ಪಾಟ್ನಾ: 'ನನಗೆ ಮುಖ್ಯಮಂತ್ರಿ ಆಗಲೇಬೇಕು ಎಂಬ ಹಠವಿಲ್ಲ. ಜನತೆಯ ಜನಾದೇಶಕ್ಕೆ ಅನುಗುಣವಾಗಿ ಯಾರು ಬೇಕಾದರೂ ಮುಖ್ಯಮಂತ್ರಿಯಾಗಬಹುದು. ಬಿಜೆಪಿ ತನ್ನದೇ ಅಭ್ಯರ್ಥಿಯನ್ನು ಮುಖ್ಯಮಂತ್ರಿಯನ್ನಾಗಿ ಮಾಡಬಹುದು'..ಇದು ಬಿಹಾರ ಮುಖ್ಯಮಂತ್ರಿ ಅವರ ಮಾತುಗಳು. ಹೌದು, ಅರುಣಾಚಲ ಪ್ರದೇಶದ ತನ್ನ ಆರು ಶಾಸಕರನ್ನು ಆಪೋಷಣ ಪಡೆದಿರುವ ಬಿಜೆಪಿ ವಿರುದ್ಧ ಜೆಡಿಯು ಇದೀಗ ತಿರುಗಿ ಬಿದ್ದಿದೆ. ಬಿಜೆಪಿ ವಿರುದ್ಧ ಜೆಡಿಯು ನಾಯಕರು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಲು ಆರಂಭಿಸಿದ್ದಾರೆ. ಈಗಗಾಲೇ ಬಿಜೆಪಿ ವಿರುದ್ಧ ಲವ್ ಜಿಹಾದ್ ಕುರಿತು ಅಪಸ್ವರ ಎತ್ತಿರುವ ಜೆಡಿಯು, ಬಹಿರಂಗವಾಗಿ ಹೇಳಿಕೆಗಳನ್ನು ನೀಡುವ ಮೂಲಕ ಬಿಜೆಪಿಯ ಒತ್ತಡವನ್ನು ಹೆಚ್ಚಿಸುವ ರಣತಂತ್ರಕ್ಕೆ ಮೊರೆ ಹೋದಂತಿದೆ. ಇದೀಗ ಖುದ್ದು ನಿತೀಶ್ ಕುಮಾರ್ ಅವರೇ ಅಖಾಡಕ್ಕಿಳಿದಿದ್ದು, ನನಗೆ ಮುಖ್ಯಮಂತ್ರಿಯಾಗಲೇಬೇಕು ಎಂಬ ಹಠವಿಲ್ಲ ಎಂದು ಹೇಳುವ ಮೂಲಕ ಬಿಹಾರ ರಾಜಕೀಯಕ್ಕೆ ಮತ್ತೊಂದು ಟ್ವಿಸ್ಟ್ ನೀಡುವ ಸುಳಿವು ನೀಡಿದ್ದಾರೆ. ಬಿಹಾರ ಜನತೆಯ ಜನಾದೇಶಕ್ಕೆ ಅನುಗುಣವಾಗಿ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆಯಾಗಲಿ ಎಂದು ಹಿಂದೆಯೂ ಹೇಳಿದ್ದೆ. ಬೇಕಾದರೆ ಬಿಜೆಪಿ ತಮ್ಮದೇ ಅಭ್ಯರ್ಥಿಯನ್ನು ಮುಖ್ಯಮಂತ್ರಿ ಮಾಡಲಿ ನನ್ನದೇನೂ ಅಭ್ಯಂತರವಿಲ್ಲ ಎಂದು ನಿತೀಶ್ ಕುಮಾರ್ ಮಾರ್ಮಿಕವಾಗಿ ಹೇಳಿದ್ದಾರೆ. ನಾವು ಅಧಿಕಾರಕ್ಕಾಗಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿಲ್ಲ. ರಾಜ್ಯದ ಜನರ ಸೇವೆಗಾಗಿ ಮೈತ್ರಿ ಮಾಡಿಕೊಂಡಿದ್ದೇವೆ. ಹೀಗಾಗಿ ಯಾವುದೇ ಕ್ಷಣದಲ್ಲಾದರೂ ಮುಖ್ಯಮಂತ್ರಿ ಪದವಿ ಬಿಟ್ಟುಕೊಡಲು ಸಿದ್ಧ ಎಂದು ನಿತೀಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಒಟ್ಟಿನಲ್ಲಿ ಅರುಣಾಚಲ ಪ್ರದೇಶದ ರಾಜಕೀಯ ಬೆಳವಣಿಗೆ ಬಿಹಾರ ರಾಜಕೀಯದ ಮೇಲೂ ಬೀರಿದ್ದು, ಜೆಡಿಯು-ಬಿಜೆಪಿ ನಡುವೆ ಮೂಡಿರುವ ಈ ಸಣ್ಣ ಬಿರುಕು ಮುಂದಿನ ದಿನಗಳಲ್ಲಿ ಎತ್ತ ಸಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
from India & World News in Kannada | VK Polls https://ift.tt/3aK5NWn