತೆರಳಿದ್ದ ವೇಳೆ ವ್ಯಕ್ತಿಯೊಬ್ಬ ಬಂದು ಪ್ರಶ್ನೆ ಮಾಡಿದ್ದಾನೆ. ಮಾಹಿತಿ ಕಲೆ ಹಾಕಲು ಸರಕಾರದ ಆದೇಶವಿದೆ ಎಂದು ಹೇಳಿದಾಗ, ಮೈಕ್ನಲ್ಲೇ ಸಾರ್ವಜನಿಕರಿಗೆ ಘೋಷಣೆ ಮಾಡಿ ತಿಳಿಸುತ್ತೇನೆ ಎಂದು ಹೇಳಿ, ಪ್ರಾರ್ಥನಾ ಮಂದಿರದ ಮೈಕ್ನಲ್ಲಿ ಘೋಷಣೆ ಮಾಡಲಾಗಿದೆ. ಕೂಡಲೇ ನೂರಾರು ಜನ ಸ್ಥಳಕ್ಕೆ ಧಾವಿಸಿ ಆರೋಗ್ಯ ಇಲಾಖೆ ನೌಕರರನ್ನು ಗುಂಪುಗೂಡಿ ದಿಗ್ಬಂಧನ ವಿಧಿಸಿದ್ದಾರೆ. 'ಇಲ್ಲಿಗೆ ಬರಲು ನಿಮಗೆ ಯಾರು ಹೇಳಿದ್ದು' ಎಂದು ಗಲಾಟೆ ಮಾಡಿ, ದೌರ್ಜನ್ಯ ನಡೆಸಿ ದಾಖಲೆ ಪತ್ರಗಳನ್ನು ಕಸಿದುಕೊಂಡಿದ್ದಾರೆ. ಮೊಬೈಲ್ ಫೋನ್ ಕಿತ್ತುಕೊಂಡು ಬೆದರಿಕೆ ಹಾಕಿದ್ದಾರೆ. ಇದರಿಂದ ಆಘಾತಗೊಂಡ ನೌಕರರು ಸ್ಥಳದಿಂದ ಹೊರಟು ಹೋಗಿದ್ದಾರೆ. ಕಣ್ಣೀರಿಟ್ಟ ಆಶಾ ಕಾರ್ಯಕರ್ತೆ ಘಟನೆ ಕುರಿತು ವಿವರಣೆ ನೀಡಿದ ಆಶಾ ಕಾರ್ಯಕರ್ತೆ ಕೃಷ್ಣವೇಣಿ ಕಣ್ಣೀರಿಟ್ಟರು. ಜಾತಿ, ಧರ್ಮ ಮೀರಿ ಅವರ ಆರೋಗ್ಯದ ಒಳಿತಿಗಾಗಿ ಬಂದಿದ್ದೇವೆ. ಆದರೆ, ನಮ್ಮ ಮೇಲೆಯೇ ದೌರ್ಜನ್ಯ ನಡೆಸಿದ್ದಾರೆ ಎಂದವರು ಬೇಸರದಿಂದ ಹೇಳಿದರು. ಬಂಟ್ವಾಳದಲ್ಲೂಅಡ್ಡಿ ಬಂಟ್ವಾಳ(ದ.ಕ.): ಆರೋಗ್ಯ ಸಹಾಯಕಿಯರು ಹಾಗೂ ಆಶಾ ಕಾರ್ಯಕರ್ತೆಯರು ಕೋವಿಡ್-19 ಕೆಲಸಕ್ಕೆ ತೆರಳುವ ವೇಳೆ ಬಂಟ್ವಾಳ ತಾಲೂಕಿನ ಕೆಲವು ಕಡೆಗಳಲ್ಲಿಕರ್ತವ್ಯಕ್ಕೆ ಅಡ್ಡಿ ಮಾಡಿರುವುದು ಗಮನಕ್ಕೆ ಬಂದಿದೆ. ಮಧ್ಯಪ್ರದೇಶ ಮುಂತಾದ ಬೇರೆ ಬೇರೆ ರಾಜ್ಯಗಳಲ್ಲೂಇಂಥ ಘಟನೆಗಳು ನಡೆದಿವೆ. --- "ನಾನು ಕೈಮುಗಿದು ಪ್ರಾರ್ಥನೆ ಮಾಡುತ್ತೇನೆ. ಆಶಾ ಕಾರ್ಯಕರ್ತೆಯರು ನಿಮ್ಮ ಸುರಕ್ಷತೆ ದೃಷ್ಟಿಯಿಂದಲೇ ಭೇಟಿ ನೀಡಿದ್ದರು ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ನೀವೇ ಹೊರಬಂದು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ. -ಬಿ.ಎಸ್ ಯಡಿಯೂರಪ್ಪ , ಮುಖ್ಯಮಂತ್ರಿ ---- "ಕೋವಿಡ್-19 ಸಂಬಂಧ ಕರ್ತವ್ಯ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರು ಹಾಗೂ ಇತರ ಸಿಬ್ಬಂದಿಯ ಕೆಲಸಕ್ಕೆ ಅಡ್ಡಿಪಡಿಸಿ, ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಪೊಲೀಸ್ ಇಲಾಖೆ ಸೂಕ್ತ ಕಾನೂನು ಕ್ರಮ ಜರುಗಿಸಲಿದೆ." - ಡಾ. ಸಿ.ಎನ್.ಅಶ್ವತ್ಥನಾರಾಯಣ, ಉಪ ಮುಖ್ಯಮಂತ್ರಿ -- "ಹಲ್ಲೆನಡೆಸಿದ ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ. ಎಸಿಪಿ ನೇತೃತ್ವದಲ್ಲಿತನಿಖೆ ನಡೆಸಲಾಗುತ್ತಿದೆ. ಈಗಾಗಲೇ ಪ್ರಕರಣದ ಸಂಬಂಧ ಮೂವರನ್ನು ವಶಕ್ಕೆ ಪಡೆಯಲಾಗಿದೆ." -ಭಾಸ್ಕರ್ ರಾವ್, ಪೊಲೀಸ್ ಆಯುಕ್ತ ----- "ಆಶಾ ಕಾರ್ಯಕರ್ತೆಯರ ಮೇಲೆ ನಡೆದ ಹಲ್ಲೆಖಂಡನೀಯ. ನಾವೆಲ್ಲರೂ ಒಗ್ಗಟ್ಟಿನಿಂದ ಕೊರೊನಾ ವಿರುದ್ಧ ಹೋರಾಡಬೇಕು. ಆರೋಗ್ಯ ಕಾರ್ಯಕರ್ತರಿಗೆ ಎಲ್ಲರೂ ಸಹಕಾರ ನೀಡಬೇಕು." - ಯು ಟಿ ಖಾದರ್, ಮಾಜಿ ಸಚಿವ 'ಆರೋಗ್ಯ ತಪಾಸಣೆಗೆ ಬಂದವರ ಮೇಲೆ ಹಲ್ಲೆನಡೆಸಿದ್ದು ತಪ್ಪು. ಕೊರೊನಾ ನಿಗ್ರಹಿಸಲು ಎಲ್ಲರೂ ಸಹಕರಿಸಬೇಕು.' - ಜಮೀರ್ ಅಹಮದ್, ಶಾಸಕ
from India & World News in Kannada | VK Polls https://ift.tt/2X4cnQM