ಬೆಂಗಳೂರು: ಕೊರೊನಾ ವಿರುದ್ಧದ ಹೋರಾಟಕ್ಕೆ ಕೆಲವು ಅತಿಯಾದ ಧಾರ್ಮಿಕ ಶ್ರದ್ಧೆ ಉಳ್ಳವರು ಹಾಗೂ ಮೂಲಭೂತವಾದಿಗಳಿಂದ ತೊಡಕಾಗುತ್ತಿದೆ ಎಂದು ಸಾಹಿತಿಗಳು, ಚಿಂತಕರನ್ನು ಒಳಗೊಂಡ ಮುಸ್ಲಿಂ ಚಿಂತಕರ ಚಾವಡಿ ಅಭಿಪ್ರಾಯಪಟ್ಟಿದೆ. ತಬ್ಲೀಘಿ ಜಮಾತ್ ಧಾರ್ಮಿಕ ಸಭೆಯಲ್ಲಿ ಭಾಗಿಯಾದವರಲ್ಲಿ ಕೊರೊನಾ ಸೋಂಕು ಪತ್ತೆಯಾದ ವಿಚಾರವಾಗಿ ನಡೆಯುತ್ತಿರುವ ಚರ್ಚೆಗಳ ಹಿನ್ನೆಲೆಯಲ್ಲಿ ಮುಸ್ಲಿಂ ಚಿಂತಕರ ಚಾವಡಿ ಪತ್ರಿಕಾ ಹೇಳಿಕೆಯ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಅಬ್ದುಲ್ ಸಲಾಮ್ ಪುತ್ತಿಗೆ, ಮುನೀರ್ ಕಾಟಿಪಳ್ಳ, ಅನೀಸ್ ಪಾಶಾ, ಡಾ. ರೆಹಮತ್ ತರೀಕೆರೆ ಡಾ. ಮುಜಾಫರ್ ಅಸಾದಿ, ರಂಜಾನ್ ದರ್ಗಾ, ಬಾನು ಮುಷ್ತಾಕ್, ಬಿ. ಪೀರ್ ಬಾಷಾ ಹಾಗೂ ಮತ್ತಿತರರನ್ನು ಒಳಗೊಂಡಿರುವ ಮುಸ್ಲಿಂ ಚಿಂತಕರ ಚಾವಡಿ ಈ ಪತ್ರಿಕಾ ಹೇಳಿಕೆಯನ್ನು ಬಿಡುಗಡೆಗೊಳಿಸಿದೆ. ಕೊರೊನಾ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಜಾತಿ, ಧರ್ಮ ಬದಿಗಿಟ್ಟು ವೈದ್ಯರು ಹಾಗೂ ಸರ್ಕಾರದ ಜೊತೆಗೆ ಎಲ್ಲರು ಕೈಜೋಡಿಸಬೇಕಾಗಿದೆ. ಆದರೆ ಉಡಾಫೆ ಹಾಗೂ ಹುಂಬತನದಿಂದ ವರ್ತನೆ ಮಾಡುವವರು ಎಲ್ಲಾ ಸಮುದಾಯದಲ್ಲೂ ಇದ್ದು ಪ್ರಜ್ಞಾವಂತರು ಅದನ್ನು ಖಂಡಿಸಬೇಕಾಗಿದೆ ಎಂದಿದೆ. ಆದರೆ ಕೆಲವು ಹುಂಬರು ಹಾಗೂ ಮೂಲಭೂತವಾದಿಗಳ ಮಾತು ಮತ್ತು ಕ್ರಿಯೆಯನ್ನು ಇಡೀ ಸಮಾಜದ ತಲೆಗೆ ಕಟ್ಟುವ ಹಾಗೂ ಅದರ ವಿರುದ್ಧ ದ್ವೇಷವನ್ನು ವ್ಯವಸ್ಥಿತವಾಗಿ ಹಬ್ಬಿಸುವ ಕೆಲಸದಲ್ಲಿ ಕೆಲವರು ತೊಡಿದ್ದಾರೆ. ಕೆಲವು ಮಾಧ್ಯಮಗಳು ಕೈಜೋಡಿಸಿವೆ ಅದು ಅಪಾಯಕಾರಿ ನಡೆ ಎಂದು ಚಿಂತಕರ ಚಾವಡಿ ಆರೋಪಿಸಿದೆ. ಜಾತಿ, ಮತಾತೀತವಾಗಿ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಎದುರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಮುಸ್ಲಿಂ ಚಿಂತಕರ ಚಾವಡಿ ಸರ್ಕಾರ ಕೈಗೊಳ್ಳುವ ಎಲ್ಲಾ ಉಪಯುಕ್ತ ಕ್ರಮಗಳನ್ನು ಬೆಂಬಲಿಸುತ್ತದೆ. ಹಾಗೂ ಮುಸ್ಲಿಮರು ಸಹನೆಯಿಂದ ಹಾಗೂ ವಿವೇಕದಿಂದ ಈ ಸನ್ನಿವೇಶವನ್ನು ಎದುರಿಸಬೇಕು ಎಂದು ವಿನಂತಿಸಿದೆ.
from India & World News in Kannada | VK Polls https://ift.tt/2wU9dog