ಹುಬ್ಬಳ್ಳಿ: ಮದ್ಯ ಸೇವಿಸುವುದನ್ನು ಪತ್ನಿ ವಿರೋಧಿಸಿ ಬೈದ ಕಾರಣಕ್ಕೆ ಮನನೊಂದ ವ್ಯಕ್ತಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿಯ ಸಂತೋಷನಗರದಲ್ಲಿ ಶುಕ್ರವಾರ ನಡೆದಿದೆ. ಸಂತೋಷ ನಗರದ ಸಿದ್ಧಾರೂಢ ಕಾಲೊನಿಯ ರೋಹಿತಗೌಡ ಹನಮಂತಗೌಡ ಪಾಟೀಲ(36) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದು, ಈತ ಸಂತೋಷನಗರದಲ್ಲಿ ಟಿಫಿನ್ ಸೆಂಟರ್ ನಡೆಸುತ್ತಿದ್ದ. ಶುಕ್ರವಾರ ಬೆಳಗ್ಗೆ ಈತನ ಪತ್ನಿ ಕುಡಿಯಬೇಡ ಎಂದು ಬೈದಿದ್ದಾರೆ. ಇದನ್ನೇ ಮನಸ್ಸಿಗೆ ಹಚ್ಚಿಕೊಂಡು ಏಕಾಏಕಿ ಹೋಗಿ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೆರೆಗೆ ಬೀಳುತ್ತಿದ್ದಂತೆ ಅದನ್ನು ನೋಡಿದ ಸ್ಥಳೀಯರು ತಕ್ಷಣವೇ ಆತನನ್ನು ಬದುಕಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಮೃತದೇಹವನ್ನು ಹೊರತೆಗೆಯಲು ಕೆಲವರು ಸೀರೆ ಕಟ್ಟಿಕೊಂಡು ಕೆರೆಗೆ ಇಳಿದಿದ್ದರು. ಆದರೆ, ಕೆರೆಯಲ್ಲಿ ಮುಳುಗಿದ್ದ ಮೃತದೇಹ ಸಿಗಲಿಲ್ಲ. ನಂತರ ಸ್ಥಳಕ್ಕೆ ಆಗಮಿಸಿದ ಅಶೋಕನಗರ ಠಾಣೆ ಪೊಲೀಸರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಜಂಟಿಯಾಗಿ ನಿರಂತರ ಒಂದೂವರೆ ತಾಸು ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಹೊರತೆಗೆದರು. ಈ ಕುರಿತು ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
from India & World News in Kannada | VK Polls https://ift.tt/3mQ2Ypp