ಬೆಂಗಳೂರು: ಡಿ.ಕೆ.ಶಿವಕುಮಾರ್ ಅವರ ಕೇವಲ ಆರೋಪವಲ್ಲ, ಅದು ಸತ್ಯ. ಕಳೆದ 15 ದಿನಗಳಿಂದ ಡಿಸ್ಟರ್ಬೆನ್ಸ್ ಬರುತ್ತಿದೆ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ. ರಾಜ್ಯ ಸರಕಾರ ತನಿಖೆ ನಡೆಸಿಲ್ಲ ಎಂದರೆ ಕೇಂದ್ರಕ್ಕೆ ಪತ್ರ ಬರೆಯುತ್ತೇನೆ ಎಂದು ಅವರು ತಿಳಿಸಿದರು. ತಮ್ಮ ಸದಾಶಿವನಗರ ನಿವಾಸದಲ್ಲಿ ಮಾತನಾಡಿದ ಅವರು, ಫೋನ್ ಟ್ಯಾಪಿಂಗ್ ಕೇವಲ ಆರೋಪವಲ್ಲ. ಕಳೆದ 15 ದಿನಗಳಿಂದ ಡಿಸ್ಟರ್ಬೆನ್ಸ್ ಬರುತ್ತಿದೆ. ಕೆಲವರು ದೂರು ನೀಡುವಂತೆ ಹೇಳಿದ್ದರು. ಅದಕ್ಕೆ ಈಗ ದೂರು ನೀಡಿದ್ದಾರೆ. ಬೇರೆಯವರ ಮೇಲೆ ಗೂಬೆ ಕೂರಿಸಿ ತಾವು ತಪ್ಪಿಸಿಕೊಳ್ಳುವುದರಲ್ಲಿ ಬಿಜೆಪಿ ನಾಯಕರು ಬಹಳ ಪರಿಣಿತರು ಎಂದು ಹೇಳಿದರು. ಒಂದು ಪಕ್ಷದ ಅಧ್ಯಕ್ಷರು ಫೋನ್ ಟ್ಯಾಪಿಂಗ್ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ. ಇದನ್ನು ಲಘುವಾಗಿ ಪರಿಗಣಿಸೋಕೆ ಸಾಧ್ಯವಿಲ್ಲ. ವ್ಯಕ್ತಿ ಸ್ವಾತಂತ್ರ್ಯದ ಹರಣ ಮಾಡುವುದಕ್ಕೆ ಅವಕಾಶವಿಲ್ಲ. ಇದರ ಬಗ್ಗೆ ಸರಕಾರ ಗಂಭಿರವಾಗಿ ಪರಿಗಣಿಸಬೇಕು ಎಂದರು. ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಲಘುವಾಗಿ ಮಾತನಾಡಬಾರದು. ಡಿ.ಕೆ.ಶಿವಕುಮಾರ್ ಅವರು ರಾಜ್ಯ ಸರಕಾರಕ್ಕೆ ಮನವಿ ಮಾಡಿದ್ದಾರೆ. ಅವರ ಮನವಿಯನ್ನು ರಾಜ್ಯ ಸರಕಾರ ಮೊದಲು ಪರಿಗಣಿಸಬೇಕು. ಇಲ್ಲವಾದರೇ ನಾನೇ ಕೇಂದ್ರಕ್ಕೆ ಪತ್ರ ಬರೆಯುತ್ತೇನೆ ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದರು. ಡಿಜೆ ಹಳ್ಳಿ ಪ್ರಕರಣಕ್ಕೂ ಫೋನ್ ಟ್ಯಾಪಿಂಗ್ಗೂ ಸಂಬಂಧವಿಲ್ಲ. ಗಲಭೆ ಪ್ರಕರಣ ಮುಚ್ಚಿ ಹಾಕಲು ಸರಕಾರ ಈ ಪ್ರಕರಣವನ್ನು ಬಳಸಿಕೊಳ್ಳುತ್ತಿದೆ ಎಂದು ಡಿ.ಕೆ.ಸುರೇಶ್ ಆರೋಪಿಸಿದರು.
from India & World News in Kannada | VK Polls https://ift.tt/3leOgJ0