ಬೆಂಗಳೂರು: ಸಂಪುಟ ವಿಸ್ತರಣೆ ಇಲ್ಲವೇ ಪುನಾರಚನೆಗೆ ಮುಂದಾಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮುಂದಿನ ವಾರಾಂತ್ಯದ ವೇಳೆ ದಿಲ್ಲಿಗೆ ಭೇಟಿ ನೀಡಿ, ವರಿಷ್ಠರ ಜತೆ ಸಮಾಲೋಚನೆ ನಡೆಸುವ ಸಾಧ್ಯತೆಗಳಿವೆ. ತಮ್ಮ ನೇತೃತ್ವದ ಸರಕಾರ ವರ್ಷ ಪೂರೈಸಿದ ಹಿನ್ನೆಲೆಯಲ್ಲಿಸಚಿವ ಸಂಪುಟಕ್ಕೆ ಕಾಯಕಲ್ಪ ಮಾಡಲು ನಿರ್ಧರಿಸಿರುವ ಯಡಿಯೂರಪ್ಪ ಅವರು ಸಂಪುಟ ವಿಸ್ತರಣೆ ಅಥವಾ ಪುನಾರಚನೆಗೆ ವರಿಷ್ಠರ ಜತೆ ಮಾತುಕತೆ ನಡೆಸಲು ನಿರ್ಧರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ರಾಮ ಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ ನಂತರ ವರಿಷ್ಠರ ಭೇಟಿಗೆ ಸಿಎಂ ಸಮಯ ಕೋರಿದ್ದಾರೆ. ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿಯಾಗಲು ಬಯಸಿರುವ ಸಿಎಂ, ಬಹುತೇಕ ಮುಂದಿನ ವಾರ ದಿಲ್ಲಿಗೆ ತೆರಳುವ ಸಾಧ್ಯತೆಗಳಿವೆ. ಒಂದು ವೇಳೆ ವರಿಷ್ಠರು ಸಂಪುಟ ವಿಸ್ತರಣೆ ಇಲ್ಲವೇ ಪುನಾರಚನೆಗೆ ಒಪ್ಪಿಗೆ ನೀಡಿದರೂ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆ ಬಳಿಕವೇ ಕಾರ್ಯಕ್ರಮ ನಿಗದಿಯಾಗಬಹುದು ಎಂದು ಹೇಳಲಾಗುತ್ತಿದೆ. ಯಾರಿಗೆಲ್ಲಾ ಸ್ಥಾನ? ಸಂಪುಟದಲ್ಲಿಖಾಲಿ ಇರುವ 6 ಸ್ಥಾನಗಳ ಪೈಕಿ 2 ಸ್ಥಾನಗಳನ್ನು ಖಾಲಿ ಉಳಿಸಿಕೊಂಡು ಉಳಿದ 4 ಅನ್ನು ಭರ್ತಿ ಮಾಡಬೇಕೋ ಅಥವಾ ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿಕೆಲವು ಹಿರಿಯರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ಮಾಡಿಕೊಡಬೇಕೋ ಎಂಬುದು ಸಹ ವರಿಷ್ಠರ ಜತೆಗಿನ ಮಾತುಕತೆ ಸಂದರ್ಭದಲ್ಲೇ ನಿರ್ಧಾರವಾಗಲಿದೆ. ಇತ್ತೀಚೆಗೆ ಮೇಲ್ಮನೆ ಸದಸ್ಯರಾಗಿರುವ ಮಾಜಿ ಸಚಿವರಾದ ಎಚ್.ವಿಶ್ವನಾಥ್, ಎಂ.ಟಿ.ಬಿ.ನಾಗರಾಜ್, ಸಿ.ಪಿ.ಧಿಯೋಗೇಶ್ವರ್ ಹಾಗೂ ಆರ್.ಶಂಕರ್ ಜತೆಗೆ ಹಿರಿಯ ಶಾಸಕರಾದ ಉಮೇಶ್ ಕತ್ತಿ ಸೇರಿ ಹಲವರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಲಭ್ಯ ಮಾಹಿತಿಗಳ ಪ್ರಕಾರ ಸಿಎಂ ಅವರು ಸಂಪುಟ ಪುನಾರಚನೆಗೆ ಒಲವು ತೋರಿರುವುದರಿಂದ ಹಲವು ಹಿರಿಯರಲ್ಲಿಸಂಪುಟದಿಂದ ಕೈಬಿಡುವ ಆತಂಕ ಶುರುವಾಗಿದೆ.
from India & World News in Kannada | VK Polls https://ift.tt/2EBiFjC