ಬೆಳಗಾವಿ: ಕೇಂದ್ರ ಸಚಿವರಾಗಿದ್ದ ದಿ.ಸುರೇಶ್ ಅಂಗಡಿ ಅವರ ಕಿರಿಯ ಪುತ್ರಿ ಶ್ರದ್ಧಾ ಶೆಟ್ಟರ್ ಇದೇ ಮೊದಲ ಬಾರಿಗೆ ಬಿಜೆಪಿ ಕಾರ್ಯಕ್ರಮದಲ್ಲಿ ವೇದಿಕೆ ಏರುವ ಮೂಲಕ ಕುತೂಹಲ ಮೂಡಿಸಿದ್ದಾರೆ. ಶ್ರದ್ಧಾ ಶೆಟ್ಟರ್ ರಾಜಕೀಯ ಪ್ರವೇಶಿಸಿದರೇ ಎಂಬ ಚರ್ಚೆಗಳು ಜೋರಾಗಿವೆ. ನಗರದ ಎಪಿಎಂಸಿ ಪ್ರಾಂಗಣದಲ್ಲಿ ಶುಕ್ರವಾರ ಮಹಾನಗರ ಬಿಜೆಪಿ ಘಟಕ ಹಮ್ಮಿಕೊಂಡಿದ್ದ ಕಿಸಾನ್ ಸಮ್ಮಾನ್ ಕಾರ್ಯಕ್ರಮದಲ್ಲಿ ಶ್ರದ್ಧಾ ಶೆಟ್ಟರ್ ಭಾಗಿಯಾಗಿದ್ದು, ಅಟಲ್ ಬಿಹಾರಿ ವಾಜಪೇಯಿ ಜನ್ಮ ದಿನದಂದು ರಾಜಕೀಯ ಪ್ರವೇಶ ಮಾಡಿದ್ದಾರಾ ಎಂಬ ಪ್ರಶ್ನೆ ಹುಟ್ಟು ಹಾಕಿದೆ. ಸುರೇಶ್ ಅಂಗಡಿ ನಿಧನದ ನಂತರ ಅಂಗಡಿ ಮನೆತನಕ್ಕೆ ಲೋಕಸಭೆ ಉಪಚುನಾವಣೆಯ ಟಿಕೆಟ್ ನೀಡಬೇಕೆಂಬ ಕೂಗು ಕೇಳಿ ಬಂದಿತ್ತು. ಸಚಿವರು, ಶಾಸಕರು, ಪಕ್ಷದ ಅನೇಕ ಮುಖಂಡರು ಕೂಡ ಅಂಗಡಿ ಕುಟುಂಬಕ್ಕೆ ಟಿಕೆಟ್ ನೀಡುವಂತೆ ಒತ್ತಾಯಿಸಿದ್ದರು. ಆದರೆ, ಇದುವರೆಗೂ ಬಿಜೆಪಿ ಸೇರಿದಂತೆ ಯಾವುದೇ ರಾಜಕೀಯ ಕಾರ್ಯಕ್ರಮದಲ್ಲಿ ದಿ.ಸುರೇಶ್ ಅಂಗಡಿ ಅವರ ಕುಟುಂಬ ಕಾಣಿಸಿಕೊಂಡಿರಲಿಲ್ಲ. ಈಗ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಸೊಸೆಯೂ ಆಗಿರುವ ಶ್ರದ್ಧಾ ಶೆಟ್ಟರ್ ಮೊದಲ ಬಾರಿಗೆ ಪಕ್ಷದ ವೇದಿಕೆ ಮೇಲೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಆ ಮೂಲಕ, ಬೆಳಗಾವಿ ಲೋಕಸಭೆ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ಶ್ರದ್ಧಾ ತಯಾರಿ ಆರಂಭಿಸಿದ್ದಾರಾ ಎಂಬ ಚರ್ಚೆಗಳು ರಂಗು ಪಡೆದುಕೊಂಡಿವೆ.
from India & World News in Kannada | VK Polls https://ift.tt/34JHGnc