ಹೊಸದಿಲ್ಲಿ: ಅಂತರಾಷ್ಟ್ರೀಯ ಗಡಿ ನಿಯಮವನ್ನ ಉಲ್ಲಂಘಿಸಿ ಭಾರತದೊಳಗೆ ಒಳ ನುಸುಳಲು ಯತ್ನಿಸಿದ ನುಸುಳುಕೋರರನ್ನ ಗಡಿ ಭದ್ರತಾ ಪಡೆಗಳು ಹೊಡೆದುರುಳಿಸಿವೆ. ಘಟನೆಯಲ್ಲಿ ಐವರು ನುಸುಳುಕೋರರು ಸಾವನಪ್ಪಿದ್ದಾರೆ ಎಂದು ತಿಳಿಸಿದೆ. ಈ ಘಟನೆ ಪಂಜಾಬ್ನ ತರನ್ ಎಂಬ ಭಾರತ ಹಾಗೂ ಪಾಕಿಸ್ತಾನದ ಅಂತರಾಷ್ಟ್ರೀಯ ಗಡಿ ಭಾಗದಲ್ಲಿ ನಡೆದಿದೆ. ಸುಮಾರು ಐದು ಮಂದಿ ಅಕ್ರಮ ನುಸುಳುಕೋರರು ಶನಿವಾರ ಮುಂಜಾನೆ 4.15 ಸುಮಾರಿಗೆ ಭಾರತದ ಗಡಿಯೊಳಗೆ ನುಸುಳಲು ಯತ್ನಿಸುತ್ತಿದ್ದರಂತೆ. ಅನುಮಾನಗೊಂಡ ಬಿಎಸ್ಎಫ್ನ 103ನೇ ಬೆಟಾಲಿಯನ್ನ ಸಿಬ್ಬಂದಿಗಳು ಇವರನ್ನ ಪ್ರಶ್ನಿಸಲು ಮುಂದಾಗಿದ್ದಾರೆ. ಆದರೆ ಇದಕ್ಕೆ ಕೇರ್ ಮಾಡದೆ ಯೋಧರ ಮೇಲೆಯೇ ನುಸುಳುಕೋರರು ಗುಂಡು ಹಾರಿಸಿದ್ದಾರೆ. ಅವರ ಗುಂಡಿನಿಂದ ರಕ್ಷಿಸಿಕೊಳ್ಳಲು ಗಡಿ ಭದ್ರತಾ ಪಡೆಯ ಸಿಬ್ಬಂದಿಗಳು ಕೂಡ ಪ್ರತಿ ದಾಳಿ ನಡೆಸಿದ್ದಾರೆ. ಈ ವೇಳೆ ಐವರು ನುಸುಳುಕೋರರು ಸಾವನಪ್ಪಿರುವುದಾಗಿ ಬಿಎಸ್ಎಫ್ ಮಾಹಿತಿ ನೀಡಿದೆ. ಇನ್ನು ಇವರು ಪಾಕಿಸ್ತಾನ ಮೂಲದ ಒಳನುಸುಳುಕೋರರು ಎನ್ನುವ ಶಂಕೆ ವ್ಯಕ್ತವಾಗಿದೆ. ಭಾರತದಲ್ಲಿ ದುಷ್ಕೃತ್ಯ ಎಸಗುವ ಉದ್ದೇಶದಿಂದ ಪಾಕ್ನ ಗುಪ್ತಚರ ಸಂಸ್ಥೆ ಉಗ್ರರನ್ನ ದೇಶದೊಳಗೆ ಒಳಗೆ ಕಳುಹಿಸುತ್ತಿದೆ. ಮೊದಲು ಜಮ್ಮು-ಕಾಶ್ಮೀರದ ಭಾಗದಲ್ಲಿ ಒಳ ನುಸುಳುವ ಪ್ರಯತ್ನಗಳು ನಡೆಯುತ್ತಿತ್ತು. ಆದರೆ ಇದೀಗ ಅಲ್ಲಿ ಬಿಗಿ ಭದ್ರತೆ ಇರುವುದರಿಂದ ಅದು ಸಾಧ್ಯವಾಗುತ್ತಿಲ್ಲ. ಹೀಗಾಗಿ ಪಂಜಾಬ್ ಹಾಗೂ ನೇಪಾಳದ ಮೂಲಕ ಒಳ ಬರುವ ಪ್ರಯತ್ನ ನಡೆಸುತ್ತಿದ್ದಾರೆ .
from India & World News in Kannada | VK Polls https://ift.tt/2Yo4Egi