ಹೊಸದಿಲ್ಲಿ: ಟೀಮ್ ಇಂಡಿಯಾಗೆ ಶುಭ ಸುದ್ದಿಯೊಂದು ಬಂದಿದ್ದು, ಗಾಯದ ಸಮಸ್ಯೆಗೆ ತುತ್ತಾಗಿರುವ ಬಲಗೈ ಬೌಲಿಂಗ್ ಸೆನ್ಸೇಷನಲ್ ಜಸ್ಪ್ರೀತ್ ಬುಮ್ರಾಗೆ ಶಸ್ತ್ರಚಿಕಿತ್ಸೆ ಬೇಕಾಗಿಲ್ಲ ಎಂಬುದು ತಿಳಿದು ಬಂದಿದೆ. ದಕ್ಷಿಣ ಆಫ್ರಿಕಾ ಸರಣಿ ಆರಂಭಕ್ಕೂ ಮುನ್ನ ಯುವ ವೇಗಿ ಬೆನ್ನಿನ ಕೆಳಭಾಗದಲ್ಲಿ ಸ್ಟ್ರೆಸ್ ಫ್ರಾಕ್ಚರ್ (ಒತ್ತಡ ಮುರಿತ) ಗಾಯದ ಸಮಸ್ಯೆಗೊಳಗಾಗಿದ್ದರು. ಬಳಿಕ ಹೆಚ್ಚುವರಿ ಚಿಕಿತ್ಸೆ ಹಾಗೂ ತಜ್ಞ ವೈದ್ಯರ ಸಲಹೆಯನ್ನು ಪಡೆಯಲು ಬ್ರಿಟನ್ಗೆ ತೆರಳಿದ್ದರು. ಬುಮ್ರಾಗೆ ತಗುಲಿರುವ ಗಾಯದ ಸಮಸ್ಯೆಯು ಗಂಭೀರವಾಗಿಲ್ಲ. ಹಾಗಾಗಿ ಶಸ್ತ್ರಚಿಕಿತ್ಸೆಯ ಅಗತ್ಯವಿಲ್ಲ ಎಂಬುದನ್ನು ಬೌಲಿಂಗ್ ಕೋಚ್ ಭರತ್ ಅರುಣ್ ಸ್ಪಷ್ಟಪಡಿಸಿದ್ದಾರೆ. ಹಾಗಿದ್ದರೂ ಬುಮ್ರಾ ಸದ್ಯದಲ್ಲೇ ಸ್ಪರ್ಧಾತ್ಮಕ ಕ್ರಿಕೆಟ್ಗೆ ಮರಳುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಮುಂಬರುವ ತವರಿನಲ್ಲಿ ನಡೆಯಲಿರುವ ಬಾಂಗ್ಲಾದೇಶ, ವೆಸ್ಟ್ಇಂಡೀಸ್ ಹಾಗೂ ಮುಂದಿನ ವರ್ಷಾರಂಭದ ಶ್ರೀಲಂಕಾ ಸರಣಯಿಂದಲೂ ಹೊರಗುಳಿಯುವ ಸಾಧ್ಯತೆಯಿದೆ. ಬುಮ್ರಾ ಮುಂದಿನ ವರ್ಷ ನ್ಯೂಜಿಲೆಂಡ್ ಸರಣಿ ವೇಳೆಯಷ್ಟೇ ಸಂಪೂರ್ಣ ಫಿಟ್ನೆಸ್ ಮರಳಿ ಪಡೆಯುವ ಗುರಿಯನ್ನು ಟೀಮ್ ಮ್ಯಾನೇಜ್ಮೆಂಟ್ ಹೊಂದಿದೆ. 2020 ಜನವರಿ 24ರಿಂದ ಭಾರತದ ನ್ಯೂಜಿಲೆಂಡ್ ಪ್ರವಾಸ ಆರಂಭವಾಗಲಿದೆ. ವಿದೇಶ ನೆಲದಲ್ಲಿ ಬುಮ್ರಾ ಅದ್ಭುತ ಪ್ರದರ್ಶನ ನೀಡಿದ್ದಾರೆ. ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ಆಸ್ಟ್ರೇಲಿಯಾ ಹಾಗೂ ವೆಸ್ಟ್ಇಂಡೀಸ್ ನೆಲದಲ್ಲಿ ಈಗಗಾಲೇ ಐದು ವಿಕೆಟ್ ಸಾಧನೆ ಮಾಡಿದ್ದಾರೆ. ಇಲ್ಲಿ ಗಮನಾರ್ಹ ಅಂಶವೆಂದರೆ ಬುಮ್ರಾ ತವರಿನಲ್ಲಿ ಇನ್ನಷ್ಟೇ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಬೇಕಿದೆ. ರೆಡಿಯೋಲಾಜಿಕಲ್ ಸ್ಕ್ರೀನಿಂಗ್ನಲ್ಲಿ ಬುಮ್ರಾ ಗಾಯದ ಸಮಸ್ಯೆ ಬಯಲಾಗಿತ್ತು. ಬಳಿಕ ತಜ್ಞರ ಸಲಹೆ ಹಾಗೂ ಚಿಕಿತ್ಸಾ ವಿಧಾನವನ್ನು ನಿರ್ಧರಿಸಲು ಲಂಡನ್ಗೆ ಪ್ರಯಾಣಿಸಿದ್ದರು. ಈ ಸಂದರ್ಭದಲ್ಲಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಚಿಕಿತ್ಸಾ ನಿರ್ದೇಶಕ ಆಶಿಶ್ ಕೌಶಿಕ್ ಸಾಥ್ ನೀಡಿದ್ದರು. ಸದ್ಯ ಜಸ್ಪ್ರೀತ್ ಬುಮ್ರಾ, ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನದ ಹಂತದಲ್ಲಿದ್ದಾರೆ. ಆದರೆ ಸ್ಟ್ರೆಸ್ ಫ್ರಾಕ್ಚರ್ಗಳಂತಹ ಇಂಜುರಿ ಸಮಸ್ಯೆಗಳು ಘಟಿಸಿದಾಗ ಯಾವಾಗ ಪುನಶ್ಚೇತನಗೊಳ್ಳಲಿದ್ದಾರೆ ಎಂಬುದನ್ನು ಸಮಯ ನಿಗದಿಪಡಿಸುವುದು ಅಸಾಧ್ಯವೆನಿಸುತ್ತದೆ. ಜಸ್ಪ್ರೀತ್ ಬುಮ್ರಾ 58 ಏಕದಿನಗಳಲ್ಲಿ 103 ಹಾಗೂ 42 ಟಿ20 ಪಂದ್ಯಗಳಲ್ಲಿ 52 ವಿಕೆಟ್ಗಳನ್ನು ಕಬಳಿಸಿದ್ದಾರೆ. ಮುಂದಿನ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟ್ವೆಂಟಿ-20 ವಿಶ್ವಕಪ್ನಲ್ಲೂ ಬುಮ್ರಾ ಸಾನಿಧ್ಯ ಭಾರತದ ಪಾಲಿಗೆ ಅತ್ಯಂತ ನಿರ್ಣಾಯಕವೆನಿಸಿದೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2p64Q5A