ಬೆಂಗಳೂರು: ರೆಡ್ ಝೋನ್ನಲ್ಲಿರುವ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಸರಕಾರ ಲಾಕ್ಡೌನ್ ನಿಯಮ ಸಡಿಲಿಸುತ್ತಿದ್ದಂತೆ ಕೊರೊನಾ ಸೋಂಕಿನ ಪ್ರಕರಣ ಹೆಚ್ಚಿರುವುವುದು ಆತಂಕಕ್ಕೆ ಕಾರಣವಾಗಿದೆ. ಕಳೆದ ನಾಲ್ಕು ದಿನದಲ್ಲಿ ರಾಜ್ಯದಲ್ಲಿ82 ಪ್ರಕರಣಗಳು ಕಾಣಿಸಿಕೊಂಡಿವೆ. ಇದರಲ್ಲಿ32 ಬೆಂಗಳೂರಿನದ್ದು. ಆರೋಗ್ಯ ತಜ್ಞರ ಸಲಹೆ ಹೊರತಾಗಿಯೂ ಸರಕಾರ ನಿಯಮ ಸಡಿಲಿಸಿರುವುದು ಇದಕ್ಕೆ ಕಾರಣ ಎಂಬ ಆಪಾದನೆ ಇದೆ. ಲಾಕ್ಡೌನ್ ನಿಯಮ ಸಡಿಲಾದ ಬಳಿಕ ಜನರು ಬೇಕಾಬಿಟ್ಟಿ ಓಡಾಟ ಆರಂಭಿಸಿರುವಂತೆ ಕಾಣುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಸೋಂಕಿತರ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ವರದಿಯಾದ ಎರಡು ಪ್ರಕರಣಗಳಲ್ಲಿ ಪ್ರಾಥಮಿಕ ಸಂಪರ್ಕದ ಪತ್ತೆಯಾಗಿಲ್ಲ. ಇದು ಆರೋಗ್ಯ ಇಲಾಖೆ ಅಧಿಕಾರಿಗಳಲ್ಲಿ ತೀವ್ರ ಕಳವಳ ಸೃಷ್ಟಿಸಿದೆ. ಜತೆಗೆ ಕಂಟೈನ್ಮೆಂಟ್ ಝೋನ್ಗಳಿಂದ ನಾಗರಿಕರು ಆಚೆಗೆ ಬರುತ್ತಿದ್ದಾರೆ. ಪಾದರಾಯನಪುರ, ಹೊಂಗಸಂದ್ರದಂಥ ತೀವ್ರ ನಿಗಾದಲ್ಲಿರುವ ಪ್ರದೇಶಗಳನ್ನು ಬಿಟ್ಟರೆ ಉಳಿದೆಡೆ ಲಾಕ್ಡೌನ್ ಬಿಗಿ ಅಷ್ಟೊಂದಿಲ್ಲ. ಸಾಮಾನ್ಯ ಸಂದರ್ಭದ ರೀತಿ ಜನರು ಓಡಾಟ ನಡೆಸಿದ್ದಾರೆ. ವಾಹನಗಳ ಸಂಚಾರವಂತೂ ಟ್ರಾಫಿಕ್ ಜಾಮ್ ಆಗುವಷ್ಟರ ಮಟ್ಟಿಗೆ ಆಗಿದೆ. ಹೀಗಾಗಿ ಬಿಗಿ ಸಡಿಲವಾದಷ್ಟು ಸೋಂಕು ಉಲ್ಬಣವಾಗುತ್ತದೆ ಎಂಬುದಕ್ಕೆ ಈ ಮೂರು ದಿನಗಳಲ್ಲಿ ಕಂಡು ಬಂದ ಪ್ರಕರಣಗಳೇ ಉದಾಹರಣೆಯಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯ ಸರಕಾರ ಎಲ್ಲ ಕ್ಷೇತ್ರಗಳಿಗೆ ಲಾಕ್ಡೌನ್ ನಿಯಮ ಉಲ್ಲಂಘಿಸುವ ಅವಶ್ಯಕತೆ ಇಲ್ಲ ಎಂಬುದು ತಜ್ಞರ ಅಭಿಪ್ರಾಯ. ಕ್ವಾರಂಟೈನ್ ಅವಧಿ ಮುಗಿಸಿದವರಲ್ಲಿಪಾಸಿಟಿವ್ ಗುಣ ಕಾಣಿಸಿಕೊಂಡಿಲ್ಲಎಂಬ ಕಾರಣಕ್ಕೆ ಅವರು ಅಪಾಯದಿಂದ ಹೊರತಲ್ಲ. ಅಂಥವರಲ್ಲಿ ಮರಳಿ ರೋಗ ಲಕ್ಷಣ ಕಾಣಿಸಿಕೊಳ್ಳಬಹುದು. ಕೇರಳದಲ್ಲಿ ಕ್ವಾರಂಟೈನ್ ಅವಧಿ ಪೂರೈಸಿದವರಲ್ಲಿ19 ಜನರಿಗೆ ಪಾಸಿಟಿವ್ ಕಾಣಿಸಿಕೊಂಡಿದೆ. ಹೀಗಾಗಿ ಇನ್ನು ಕೆಲವು ದಿನ ಲಾಕ್ಡೌನ್ ಬಿಗಿಗೊಳಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ. ಸಡಿಲಿಕೆಗೆ ಎಚ್ ಕೆ ಪಾಟೀಲ್ ಆಕ್ಷೇಪ ಲಾಕ್ ಡೌನ್ ಸಡಿಲಿಕೆ ದುರಂತಕ್ಕೆ ಕಾರಣವಾಗಲಿದ್ದು, ಈ ನಿರ್ಧಾರ ವಾಪಸ್ ಪಡೆಯಬೇಕೆಂದು ಮಾಜಿ ಸಚಿವ ಎಚ್.ಕೆ. ಪಾಟೀಲ್ ಆಗ್ರಹಿಸಿದ್ದಾರೆ. ಲಾಕ್ ಡೌನ್ ಸಡಿಲಿಕೆ ನಿರ್ಣಯ ಶ್ರೀಮಂತ ವರ್ಗದ ಪರವೇ ಹೊರತು, ಆರ್ಥಿಕ ದುಸ್ಥಿತಿಯಿಂದ ಬಳಲಿರುವ ಬಡವರಿಗೆ ಅನುಕೂಲ ಆಗುವುದಿಲ್ಲ. ಈ ತೀರ್ಮಾನದ ಮೂಲಕ ರಾಜ್ಯವನ್ನು ದುರಂತಮಯ ಸನ್ನಿವೇಶ ತಂದೊಡ್ಡಿದ ಅಪಕೀರ್ತಿಗೆ ಪಾತ್ರರಾಗುತ್ತೀರಿ ಎಂದು ಅವರು ಸಿಎಂ ಯಡಿಯೂರಪ್ಪ ಅವರನ್ನು ಎಚ್ಚರಿಸಿದ್ದಾರೆ. ಹಳಿ ತಪ್ಪಿರುವ ಅರ್ಥವ್ಯವಸ್ಥೆಯನ್ನು ಮರಳಿ ಅಭಿವೃದ್ಧಿಪಥದತ್ತ ಚಲಿಸುವಂತೆ ಮಾಡಲು ಲಾಕ್ಡೌನ್ ಸಡಿಲಿಕೆ ಉಪಾಯವಾಗುವುದಿಲ್ಲ. ಅದಕ್ಕೆ ಸಮಗ್ರವಾದ ಆರ್ಥಿಕ ಚೈತನ್ಯ ತುಂಬುವ ಭ್ರಷ್ಟಾಚಾರ ಮುಕ್ತ ಹಾಗೂ ಪ್ರಾಮಾಣಿಕ, ಕಾರ್ಯಕ್ರಮಗಳ ಅವಶ್ಯಕತೆ ಇದೆ. ಲಾಕ್ ಡೌನ್ ಸಡಿಲಿಕೆ ಕ್ರಮದಿಂದ ಆರ್ಥಿಕತೆಗೆ ಚೈತನ್ಯ ಸಿಗುತ್ತದೆ ಎಂಬುದು ಒಂದು ಸುಳ್ಳು ಸಮರ್ಥನೆಯಾದೀತು ಎಂದಿದ್ದಾರೆ. ರಾಜ್ಯದಲ್ಲಿ ಲಾಕ್ಡೌನ್ ಸಡಿಲಿಕೆ ನಂತರ ಬೆಂಗಳೂರು ಮತ್ತು ಇತರೆ ಕಡೆಗಳಲ್ಲಿ ಪ್ರಕರಣಗಳ ಸಂಖ್ಯೆ ದ್ವಿಗುಣಗೊಳ್ಳುತ್ತಾ ಹೋಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
from India & World News in Kannada | VK Polls https://ift.tt/2VB7A8o