ಕಲಬುರಗಿ: ಮನುಸ್ಮೃತಿಯಲ್ಲಿ ದಲಿತ, ಹಿಂದುಳಿದ, ವಿಶೇಷವಾಗಿ ಮಹಿಳೆಯರನ್ನು ಪಶುಗಳಂತೆ ಕಾಣುವ ಅಂಶವನ್ನು ಕಂಡು ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು 1927 ಡಿ.25ರಂದು ಸುಟ್ಟು ಹಾಕಿದ ದಿನದ ನೆನಪಿಗಾಗಿ ಶುಕ್ರವಾರ ನಗರದ ಜಗತ್ ವೃತ್ತದಲ್ಲಿ ದಲಿತ ಸಂಘರ್ಷ ಸಮಿತಿ ಸದಸ್ಯರು ಮನುಸ್ಮೃತಿ ಪ್ರತಿಕೃತಿ ದಹಿಸಿ ಪ್ರತಿಭಟಿಸಿದವು. ಇದಕ್ಕೂ ಮುನ್ನ ವಲ್ಲಭಬಾಯಿ ಪಟೇಲ್ ವೃತ್ತದಿಂದ ಮನುಸ್ಮೃತಿ ಪ್ರತಿಕೃತಿ ಮಾಡಿ ಮೆರವಣಿಗೆ ಹೊರಟು ಜಗತ್ ವೃತ್ತ ತಲುಪಿ ಅಲ್ಲಿ ಪ್ರತಿಕೃತಿ ದಹಿಸಲಾಯಿತು. ಈ ವೇಳೆ ಆರ್ಕೆ ಹುಡುಗಿ, ಪ್ರಭು ಖಾನಾಪುರೆ, ಅರ್ಜುನ ಭದ್ರೆ, ಅಪ್ತಾಫ್ ಇನಾಂದಾರ್ ಮಾತನಾಡಿದರು. ದೇಶದಲ್ಲಿ ಮನುಸ್ಮೃತಿ ಹೇರುವಂತಹ ಸಂಘಟನೆಗಳು, ಸರಕಾರಗಳು ಅಧಿಕಾರ ಮಾಡುತ್ತಿರುವುದರಿಂದ ಜನರು ಅತ್ಯಂತ ಕಷ್ಟದ ದಿನಗಳನ್ನು ಎದುರಿಸುವಂತಾಗಿದೆ. ಅಂದು ದೇಶದಲ್ಲಿ ಮನುಸ್ಮೃತಿ ಹೇರುವಂತಹ ಸಂದರ್ಭ ಬಂದಾಗ ಬಾಬಾ ಸಾಹೇಬರು ಅಳುಕದೆ ಅದನ್ನು ವಿರೋಧಿಸಿದ್ದರು. ಅದರ ಭಾಗವಾಗಿ ನಾವು ಕೂಡ ವಿರೋಧಿಸಬೇಕು. ಯಾರು ಸಂವಿಧಾನ ಗೌರವಿಸುವುದಿಲ್ಲವೋ ಅಂತಹ ಸರಕಾರಗಳು, ಸಮುದಾಯಗಳು ಬಹಳ ದಿನ ಉಳಿಯವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ದತ್ತಾತ್ರೇಯ ಇಕ್ಕಳಕಿ, ಕ್ರಾಂತಿ, ಮಾರುತಿ ಕಾಂಬಳೆ, ಮೌಲಾಮುಲ್ಲಾ, ಪ್ರಕಾಶ ಮೂಲಭಾರತಿ, ಮಹಾಂತೇಶ ಬಡದಾಳ, ಮಲ್ಲಿಕಾರ್ಜುನ ಖನ್ನಾ, ಮಹಾಂತೇಶ ಕಟ್ಟಿಮನಿ, ಸೂರ್ಯಕಾಂತ ಆಜಾದಪುರ, ಅಶ್ವಿನಿ ಮದನಕರ್, ಶ್ರೀಮಂತ ಬಿರಾದಾರ, ರೇಣುಕಾ ಸಿಂಘೆ ಸೇರಿ ಅನೇಕರು ಇದ್ದರು.
from India & World News in Kannada | VK Polls https://ift.tt/3hqE3Yo