ಮಂಡ್ಯ: ಶ್ರೀರಂಗಪಟ್ಟಣದ ಪ್ರಧಾನಿ ಮೋದಿಯ ಪ್ರಶಂಸೆಗೆ ಪಾತ್ರವಾಗಿದೆ. 300 ವರ್ಷಗಳ ಹಳೆಯದಾದ ಶಿಥಿಲಗೊಂಡಿದ್ದ ಶಿವನ ದೇವಾಲಯವನ್ನು ಜೀರ್ಣೊದ್ಧಾರ ಮಾಡಿದ ಯುವಕರ ಕಾರ್ಯ ಪ್ರಧಾನಿ ಮೋದಿಯ ಗಮನ ಸೆಳೆದಿದೆ. ಹೀಗಾಗಿ ತನ್ನ ಈ ವರ್ಷದ ಕೊನೆಯ ಮನ್ ಕೀ ಬಾತ್ನಲ್ಲಿ(ಭಾನುವಾರ) ಯುವಾ ಬ್ರಿಗೇಡ್ನ ಯುವಕರನ್ನು ಹೊಗಳಿದ್ದಾರೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಗಂಜಾಂ ಸಮೀಪ ಕೃಷ್ಣದೇವರಾಯರ ಕಾಲದಲ್ಲಿ ಶಿವನ ದೇವಾಲಯ ನಿರ್ಮಾಣವಾಗಿತ್ತು. ಕಳೆದ 45 ವರ್ಷಗಳ ಹಿಂದೆ ಪೂಜೆ ಸಲ್ಲಿಸುತ್ತಿದ್ದ ಮರಿಯಪ್ಪ ಎಂಬುವವರು ಮೃತಪಟ್ಟಿದ್ದರು. ಆನಂತರ ದೇಗುಲ ಪಾಳುಬಿದ್ದಿತ್ತು. ದೇವಾಲಯದ ಗೋಡೆಗಳು ಶಿಥಿಲಾವಸ್ಥೆ ತಲುಪಿ, ಗಿಡಗಂಟೆಗಳು ಬೆಳೆದು, ವಿಷ ಜಂತುಗಳ ತಾಣವಾಗಿ ಪರಿವರ್ತನೆಗೊಂಡಿತ್ತು. ಇದನ್ನು ಗಮನಿಸಿದ ಶ್ರೀರಂಗಪಟ್ಟಣದ ಯುವಾ ಬ್ರಿಗೇಡ್ ತಂಡ ಎರಡು ತಿಂಗಳುಗಳ ಕಾಲ ಪ್ರತಿ ಭಾನುವಾರ ಬೆಳಗ್ಗೆ 6 ರಿಂದ 9 ರವರೆಗೆ ಶ್ರಮದಾನ ಮಾಡುವ ಮೂಲಕ ದೇವಾಲಯವನ್ನು ಸಂಪೂರ್ಣ ಜೀರ್ಣೋದ್ಧಾರ ಮಾಡಿದರು. ಬಳಿಕ ಹೊಸ ಶಿವಲಿಂಗ ಪ್ರತಿಷ್ಠಾಪಿಸಿ, ನಿತ್ಯ ಪೂಜೆ ಪುನಸ್ಕಾರ ನೆರವೇರಿಸುತ್ತಿದ್ದಾರೆ. ಪ್ರತಿ ಸೋಮವಾರ ಅಭಿಷೇಕ ನಡೆಸಲಾಗುತ್ತಿದೆ. ಈ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ ಮೋದಿ,ಯುವಕರು ದೇವಾಲಯದ ಆವರಣವನ್ನು ಸ್ವಚ್ವಗೊಳಿಸಿದರು. ಅಲ್ಲಿಗೆ ಬೇಕಾದ ರಸ್ತೆಯನ್ನು ಸರಿ ಮಾಡಿದರು. ಬೇಕಾದ ವಿದ್ಯುತ್ ವ್ಯವಸ್ಥೆಯನ್ನು ಕಲ್ಪಿಸಿದರು. ಈಗ ಪೂಜೆ ನಡೆಯುತ್ತಿದೆ. ಯುವಕರು ಆರಂಭದಿಂದ ಕೊನೆವರೆಗೆ ಮಾಡಿದ ಕಾರ್ಯವನ್ನು ಪ್ರಸ್ತಾಪಿಸಿ. ಇವರು ಮಾಡಿದ ಕಾರ್ಯ ನಿಜಕ್ಕೂ ಜನ ಮೆಚ್ಚುವಂತಹದು ಎಂದು ಮೋದಿ ಶ್ಲಾಘಿಸಿದ್ದಾರೆ. ಇನ್ನು ಪ್ರಧಾನಿ ಮೋದಿಯ ಹೊಗಳಿಕೆ ಮನ್ ಕೀ ಬಾತ್ ಬಳಿಕ ಸುದ್ದಿಯಾಗುತ್ತಿದ್ದಂತೆ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಯುವ ಬ್ರಿಗೇಡ್, ಪ್ರಧಾನಿ ಮೋದಿ ಶ್ಲಾಘನೆಯಿಂದ ಬಹಳ ಖುಷಿ ಹಾಗೂ ಸ್ಪೂರ್ತಿ ಸಿಕ್ಕಿದೆ. ಇದು ನಮ್ಮ ತಂಡದ ಸದಸ್ಯರಿಗೆ ಸಂದ ಗೌರವ ಎಂದು ತಿಳಿಸಿದ್ದಾರೆ.
from India & World News in Kannada | VK Polls https://ift.tt/3rz2eZi