ಬೆಂಗಳೂರು: ನಗರದ ಕೋರಮಂಗಲ ಭಾಗದಲ್ಲಿ ಕೇವಲ 10 ಕಿ.ಮೀ ವ್ಯಾಪ್ತಿಯಲ್ಲಿ ಕನಿಷ್ಠ 538 ಮನೆಗಳು ಕಳೆದ 30 ವರ್ಷಗಳಿಂದ ಅನಧಿಕೃತವಾಗಿ ತಮ್ಮ ಮನೆಯ ತ್ಯಾಜ್ಯ ನೀರನ್ನು ಮಳೆನೀರುಗಾಲುವೆಗೆ ನೇರವಾಗಿ ಬಿಟ್ಟಿರುವುದು ಸರ್ವೆಯಿಂದ ಬಹಿರಂಗವಾಗಿದೆ. ಸೇರಿದಂತೆ ಇತರೆ ಇಲಾಖೆಯ ಅಧಿಕಾರಿಗಳು ಇತ್ತೀಚೆಗೆ ನಡೆಸಿದ ಸರ್ವೆ ಪ್ರಕಾರ ಈ ಮಾಹಿತಿ ಹೊರಬಿದ್ದಿದೆ. ಸದ್ಯ ಸರ್ವೆಯನ್ನು ಕೇವಲ 10 ಕಿ.ಮೀಗೆ ಸೀಮಿತವಾಗಿ ನಡೆಸಲಾಗಿದೆ. ನಗರದಲ್ಲಿ 800 ಕಿ.ಮೀ ವ್ಯಾಪ್ತಿಯಲ್ಲಿ ಬಿಡಬ್ಲ್ಯುಎಸ್ಎಸ್ಬಿ ಒಳಚರಂಡಿ ವ್ಯವಸ್ಥೆ ಇದ್ದು, ಭಾರಿ ಸಂಖ್ಯೆಯ ಮನೆಗಳು ಮಳೆ ನೀರು ಗಾಲುವೆಗೆ ತ್ಯಾಜ್ಯ ನೀರನ್ನು ಹರಿಸುತ್ತಿರುವ ಸಾಧ್ಯತೆ ಇದೆ. ಅನೇಕ ವರ್ಷಗಳಿಂದ ಈ ಮಾದರಿಯ ಸರ್ವೆ ನಡೆಸಬೇಕೆಂಬ ಕೂಗು ಕೇಳಿಬರುತ್ತಿತ್ತು. ಆದರೆ ಮನೆಗಳ ತ್ಯಾಜ್ಯ ಎಲ್ಲಿ ಬಿಡಲಾಗುತ್ತಿದೆ ಎಂದು ಪ್ರತಿ ಮನೆಯನ್ನು ಪರಿಶೀಲಿಸುವುದು ಅಷ್ಟು ಸುಲಭದ ಕೆಲಸವಲ್ಲ. ನಗರದಲ್ಲಿ ಹತ್ತಾರು ವರ್ಷಗಳಿಂದ ಲಕ್ಷಾಂತರ ಮನೆಗಳು ನಿರ್ಮಾಣಗೊಂಡಿದೆ, ಜತೆಗೆ ಪ್ರತಿನಿತ್ಯ ಸಾವಿರಾರು ಮನೆಗಳ ನಿರ್ಮಾಣ ಕಾರ್ಯ ನಡೆಯುತ್ತದೆ. ಅಲ್ಲದೇ ತ್ಯಾಜ್ಯ ನೀರು ಹರಿಯುವ ಮಳೆನೀರುಗಾಲುವೆಗೆ ಅಂಟಿಕೊಂಡೇ ಅನಾರೋಗ್ಯಕರ ವಾತಾವರಣದಲ್ಲಿ ನೂರಾರು ಸಣ್ಣ ಶೆಡ್ ಮನೆಗಳು, ಸ್ಲಂಗಳು ತಲೆಯೆತ್ತಿರುವುದು ಈ ಸರ್ವೆಯಿಂದ ತಿಳಿದುಬಂದಿದೆ. ಚಿಕ್ಕ ಜಾಗದಲ್ಲಿ ಒಂದಕ್ಕೊಂದು ಅಂಟಿಕೊಂಡು ಹಲವಾರು ಮನೆಗಳಿದ್ದು, ಈ ಮನೆಗಳಿಗೆ ಒಳಚರಂಡಿ ವ್ಯವಸ್ಥೆ ಕಲ್ಪಿಸುವುದೇ ಅಧಿಕಾರಿಗಳಿಗೆ ಸವಾಲಾಗಿ ಪರಿಣಮಿಸಿದೆ. ಶಾಂತಿನಗರ ಮತ್ತು ಬೆಳ್ಳಂದೂರು ನಡುವೆ ಈ ಸರ್ವೆ ಕಾರ್ಯ ಕೈಗೊಳ್ಳಲಾಗಿತ್ತು. ‘10 ಕಿ.ಮೀ ಉದ್ದದ ಮಳೆನೀರುಗಾಲುವೆಗೆ ಅಂಟಿಕೊಂಡೇ ಸ್ಲಂ ಇದೆ. ಮಳೆನೀರುಗಾಲುವೆ ಪಕ್ಕದಲ್ಲಿ ಮೊದಲ ಸಾಲಿನಲ್ಲಿರುವ ಮನೆಗಳಿಂದ ತ್ಯಾಜ್ಯ ನೀರನ್ನು ನೇರವಾಗಿ ಕಾಲುವೆಗೆ ಬಿಡಲಾಗಿದೆ. ಈ ಸಾಲಿಗೆ ಹೊಂದಿಕೊಂಡಂತೆ ಇದರ ಹಿಂಭಾಗದಲ್ಲಿ ಸಾವಿರಾರು ಮನೆಗಳಿವೆ. ಇಲ್ಲಿ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಕೂಡ ಜಾಗ ಇಲ್ಲದಷ್ಟು ಇಕ್ಕಟ್ಟಾಗಿದೆ. ಕಾಮಗಾರಿ ನಡೆಸಬೇಕಾದರೆ ತಾತ್ಕಾಲಿಕವಾಗಿ ಒಂದಷ್ಟು ಶೆಡ್ಗಳನ್ನು ತೆರವುಗೊಳಿಸಬೇಕಾಗಿದೆ. ಇದಕ್ಕೆ ಅಲ್ಲಿನ ನಿವಾಸಿಗಳ ಸಹಕಾರ ಅಗತ್ಯವಿದೆ’ ಎಂದು ಬಿಡಬ್ಲ್ಯುಎಸ್ಎಸ್ಬಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. ‘ಇಲ್ಲಿನ ನಿವಾಸಿಗಳಿಂದ ಯಾವುದೇ ಶುಲ್ಕ ವಸೂಲಿ ಮಾಡದೇ ಪ್ರತಿ ಮನೆಗೂ ಒಳಚರಂಡಿ ವ್ಯವಸ್ಥೆ ಕಲ್ಪಿಸುವಂತೆ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್ ಭಾಸ್ಕರ್ ಅವರು ಬಿಡಬ್ಲ್ಯುಎಸ್ಎಸ್ಬಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ನೂತನ ಒಳಚರಂಡಿ ವ್ಯವಸ್ಥೆ ಯೋಜನೆಯಿಂದಾಗಿ ಸುಮಾರು 4,500 ಮನೆಗಳಿಗೆ ಅನುಕೂಲವಾಗಲಿದೆ. ಶೀಘ್ರದಲ್ಲೇ ನಾವು ಕಾಮಗಾರಿಯನ್ನು ಆರಂಭಿಸಲಿದ್ದೇವೆ’ ಎಂದು ಅಧಿಕಾರಿ ತಿಳಿಸಿದರು. ಬೆಳ್ಳಂದೂರು ಮತ್ತು ವರ್ತೂರು ಕೆರೆಗಳ ಪುನಶ್ಚೇತನಕ್ಕೆ ಸಂಬಂಧಪಟ್ಟಂತೆ ರಾಷ್ಟ್ರೀಯ ಹಸಿರು ನ್ಯಾಯಪೀಠ(ಎನ್ಜಿಟಿ) ನೀಡಿರುವ ಆದೇಶದ ಅನ್ವಯ ಈ ಸರ್ವೆ ಕೈಗೊಳ್ಳಲಾಗಿದೆ. ಕೋರಮಂಗಲ ಮತ್ತು ಚಲ್ಲಘಟ್ಟ ವ್ಯಾಪ್ತಿಯ ಪ್ರದೇಶದಲ್ಲಿ ಮಳೆನೀರುಗಾಲುವೆಗೆ ನೇರವಾಗಿ ತ್ಯಾಜ್ಯ ಹರಿಬಿಡುತ್ತಿರುವ ಮನೆ, ಕಟ್ಟಡಗಳನ್ನು ಗುರುತಿಸುವಂತೆ ಬಿಡಬ್ಲ್ಯುಎಸ್ಎಸ್ಬಿ ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಎನ್ಜಿಟಿ ನಿರ್ದೇಶನ ನೀಡಿದೆ. ಈ ಮೂಲಕ ತ್ಯಾಜ್ಯ ನೀರು ಕೆರೆಗಳನ್ನು ಸೇರುವುದನ್ನು ತಡೆಯಬಹುದಾಗಿದೆ. ಕೆರೆಗಳ ಪುನಶ್ಚೇತನಕ್ಕೆ ಪ್ರತಿ ವರ್ಷ ಸಾವಿರಾರು ಕೋಟಿ ರೂ.ಗಳನ್ನು ವ್ಯಯಿಸುವ ಬದಲು ಮಳೆನೀರುಗಾಲುವೆಗೆ ಮನೆಗಳ ತ್ಯಾಜ್ಯ ನೇರವಾಗಿ ಬಿಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಅಧಿಕಾರಿಗಳು ಗಮನಹರಿಸಬೇಕು. ಈ ಮೂಲಕ ತ್ಯಾಜ್ಯ ನೀರು ಕೆರೆ ಸೇರುವುದನ್ನು ತಪ್ಪಿಸಬಹುದು ಎಂದು ತಜ್ಞರು ಮತ್ತು ಕೆರೆ ಸಂರಕ್ಷಣೆ ಕಾವಲುಗಾರರು ಸಲಹೆ ನೀಡಿದ್ದಾರೆ. ನೀರು, ವಿದ್ಯುತ್ ಸಂಪರ್ಕ ಕಡಿತ ಮಳೆನೀರುಗಾಲುವೆಗೆ ತ್ಯಾಜ್ಯನೀರು ಬಿಡುವುದನ್ನು ನಿಲ್ಲಿಸದಿದ್ದರೆ ಈ 538 ಮನೆಗಳಿಗೆ ನೀರು ಮತ್ತು ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಅಧಿಕಾರಿಗಳು ತೀರ್ಮಾನಿಸಿದ್ದಾರೆ. ಇದೇ ರೀತಿಯ ಸರ್ವೆಯನ್ನು ಮಳೆನೀರುಗಾಲುವೆ ಹಾದುಹೋಗುವ ನಗರದ ಎಲ್ಲ ಪ್ರದೇಶಗಳಲ್ಲಿ ಕೈಗೊಳ್ಳಲು ಸರಕಾರ ಯೋಜಿಸಿದೆ.
from India & World News in Kannada | VK Polls https://ift.tt/3pp0XSF