ಜಮ್ಮು: ಪೂಂಛ್ ಜಿಲ್ಲೆಯಲ್ಲಿನ ದೇವಸ್ಥಾನವೊಂದರ ಮೇಲೆ ಗ್ರೆನೇಡ್ ದಾಳಿ ನಡೆಸುವ ಮೂಲಕ ಕೋಮುಗಲಭೆ ಸೃಷ್ಟಿಸಲು ಹೊಂಚು ಹಾಕಿದ್ದ ಪಾಕಿಸ್ತಾನದ ಸಂಚನ್ನು ವಿಫಲಗೊಳಿಸಿರುವ ಭದ್ರತಾ ಪಡೆಗಳು, ಮೂವರು ಉಗ್ರರನ್ನು ಬಂಧಿಸಿವೆ. ಶನಿವಾರ ರಾತ್ರಿ ಮೇಂಧರ್ ಸೆಕ್ಟರ್ನಲ್ಲಿ ವಾಹನವೊಂದನ್ನು ಅಡ್ಡಗಟ್ಟಿದ್ದ ರಾಷ್ಟ್ರೀಯ ರೈಫಲ್ಸ್ ಮತ್ತು ಸ್ಥಳೀಯ ಪೊಲೀಸರ ವಿಶೇಷ ಕಾರ್ಯಾಚರಣೆ ಪಡೆ ಸಹೋದರರಿಬ್ಬರನ್ನು ಬಂಧಿಸಿತ್ತು. ಗಲ್ಹುಟಾ ಗ್ರಾಮದ ಮುಸ್ತಫಾ ಇಕ್ಬಾಲ್ ಖಾನ್ ಹಾಗೂ ಮುರ್ತಜಾ ಇಕ್ಬಾಲ್ ಅವರಿಗೆ ಪಾಕಿಸ್ತಾನದಿಂದ ಕರೆಯೊಂದು ಬಂದಿರುವ ಖಚಿತ ಸುಳಿವು ಆಧರಿಸಿ ಬಂಧಿಸಲಾಗಿತ್ತು. ವಿಚಾರಣೆ ವೇಳೆ ಪಾಕಿಸ್ತಾನದ ಮೊಬೈಲ್ ಸಂಖ್ಯೆಯೊಂದರಿಂದ ಕರೆ ಬಂದಿರುವುದು ದೃಢಪಟ್ಟಿದೆ. ''ಕೆಲವು ಗ್ರೆನೇಡ್ಗಳನ್ನು ಒದಗಿಸಲಾಗುವುದು, ಕೂಡಲೇ ಅರಿ ಗ್ರಾಮದಲ್ಲಿನ ಮಂದಿರವನ್ನು ಧ್ವಂಸ ಮಾಡಿ ಎಂದು ನಿರ್ದೇಶನ ನೀಡಲಾಗಿತ್ತು. ಗ್ರೆನೇಡ್ನಿಂದ ದಾಳಿ ಮಾಡುವ ವಿಧಾನದ ವಿಡಿಯೊವನ್ನೂ ಮೊಬೈಲ್ಗೆ ಕಳುಹಿಸಲಾಗಿತ್ತು,'' ಎಂಬುದಾಗಿ ಮುಸ್ತಫಾ ಒಪ್ಪಿಕೊಂಡಿದ್ದಾನೆ. ಮುಸ್ತಾಫಾಗೆ ದಾಳಿಗಾಗಿ ನೆರವು ನೀಡಲು ಸಿದ್ಧತೆ ನಡೆಸುತ್ತಿದ್ದ ಇಬ್ಬರು ಸಹಚರರಾದ ಯಾಸೀನ್ ಮತ್ತು ರಯೀಸ್ನನ್ನು ಬಾಲಾಕೋಟ್ ಬಳಿಯ ದಬ್ಬಿ ಗ್ರಾಮದಲ್ಲಿ ಬಂಧಿಸಲಾಗಿದೆ. ಮುಸ್ತಫಾ ಸಹೋದರ ಮುರ್ತಜಾನನ್ನು ಇನ್ನೂ ಪೊಲೀಸ್ ವಶದಲ್ಲಿಇರಿಸಿಕೊಳ್ಳಲಾಗಿದ್ದು ವಿಚಾರಣೆ ಮುಂದುವರಿದಿದೆ. ಜೈಷ್ ಉಗ್ರರ ಬಂಧನ: ಜಮ್ಮು-ಕಾಶ್ಮೀರದ ಬುಡ್ಗಾಮ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಾಲ್ವರು ಉಗ್ರರನ್ನು ಬಂಧಿಸಿದ್ಧಾರೆ. ಯೋಧರನ್ನು ಕಂಡು ಏಕಾಏಕಿ ತಪ್ಪಿಸಿಕೊಳ್ಳಲು ಯತ್ನಿಸಿದ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಅವರೆಲ್ಲರೂ ಜೈಷೆ ಮೊಹಮ್ಮದ್ ಉಗ್ರ ಸಂಘಟನೆ ಜತೆಗೆ ನಂಟು ಹೊಂದಿರುವುದು ಬಯಲಾಗಿದೆ. ಇವರ ನಾಯಕ ಅಲ್ತಾಫ್ ಹುಸೇನ್ ಈ ಮುನ್ನ ಪೊಲೀಸ್ ಇಲಾಖೆಯಲ್ಲಿದ್ದು , ಪೊಲೀಸ್ ಶಿಬಿರವೊಂದರಿಂದ ಎಕೆ-47 ರೈಫಲ್ಗಳನ್ನು ಕದ್ದು ಪರಾರಿಯಾಗಿದ್ದ. ಬಳಿಕ ಹುದ್ದೆಗೆ ರಾಜೀನಾಮೆ ನೀಡಿ ಉಗ್ರರೊಂದಿಗೆ ನಂಟು ಬೆಳೆಸಿಕೊಂಡಿದ್ದ. ಪುಲ್ವಾಮದಲ್ಲಿ ಜೈಷ್ ಸಂಘಟನೆ ಸಕ್ರಿಯಗೊಳಿಸಲು ಈ ನಾಲ್ವರು ಸಂಚು ಹೆಣೆದಿದ್ದರು ಎನ್ನಲಾಗಿದೆ.
from India & World News in Kannada | VK Polls https://ift.tt/37QlzNy