ನವದೆಹಲಿ: ಮಾರಕ ಕೊರೊನಾ ವೈರಸ್ ದೇಶದಿಂದ ಇಷ್ಟು ಬೇಗ ತೊಲಗುವ ಲಕ್ಷಣ ಕಾಣುತ್ತಿಲ್ಲ. ಎಲ್ಲಾ ಅಗತ್ಯ ಕ್ರಮಗಳ ಹೊರತಾಗಿಯೂ ಈ ಮಾರಕ ವೈರಾಣು ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಈ ಮಧ್ಯೆ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಮುಖ್ಯಸ್ಥರಿಗೂ ಮಾರಕ ಕೊರೊನಾ ವೈರಸ್ ತಗುಲಿದ್ದು, ಸ್ವಯಂ ದಿಗ್ಬಂಧನ ವಿಧಿಸಿಕೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತೀಚಿಗೆ ಎಪಿ ಮಹೇಶ್ವರಿ ಮತ್ತು ಕೇಂದ್ರ ಸಚಿವ ಕೆ. ವಿಜಯ್ ಕುಮಾರ್ ನಕ್ಸಲ್ ಪೀಡಿತ ಛತ್ತೀಸ್ಗಢಕ್ಕೆ ಭೇಟಿ ನೀಡಿ ವೈಮಾನಿಕ ಸಮೀಕ್ಷೆ ನಡೆಸಿದ್ದರು. ಈ ಸಭೆಯಲ್ಲಿ 24ಕ್ಕೂ ಅಧಿಕ ಜನರು ಭಾಗವಹಿಸಿದ್ದರಿಂದ ಮಹೇಶ್ವರಿ ಅವರನ್ನೂ ಸೇರಿಸಿ ಎಲ್ಲರನ್ನೂ ಪರೀಕ್ಷೆಗೆ ಗುರಿಪಡಿಸಲಾಗಿತ್ತು. ಈ ಕುರಿತು ಖುದ್ದು ಟ್ವೀಟ್ ಮಾಡಿರುವ ಎಪಿ ಮಹೇಶ್ವರಿ, ತಮಗೆ ಕೊರೋನಾ ವೈರಸ್ ಸೋಂಕು ತಗುಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ತಾವು ಸ್ವಯಂ ದಿಗ್ಭಂಧನದಲ್ಲಿದ್ದು, ಸೂಕ್ತ ಚಿಕಿತ್ಸೆ ಪಡೆಯುತ್ತಿರುವುದಾಗಿ ಮಹೇಶ್ವರಿ ತಿಳಿಸಿದ್ದಾರೆ. ಕೊರೊನಾ ಸೋಂಕು ತಗುಲಿದ ಶಂಕೆ ಮೇಲೆ ಇತ್ತಿಚಿಗೆ ಕೇಂದ್ರ ಸಚಿವ ವಿ. ಮುರುಳಿಧರನ್ ಅವರೂ ಕೂಡ ಸ್ವಯಂ ದಿಗ್ಬಂಧನ ವಿಧಿಸಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
from India & World News in Kannada | VK Polls https://ift.tt/2XanIyF