ಭೋಪಾಲ್: ಮಧ್ಯಪ್ರದೇಶದಲ್ಲಿ ಕೊರೊನಾ ವಾರಿಯರ್ಗಳು ಎಂದು ಹೇಳಿಕೊಂಡು ಸುಮಾರು 150 ಆದಾಯ ತೆರಿಗೆ ವಿಭಾಗದ ಅಧಿಕಾರಿಗಳು ಗುರುವಾರ ಬೆಳಗ್ಗೆ 5.30ಕ್ಕೆ ಭೋಪಾಲ್ನ 20 ವಿವಿಧ ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಈ ಘಟನೆ ಮಧ್ಯಪ್ರದೇಶದಲ್ಲಿ ಮಿಂಚಿನ ಸಂಚಲನ ಉಂಟು ಮಾಡಿತು. ಎರಡು ಬ್ಯುಸಿನೆಸ್ ಗ್ರೂಫ್ ಮತ್ತು ಅವರ ಸಹವರ್ತಿಗಳಿಗೆ ಸೇರಿದ ಸ್ಥಳಗಳಲ್ಲಿ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ವಿಶೇಷ ಸಶಸ್ತ್ರ ಪಡೆಗಳ (ಎಸ್ಎಎಫ್) ಪೊಲೀಸ್ ಸಿಬ್ಬಂದಿ ಐಟಿ ಅಧಿಕಾರಿಗಳಿಗೆ ಸಾಥ್ ನೀಡಿದ್ದರು. ಸರ್ಕಾರ, ಆರೋಗ್ಯ ಇಲಾಖೆ ಕೋವಿಡ್-19 ತಂಡ ನಿಮ್ಮನ್ನು ಸ್ವಾಗತಿಸುತ್ತದೆ ಎಂಬ ಭಿತ್ತಿಪತ್ರಗಳನ್ನು ವಾಹನಗಳಿಗೆ ಅಂಟಿಸಿರುವುದು ಕಂಡುಬಂದಿತ್ತು. ಮೂಲಗಳ ಪ್ರಕಾರ ದಾಳಿಯಲ್ಲಿ ಸುಮಾರು 100 ಅಕ್ರಮ ಆಸ್ತಿಗಳ ದಾಖಲೆಗಳು ಸಿಕ್ಕಿವೆ ಎನ್ನಲಾಗಿದ್ದು, ಕೆಲ ಕಡೆ ಶೋಧ ಇನ್ನು ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭೋಪಾಲ್ ಮತ್ತು ನೆರೆಯ ಸೆಹೋರ್ ಜಿಲ್ಲೆಯಲ್ಲಿರುವ ಆಸ್ತಿಗಳು ಮತ್ತು ಎರಡು ಕ್ರಿಕೆಟ್ ಮೈದಾನಗಳನ್ನು ಒಳಗೊಂಡಿರುವ ಈ ಆಸ್ತಿಗಳ ಮೌಲ್ಯ ನೂರಾರು ಕೋಟಿ ರೂ.ಗಳಷ್ಟಿದೆ. 1 ಕೋಟಿ ರೂ. ಮೌಲ್ಯದ ನಗದು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಶಿವರಾಜ್ ಸಿಂಗ್ ಚೌಹಾಣ್ ಸರಕಾರದಲ್ಲಿ ಸಚಿವರೊಬ್ಬರ ಆಪ್ತ ರಾಘವೇಂದ್ರ ಸಿಂಗ್ ತೋಮರ್ ಅವರ ಫೇತ್ ಗ್ರೂಫ್ ಮೇಲೂ ದಾಳಿ ನಡೆದಿದೆ ಎನ್ನಲಾಗಿದೆ. ಗ್ವಾಲಿಯರ್-ಚಂಬಲ್ ಪ್ರಾಂತ್ಯದ ಸಚಿವರು ಎನ್ನಲಾಗಿದ್ದು, ಮಾರ್ಚ್ನಲ್ಲಿ ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್ ಸರಕಾರದ ಪತನದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆಂದು ವರದಿಗಳು ಹೇಳಿವೆ. ಈ ದಾಳಿ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವೆ ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾಗಿದೆ. ಕಾಂಗ್ರೆಸ್ ವಕ್ತಾರ ನರೇಂದ್ರ ಸಲೂಜಾ ತೋಮರ್ ಅವರ ಜೊತೆ ಬಿಜೆಪಿ ಸಚಿವರ ಸಂಬಂಧವನ್ನು ಬಹಿರಂಗಪಡಿಸುವಂತೆ ಹೇಳಿದ್ದಾರೆ. ಇನ್ನು, ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ರಜನೀಶ್ ಅಗ್ರವಾಲ್, ಆದಾಯ ತೆರಿಗೆ ಇಲಾಖೆ ಕಾನೂನಿನ ಪ್ರಕಾರ ತನ್ನ ಕೆಲಸ ಮಾಡುತ್ತಿದೆ. ಆದರೆ, ಕಾಂಗ್ರೆಸ್ ಇದರಲ್ಲಿ ರಾಜಕೀಯ ಮಾಡುತ್ತಿದೆ ಎಂದು ಹೇಳಿದ್ದಾರೆ.
from India & World News in Kannada | VK Polls https://ift.tt/3aJFSfp