ಇಂದು ಇಡೀ ದೇಶದ ಚಿತ್ತ ಕಾಂಗ್ರೆಸ್ನ ಕಾರ್ಯಕಾರಿಣಿ ಸಭೆ ಮೇಲೆ ನೆಟ್ಟಿದೆ. ಅದಕ್ಕೆ ಕಾರಣ ಕಾಂಗ್ರೆಸ್ನಲ್ಲಿ ನಾಯಕತ್ವದ ಬದಲಾವಣೆಯ ಗಾಳಿ ಬೀಸುತ್ತಿರುವುದು. ನಾಯಕತ್ವ ಬದಲಾವಣೆಯ ಪತ್ರ ವೈರಲ್ ಆದ ನಂತರ ಇದೆ ಮೊದಲ ಬಾರಿಗೆ ಕಾರ್ಯಕಾರಿಣಿ ಸಭೆ ನಡೆಯುತ್ತಿದ್ದು, ಕುತೂಹಲದ ಜೊತೆ ಹೊಸ ಬದಲಾವಣೆ ಆಗಲಿದೆ ಎನ್ನಲಾಗಿದೆ.
ನವದೆಹಲಿ: ಇಂದು(ಸೋಮವಾರ) ಮಹತ್ವದ ಕಾಂಗ್ರೆಸ್ ಪಕ್ಷದ ಕಾರ್ಯಕಾರಣಿ ಸಭೆ(CWC)ನಡೆಯಲಿದ್ದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಪೂರ್ಣಾವಧಿಯ ಮತ್ತು ಸಕ್ರಿಯ ನಾಯಕತ್ವ ಬೇಕು ಎನ್ನುವ ಪತ್ರ ಹರಿದಾಡಿದ ನಂತರದ ಮೊದಲ ಕಾರ್ಯಕಾರಿಣಿ ಸಭೆ ಇದಾಗಿದ್ದು ಈ ಬಗ್ಗೆ ಗಂಭೀರ ಚರ್ಚೆ ನಡೆಯಲಿದೆ ಎನ್ನಲಾಗಿದೆ. ಸೋನಿಯಾ ಗಾಂಧಿ ನೇತೃತ್ವದಲ್ಲಿ ವರ್ಚುವಲ್ ಸಭೆ ಕರೆಯಲಾಗಿದ್ದು, 11 ಗಂಟೆ ಸುಮಾರಿಗೆ ಸಭೆ ನಡೆಯಲಿದೆ. ಈಗಾಗಲೇ ಕಾಂಗ್ರೆಸ್ನ ಪ್ರಮುಖ ನಾಯಕರಿಗೆ ಆಹ್ವಾನ ನೀಡಲಾಗಿದೆ. ಈ ಸಭೆಯಲ್ಲಿ ಪ್ರಸಕ್ತ ರಾಜಕೀಯ ಬೆಳವಣಿಗೆಗಳು ಹಾಗೂ ಪಕ್ಷದ ಭವಿಷ್ಯದ ದಾರಿಯ ಕುರಿತು ಚರ್ಚೆ ಮಾಡಲಾಗುವುದು ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಹಾಗಾದರೆ ಏನೆಲ್ಲಾ ಬದಲಾವಣೆಗಳು ಇಂದಿನ ಸಭೆಯಲ್ಲಿ ಸಾಧ್ಯವಾಗಲಿದೆ? ಕಾಂಗ್ರೆಸ್ನ ನಾಯಕತ್ವ ಬದಲಾಗಲಿದೆಯಾ? ಇಲ್ಲಿದೆ ಈ ಬಗ್ಗೆ ಮಾಹಿತಿ.
ಪತ್ರದ ಬಗ್ಗೆ ಚರ್ಚೆ!
ಪಕ್ಷದಲ್ಲಿ ಸಕ್ರಿಯ ಹಾಗೂ ಪೂರ್ಣಾವಧಿ ನಾಯಕತ್ವಕ್ಕಾಗಿ ಆಗ್ರಹಿಸಿ ಹಲವು ಮಾಜಿ ಸಚಿವರು, ಸಂಸದರು ಸೇರಿದಂತೆ 20ಕ್ಕೂ ಹೆಚ್ಚು ನಾಯಕರು ಹಂಗಾಮಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ. ಇದರೊಂದಿಗೆ ಪಕ್ಷದ ಒಳಗೊಳಗೇ ಧ್ವನಿಸುತ್ತಿದ್ದ ನಾಯಕತ್ವ ಬದಲಾವಣೆಯ ಕೂಗು ಇದೇ ಮೊದಲ ಬಾರಿಗೆ ಒಕ್ಕೊರಲಿನ ಆಗ್ರಹವಾಗಿ ಹೊರಹೊಮ್ಮಿದೆ. ಆ.7ರಂದು ಬರೆದಿರುವ ಈ ಪತ್ರವು ವೈರಲ್ ಆಗಿದ್ದು, ಇಂದು ನಡೆಯಲಿರುವ ಕಾಂಗ್ರೆಸ್ನ ಕಾರ್ಯಕಾರಿಣಿ ಸಭೆಯಲ್ಲಿ ಪ್ರಮುಖವಾಗಿ ಈ ಬಗ್ಗೆ ಚರ್ಚೆ ನಡೆಯಲಿದೆ. ಪಕ್ಷದ ನಾಯಕತ್ವದಲ್ಲಿ ಮಹತ್ವದ ಬದಲಾವಣೆಗೆ ಇದು ನಾಂದಿ ಹಾಡಬಹುದೆಂದು ಹೇಳಲಾಗಿದೆ.
‘ಹೊಸ ಅಧ್ಯಕ್ಷರನ್ನು ಹುಡುಕಿಕೊಳ್ಳಿ’ ಎಂದ ಸೋನಿಯಾ: ‘ಕೈ’ ಒಳಮನೆಯಲ್ಲಿ ‘ಪತ್ರ’ ಸಮರ..!
ರಾಜೀನಾಮೆಗೆ ಸೋನಿಯಾ ಇಂಗಿತ!
ನಾಯಕತ್ವ ಬದಲಾವಣೆ ಕೋರಿದ ಪತ್ರದ ವಿಚಾರ ಬಯಲಾಗುತ್ತಿದ್ದಂತೆಯೇ ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಹುದ್ದೆ ತ್ಯಜಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ನಾಯಕತ್ವ ಬದಲಾವಣೆ ಕೋರಿ ಬರೆಯಲಾದ ಪತ್ರಕ್ಕೆ ಔಪಚಾರಿಕ ಉತ್ತರ ಕಳುಹಿಸಿರುವ ಸೋನಿಯಾ, ''ಒಂದು ವರ್ಷದ ಹಂಗಾಮಿ ಅಧ್ಯಕ್ಷರಾಗಿ ನನ್ನ ಅವಧಿ ಪೂರ್ಣಗೊಂಡಿದೆ. ಪಕ್ಷದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲು ಬಯಸುತ್ತಿದ್ದೇನೆ. ಎಲ್ಲರೂ ಒಗ್ಗೂಡಿ ಹೊಸ ಸಾರಥಿಯ ಆಯ್ಕೆ ಮಾಡಿ,'' ಎಂದು ಹೇಳಿರುವುದಾಗಿ ಮೂಲಗಳು ತಿಳಿಸಿವೆ. ಹೀಗಾಗಿ ಇಂದು ಸೋನಿಯಾ ಗಾಂಧಿ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ. ಆದರೆ ಇದನ್ನು ವಕ್ತಾರ ರಣದೀಪ್ ಸುರ್ಜೇವಾಲ ತಳ್ಳಿ ಹಾಕಿದ್ದಾರೆ.
ದೇಶದಲ್ಲಿ ಮತ್ತೆ ಏರಿದ ಪೆಟ್ರೋಲ್ ದರ, ಬೆಂಗಳೂರು ಸೇರಿ ದೇಶದ ಮಹಾನಗರಗಳಲ್ಲಿ ಇಂಧನ ದರ ಎಷ್ಟಿದೆ?
ರಾಹುಲ್ ಗಾಂಧಿಗೆ ಮತ್ತೆ ಪಟ್ಟ?
ಇನ್ನು ಪತ್ರ ವೈರಲ್ ಹಾಗೂ ಕಾರ್ಯಕಾರಿಣಿ ಸಭೆಗೆ ನಂಟು ಇದೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಈ ಪತ್ರದಿಂದಾಗಿ ಸೋನಿಯಾ ಗಾಂಧಿ ನಿರ್ಗಮಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಹೀಗಾಗಿ ಈ ಜಾಗಕ್ಕೆ ಮತ್ತೆ ರಾಹುಲ್ ಗಾಂಧಿ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ. ಅಲ್ಲದೆ ಈ ಬಗ್ಗೆ ಈಗಾಗಲೇ ಸಚಿನ್ ಪೈಲಟ್ ಸೇರಿ ಅನೇಕ ನಾಯಕರು ರಾಹುಲ್ ಗಾಂಧಿ ನಾಯಕತ್ವದ ಬಗ್ಗೆ ಹೇಳಿಕೆ ಮೂಲಕ ಅವರೇ ಮತ್ತೆ ಅಧ್ಯಕ್ಷರಾಗುವ ಸುಳಿವು ಬಿಟ್ಟುಕೊಟ್ಟಿದ್ದಾರೆ. ಇನ್ನು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ರಾಹುಲ್ ಗಾಂಧಿ ಅಧ್ಯಕ್ಷರಾಗಬೇಕು ಎನ್ನುವ ಹ್ಯಾಷ್ ಟ್ಯಾಗ್ನ ಅಬ್ಬರ ಜೋರಾಗಿದೆ. ಇದೆಲ್ಲವನ್ನು ಸೂಕ್ಷ್ಮವಾಗಿ ಗಮನಿಸಿದರೆ ಕಾಂಗ್ರೆಸ್ನಲ್ಲಿ ಅಧ್ಯಕ್ಷ ಬದಲಾವಣೆಯ ಗಾಳಿ ಇಂದು ಬೀಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಭಾರತೀಯ ಮೂಲದ 'ಪ್ರಿನ್ಸ್ ಮಹಲು' ಭಾರಿ ಮೊತ್ತಕ್ಕೆ ಮಾರಾಟ, ಎಷ್ಟು ರೇಟ್ ಗೊತ್ತಾ?
ಇಬ್ಬರು ಉಪಾಧ್ಯಕ್ಷರ ಆಯ್ಕೆ?
ಪಕ್ಷದ ನಾಯಕತ್ವವನ್ನು ಮತ್ತೆ ರಾಹುಲ್ಗೆ ವಹಿಸಬೇಕೆಂಬ ಒತ್ತಾಯ ಸೋಮವಾರದ ಸಿಡಬ್ಲ್ಯೂಸಿ ಸಭೆಯಲ್ಲೂ ಜೋರಾಗಿ ಕೇಳಿ ಬರಲಿದೆ. ಆದರೆ, ಮೊದಲಿನಿಂದಲೂ ಈ ಹುದ್ದೆಗೆ ಒಲ್ಲೆನೆಂದೇ ಹೇಳುತ್ತಿರುವ ರಾಹುಲ್ ಈ ಬಾರಿಯೂ ತಿರಸ್ಕರಿಸಿದರೆ ಮುಂದಿನ ಯೋಜನೆ ಏನು ಎಂಬ ಬಗ್ಗೆ ಈಗಾಗಲೇ ರೂಪುರೇಷೆ ಸಿದ್ಧವಾಗಿದೆ. ಒಂದು ವೇಳೆ ರಾಹುಲ್ ಶತಾಯಗತಾಯ ಮತ್ತೊಮ್ಮೆ ಪಟ್ಟಾಭಿಷೇಕಕ್ಕೆ ನಿರಾಕರಿಸಿದರೆ, ಹಾಲಿ ಅಧ್ಯಕ್ಷರಿಗೆ ಸಲಹೆ ಸೂಚನೆ ನೀಡಲು ಇಬ್ಬರು ಉಪಾಧ್ಯಕ್ಷರನ್ನು ನೇಮಿಸುವ ಪ್ರಸ್ತಾಪವೂ ಸಿಡಬ್ಲ್ಯೂಸಿ ಮುಂದಿದೆ. ಒಂದು ವೇಳೆ ಈ ಪ್ರಸ್ತಾಪವು ಅಂಗೀಕಾರಗೊಂಡರೆ, ಮಲ್ಲಿಕಾರ್ಜುನ ಖರ್ಗೆ, ಗುಲಾಂ ನಬಿ ಆಜಾದ್, ಪಿ. ಚಿದಂಬರಂ ಹೆಸರುಗಳು ಉಪಾಧ್ಯಕ್ಷರ ಹುದ್ದೆಗೆ ಕೇಳಿಬಂದಿವೆ. ಇದೇ ವೇಳೆ, ಯುವ ನಾಯಕರ ಹೆಸರುಗಳನ್ನು ಶಿಫಾರಸು ಮಾಡಿದರೂ ಅಚ್ಚರಿಯಿಲ್ಲ. ಒಂದು ವೇಳೆ ಯುವ ನಾಯಕರಿಗೆ ಮಣೆ ಹಾಕುವುದಾದರೆ, ರಾಹುಲ್ ಗಾಂಧಿ ಆಪ್ತರಾದ ಸುಷ್ಮಿತಾ ದೇವ್, ಮಾಣಿಕಂ ಟಾಗೋರ್ ಹೆಸರುಗಳು ಮುಂಚೂಣಿಯಲ್ಲಿವೆ.
from India & World News in Kannada | VK Polls https://ift.tt/3hp32dI