
ಬೆಂಗಳೂರು: ಕ್ವಾರಂಟೈನ್ನಲ್ಲಿ ಇರುವವರಿಗೆ ಊಟ ತಲುಪಿಸಲು ನೀಡಲಾಗಿದ್ದ ಸರಕಾರಿ ವಾಹನದಲ್ಲಿ ಅಕ್ರಮವಾಗಿ 8 ಬಾಕ್ಸ್ ಗಳಲ್ಲಿದ್ದ ಮದ್ಯದ ಬಾಟಲಿಗಳನ್ನು ಸಾಗಿಸುವಾಗ ಎಲೆಕ್ಟ್ರಾನಿಕ್ಸಿಟಿ ಬಳಿ ಎಸಿಪಿ ವಾಸು ಅವರು ವಾಹನ ಅಡ್ಡಗಟ್ಟಿ ವಶಪಡಿಸಿಕೊಂಡಿದ್ದರು. ಈ ವೇಳೆ ಮದ್ಯ ಸಾಗಿಸುತ್ತಿದ್ದ ಆರೋಪಿಗಳು ''ಬೆಂಗಳೂರು ನಗರದ ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್ಗೆ ಸೇರಿದ ಮದ್ಯ ಇದಾಗಿದೆ. ಅವರ ಸೂಚನೆಯಂತೆ ಸಾಗಣೆ ಮಾಡಲಾಗುತ್ತಿದೆ,'' ಎಂದು ಹೇಳಿದ್ದರು. ಇದರ ವಿಡಿಯೊ ಚಿತ್ರೀಕರಣ ಮಾಡಿಕೊಂಡು ಆರೋಪಿಗಳ ವಿರುದ್ಧ ಕೇಸು ದಾಖಲಿಸಿದ್ದರು. ಆದರೆ ಈ ಕೇಸು ಕೈಬಿಡುವಂತೆ ಮುರುಗನ್ ಕೇಳಿದ್ದರು. ಇದಕ್ಕೆ ವಾಸು ಅವರು ಒಪ್ಪಿರಲಿಲ್ಲ. ಇದೇ ಜಿದ್ದಿನ ಮೇಲೆ ಮುರುಗನ್ ಅವರು ಆರೋಪಿಗಳನ್ನು ಕರೆಸಿಕೊಂಡು ''ಕೇಸು ಮುಚ್ಚಿ ಹಾಕಲು ಎಸಿಪಿ ವಾಸು 50 ಲಕ್ಷ ರೂ. ಕೇಳಿದ್ದರು,'' ಎಂಬ ಹೇಳಿಕೆ ದಾಖಲಿಸಿಕೊಂಡಿದ್ದರು. ಅದರ ಆಧಾರದ ಮೇಲೆ ವಾಸು ಅವರನ್ನು ಸೇವೆಯಿಂದ ಅಮಾನತುಗೊಳಿಸಲು ಸರಕಾರಕ್ಕೆ ಶಿಫಾರಸು ಮಾಡಲಾಗಿದೆ ಎಂಬು ಬಗ್ಗೆ ಈಗ ವಿವಾದ ಸೃಷ್ಟಿಯಾಗಿದೆ. ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್ ಕ್ರಮದ ವಿರುದ್ಧ ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಎಸಿಪಿ ವಾಸು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ''ನನಗೆ ಅನ್ಯಾಯವಾಗಿದ್ದು, ಗೃಹ ಸಚಿವರು ಮತ್ತು ಮುಖ್ಯಮಂತ್ರಿ ಅವರು ನ್ಯಾಯ ಕೊಡಿಸಬೇಕು,'' ಎಂದು ಮನವಿ ಮಾಡಿದ್ದಾರೆ. ಪ್ರತಿಕ್ರಿಯೆ ನೀಡದ ಮುರುಗನ್ ಎಸಿಪಿ ವಾಸು ಅವರ ಆರೋಪದ ಕುರಿತು ಪ್ರತಿಕ್ರಿಯೆಗೆ ಹೆಚ್ಚುವರಿ ಆಯುಕ್ತ ಮುರುಗನ್ ಅವರಿಗೆ ಕರೆ ಮಾಡಿದಾಗ ಮತ್ತು ಸಂದೇಶ ಕಳುಹಿಸಿದಾಗ ಉತ್ತರಿಸಿಲ್ಲ. ಆರೋಗ್ಯ ಇಲಾಖೆಗೆ ನೀಡಿದ್ದ ವಾಹನ ಆರೋಗ್ಯ ಇಲಾಖೆಗೆ 25 ವಾಹನಗಳನ್ನು ನೀಡಲಾಗಿತ್ತು. ಸದ್ಯ ಮದ್ಯ ಪತ್ತೆಯಾಗಿರುವ ವಾಹನದಲ್ಲಿ ನಮ್ಮ ಇಲಾಖೆ ಚಾಲಕ ಅಥವಾ ಸಿಬ್ಬಂದಿ ಇಲ್ಲ. ಹೀಗಾಗಿ, ಆ ವಾಹನ ಯಾರು ಬಳಕೆ ಮಾಡುತ್ತಿದ್ದರು ಎಂಬ ಮಾಹಿತಿ ಇಲ್ಲ. ವಾಹನದ ಮೇಲೆ ಜಿಎಸ್ಟಿ ಎಂದು ನಮೂದಿಸಿರುವ ಕಾರಣ ನಮಗೆ ಮುಜುಗರವಾಗುತ್ತಿದೆ ಎಂದು ತೆರಿಗೆ ಇಲಾಖೆಯ ಮೂಲಗಳು ತಿಳಿಸಿವೆ. ಈ ರೀತಿ ಕರ್ತವ್ಯ ನಿರ್ವಹಿಸುತ್ತಿದ್ದ ಅಧಿಕಾರಿ ವಿರುದ್ಧವೇ ಆರೋಪಿಯಿಂದ ಆರೋಪ ಮಾಡಿ ಅಮಾನತು ಮಾಡಿಸುವುದರಿಂದ ಇಲಾಖೆಯ ಇತರ ಅಧಿಕಾರಿಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಕಿರುಕುಳದ ವಾತಾವರಣದಲ್ಲಿ ಕೆಲಸ ಮಾಡಲಾಗದು. - ವಾಸು, ಎಸಿಪಿ
from India & World News in Kannada | VK Polls https://ift.tt/2VCbkXm