
ಹೊಸದಿಲ್ಲಿ: ಲಾಕ್ಡೌನ್ ಸಂದರ್ಭದಲ್ಲಿ ರಾಷ್ಟ್ರದ ಜನತೆ ಅತ್ಯಂತ ಶಿಸ್ತಿನಿಂದ ಮತ್ತು ಸೇವಾ ಮನೋಭಾವದಿಂದ ವಿರುದ್ಧದ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ನಾವು ಲಾಕ್ಡೌನ್ ಸಂದರ್ಭ ಮನೆಯೊಳಗೆ ಇದ್ದೇವೆ. ಆದರೆ ನಾವು ಯಾರು ಒಬ್ಬೊಂಟಿಗರಲ್ಲ. ಪ್ರತಿಯೊಬ್ಬ ಪ್ರಜೆಯೂ ರಾಷ್ಟ್ರದ ಒಟ್ಟು ಶಕ್ತಿಯಾಗಿ ಕೊರೊನಾ ಸೋಂಕನ್ನು ಹೊಡೆದೋಡಿಸಲು ಪಣ ತೊಟ್ಟಿದ್ದಾರೆ ಎಂದು ಪ್ರಧಾನಿ ವಿಡಿಯೋ ಸಂದೇಶದಲ್ಲಿ ತಿಳಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಬೆಳಗ್ಗೆ 9 ಗಂಟೆಗೆ ಲೈವ್ ಬಂದು, ವಿಡಿಯೋ ಮೂಲಕ ರಾಷ್ಟ್ರದ ಜನತೆಗೆ ಪ್ರಮುಖ ಸಂದೇಶವನ್ನು ರವಾನೆ ಮಾಡಿದರು. ಈ ಸಂದರ್ಭ ಮಾತನಾಡುತ್ತ, ಮಾರ್ಚ್ 22 ರಂದು, ಕೊರೊನಾ ಸೋಂಕಿನ ವಿರುದ್ಧ ಹೋರಾಡುತ್ತಿರುವ ವೈದ್ಯರು, ನರ್ಸ್ಗಳು, ಪೌರ ಕಾರ್ಮಿಕರು, ಪೊಲೀಸರು ಹೀಗೆ ಎಲ್ಲರಿಗೂ ಗೌರವ ಪೂರ್ಣವಾಗಿ ನಡೆದುಕೊಂಡ ರೀತಿಗೆ ಮನಸ್ಪೂರ್ತಿ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು. ಜನತಾ ಕರ್ಫ್ಯೂವನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದೀರಿ. ಸಂಜೆ 5 ಗಂಟೆಗೆ ಎಲ್ಲರೂ ಚಪ್ಪಾಳೆ ತಟ್ಟಿ, ಗಂಟೆ ಬಾರಿಸಿ ಗೌರವವನ್ನು ಸೂಚಿಸಿದ್ದೀರಿ. ಕೊರೊನಾ ವಿರುದ್ಧದ ಹೋರಾಟಕ್ಕೆ ಶಕ್ತಿ ತುಂಬಿದ್ದೀರಿ. ಇದು ರಾಷ್ಟ್ರದ ಒಗ್ಗಟ್ಟನ್ನು ಹೆಚ್ಚಿಸಿದೆ ಎಂದು ಮೋದಿ ಹೇಳಿದರು. ನಾವು ಕೊರೊನಾ ವೈರಸ್ ಸೃಷ್ಟಿಸಿದ ಕತ್ತಲೆಯಿಂದ ಬೆಳಕಿನೆಡೆಗೆ ಸಾಗುತ್ತಿದ್ದೇವೆ. ಕೋಟ್ಯಂತರ ಭಾರತೀಯರು ಇವತ್ತು ಮನೆಯೊಳಗೆ ಕುಳಿತಿದ್ದಾರೆ. ಈ ಸಂದರ್ಭ ಕೆಲವರಿಗೆ ಪ್ರಶ್ನೆಗಳು ಮೂಡಬಹುದು. ಕೋವಿಡ್-19 ವಿರುದ್ಧ ಎಲ್ಲರು ಮನೆಯೊಳಗಿದ್ದು ಹೇಗೆ ಹೋರಾಟ ಮಾಡಲು ಸಾಧ್ಯ ಎಂದು? ಅಂತಹ ಪ್ರಶ್ನೆಗಳು ನಿಮ್ಮ ಮನಸ್ಸಿನಲ್ಲಿ ಬಂದಿರಬಹುದು. ಆದರೆ ಒಂದು ನೆನಪಿಟ್ಟುಕೊಳ್ಳಿ ನಾವ್ಯಾರು ಒಬ್ಬಂಟಿಗರಲ್ಲ. 130 ಕೋಟಿ ಭಾರತೀಯರ ಶಕ್ತಿ ನಮ್ಮ ಪ್ರತಿಯೊಬ್ಬರಲ್ಲು ಇದೆ ಎಂದು ಪ್ರಧಾನಿ ಮೋದಿ ಕೊರೊನಾ ವೈರಸ್ ವಿರುದ್ಧದ ಗೆಲುವಿನ ವಿಶ್ವಾಸ ವ್ಯಕ್ತ ಪಡಿಸಿದರು. ಏಪ್ರಿಲ್ 5ರಂದು ಭಾನುವಾರ ರಾತ್ರಿ 9 ಗಂಟೆಗೆ ಸರಿಯಾಗಿ ಮನೆಯ ಎಲ್ಲ ವಿದ್ಯುತ್ ದೀಪಗಳನ್ನು ಆರಿಸಿ 9 ನಿಮಿಷಗಳ ಕಾಲ ಆರಿಸಿ ಮತ್ತು ಆ ಸಮಯದಲ್ಲಿ ಮನೆಯ ಕಿಟಕಿ/ಬಾಲ್ಕನಿಗೆ ಬಂದು ಮೊಂಬತ್ತಿ, ದೀಪ ಅಥವಾ ಮೊಬೈಲ್ನ ಫ್ಲಾಶ್ ಲೈಟ್ ಬೆಳಗಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರದ ಜನತೆಗೆ ಕರೆ ನೀಡಿದ್ದಾರೆ. ಮೋದಿ ವಿಡಿಯೋ ಸಂದೇಶದ ಪ್ರಮುಖಾಂಶಗಳು - ಏಪ್ರಿಲ್ 5ಕ್ಕೆ ಮುಂಬಾಗಿಲು, ಕಿಟಕಿ ಅಥವಾ ಬಾಲ್ಕನಿಗೆ ಬನ್ನಿ. 9 ನಿಮಿಷಗಳ ಕಾಲ ಮೊಂಬತ್ತಿ, ಹಣತೆ, ಟಾರ್ಚ್ ಅಥವಾ ಮೊಬೈಲ್ ಫ್ಲಾಶ್ ಲೈಟ್ ಬೆಳಗಿಸಿ. ಇದು ಕೊರೊನಾ ವೈರಸ್ ಸೃಷ್ಟಿಸಿದ ಕತ್ತಲೆ ವಿರುದ್ಧ ಬೆಳಕಿನ ಸಮರ. - ಪ್ರತಿಯೊಬ್ಬರು ಒಂದೊಂದು ಹಣತೆ ಹಚ್ಚಿದರೆ ಬೆಳಕಿನ ಶಕ್ತಿ ನಮಗೆ ಅರಿವಾಗುತ್ತದೆ. ನಾವು ಯಾವುದರ ವಿರುದ್ಧ ಹೋರಾಡುತ್ತಿದ್ದೇವೆ ಎಂಬುದು ನಮಗೆ ಸ್ಪಷ್ಟವಾಗುತ್ತದೆ. - ಈ ಸಂದರ್ಭ ನನ್ನದೊಂದು ಮನವಿ ಇದೆ. ದಯವಿಟ್ಟು ಯಾರೂ ಗುಂಪಾಗಿ ಸೇರಬೇಡಿ. ರಸ್ತೆಗಳಲ್ಲಿ, ಮೈದಾನಗಳಲ್ಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಸೇರಬೇಡಿ. ಮೊಂಬತ್ತಿ ಬೆಳಗಿಸುವ ಪ್ರಕ್ರಿಯೆ ನಿಮ್ಮ ಮನೆಯ ಬಾಗಿಲು ಮತ್ತು ಬಾಲ್ಕನಿಗೆ ಮಾತ್ರ ಸೀಮಿತವಾಗಿರಬೇಕು.
from India & World News in Kannada | VK Polls https://ift.tt/3bOpEkI