ಹೊಸದಿಲ್ಲಿ: ಹೂಡಿಕೆದಾರರು ಮತ್ತು ಸಂಬಂಧಿಸಿದ ದೇಶಗಳ ನಡುವಿನ ವ್ಯಾಜ್ಯ ಇತ್ಯರ್ಥ ವ್ಯವಸ್ಥೆ(ಐಎಸ್ಡಿಎಸ್) ಹಾಗೂ ದತ್ತಾಂಶ ಸ್ಥಳೀಕರಣ ಮಾಡುವ ವಿಷಯಗಳಲ್ಲಿ ಭಾರತ ಮತ್ತು ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವದ() ಸದಸ್ಯ ರಾಷ್ಟ್ರಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಬಹುದು. ಆದರೆ, ಸುಂಕ ಕಡಿತಕ್ಕೆ ಸಂಬಂಧಿಸಿದಂತೆ ಮೂಲ ವರ್ಷವನ್ನು 2019ಕ್ಕೆ ಬದಲಾಯಿಸಬೇಕು ಎನ್ನುವ ಭಾರತದ ಬೇಡಿಕೆಗಳು ಒಪ್ಪಂದಕ್ಕೆ ಅಡ್ಡಿಯಾಗುವ ಸಾಧ್ಯತೆಗಳಿವೆ. ಮೂಲ ವರ್ಷವನ್ನು ಬದಲಾಯಿಸಬೇಕು ಎನ್ನುವ ಭಾರತದ ಬೇಡಿಕೆಯನ್ನು ಇತರ ಸದಸ್ಯ ರಾಷ್ಟ್ರಗಳು ಅಸಮಂಜಸವೆಂದು ಪರಿಗಣಿಸಿವೆ. ಏಕೆಂದರೆ, ಇಡೀ ಒಪ್ಪಂದವನ್ನು 2014ರ ಮೂಲ ವರ್ಷದ ಅನ್ವಯವೇ ರೂಪಿಸಲಾಗಿದೆ. ಅಲ್ಲದೇ, ಚೀನಾದ ಆಮದು ವಹಿವಾಟಿನ ಮೇಲೆ ನಿಗಾ ಇಡುವ ಕಾರ್ಯವಿಧಾನವು ಒಪ್ಪಂದವನ್ನು ಮುರಿಯುವ ಸಾಧ್ಯತೆ ಇದೆ. 'ಐದು ವರ್ಷಗಳ ಬಳಿಕ ಅದನ್ನು ಒಪ್ಪಂದದೊಳಗೆ ಸೇರಿಸಬೇಕೇ, ಅಥವಾ ಬೇಡವೇ ಎನ್ನುವ ಬಗ್ಗೆ ಬಹುಮತದ ಆಧಾರದಲ್ಲಿನಿರ್ಧರಿಸಲಾಗುತ್ತದೆ. ಸದ್ಯಕ್ಕೆ ಐಎಸ್ಡಿಎಸ್ ಬಿಕ್ಕಟ್ಟು ನಿವಾರಣೆಯಾಗಿದೆ' ಎಂದು ವಾಣಿಜ್ಯ ಸಚಿವಾಲಯದ ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ಹೇಳಿದ್ದಾರೆ. 'ಇ-ಕಾಮರ್ಸ್ ವಲಯದಲ್ಲಿವಿವಾದ ಬಗೆಹರಿಸಲು ಯಾವುದೇ ವ್ಯಾಜ್ಯ ಇತ್ಯರ್ಥ ವ್ಯವಸ್ಥೆ ಇರಬಾರದು ಎಂಬುದಕ್ಕೆ ಆರ್ಸಿಇಪಿ ಒಪ್ಪಿಕೊಂಡಿದೆ. ಅಂದರೆ ನಮ್ಮ ದೇಶದ ಶಾಸನವನ್ನು ಪ್ರಶ್ನಿಸುವ ವ್ಯಾಪ್ತಿಯು ಆರ್ಸಿಇಪಿಗೆ ಇರುವುದಿಲ್ಲ. ಇದು ನಮ್ಮ ಪಾಲಿಗೆ ಅನುಕೂಲದ ವಿಚಾರ' ಎಂದು ಅವರು ಹೇಳಿದ್ದಾರೆ. ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘದ(ಆಸಿಯಾನ್) 10 ಸದಸ್ಯ ರಾಷ್ಟ್ರಗಳು ಮತ್ತು ಚೀನಾ, ಭಾರತ, ದಕ್ಷಿಣ ಕೊರಿಯಾ, ಜಪಾನ್, ನ್ಯೂಜಿಲೆಂಡ್ ಮತ್ತು ಆಸ್ಪ್ರೇಲಿಯಾ ಸೇರಿದಂತೆ ಅದರ 6 ಎಫ್ಟಿಎ ಪಾಲುದಾರರ ನಡುವೆ ಒಪ್ಪಂದ ನಡೆಯಲಿದೆ. ಇದೊಂದು ಮುಕ್ತ ವ್ಯಾಪಾರ ಒಪ್ಪಂದವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 4ರಂದು ಬ್ಯಾಂಕಾಕ್ಗೆ ತೆರಳಿ, ಅಲ್ಲಿನ ಇತರ ಆರ್ಸಿಇಪಿ ರಾಷ್ಟ್ರಗಳ ಮುಖ್ಯಸ್ಥರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಒಪ್ಪಂದಕ್ಕೆ ಸೇರಬೇಕೆ ಅಥವಾ ಬೇಡವೇ ಎನ್ನುವುದನ್ನು ಭಾರತ ಇನ್ನೂ ತೀರ್ಮಾನಿಸಿಲ್ಲ. ಆರ್ಸಿಇಪಿ ಒಪ್ಪಂದ ವಿರೋಧಿಸುತ್ತಿರುವವರು ಯಾರು?ರೈತ ಸಂಘಟನೆಗಳು, ದೇಶೀಯ ಕೈಗಾರಿಕೆ ಮತ್ತು ಪ್ರತಿಪಕ್ಷಗಳಿಂದ ಈ ಒಪ್ಪಂದದ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಅಸಮಾಧಾನಗಳು ಕೇಳಿ ಬರುತ್ತಿವೆ. ಎಕಾನಮಿಗೆ 3ನೇ ಏಟು: ಕಾಂಗ್ರೆಸ್ ಎಚ್ಚರಿಕೆಆರ್ಸಿಇಪಿ ಒಪ್ಪಂದಕ್ಕೆ ಸಹಿ ಹಾಕಲು ಮೋದಿ ಮುಂದಾದರೆ, ಅದು ಭಾರತದ ಆರ್ಥಿಕತೆಯ ಮೇಲಿನ ಮೂರನೇ ಆಕ್ರಮಣವಾಗಲಿದೆ. ನೋಟು ಅಮಾನ್ಯತೆ ಮತ್ತು ಜಿಎಸ್ಟಿಯಿಂದ ತತ್ತರಿಸಿದ ಭಾರತಕ್ಕೆ ಆರ್ಸಿಇಪಿ ಹೊಡೆತ ನೀಡಲಿದೆ ಎಂದು ಮಾಜಿ ಕೇಂದ್ರ ಸಚಿವ ಜೈರಾಮ್ ರಮೇಶ್ ಅಭಿಪ್ರಾಯ ಪಟ್ಟಿದ್ದಾರೆ. ನಾವು ಯು-ಟರ್ನ್ ಪಡೆಯುತ್ತಿಲ್ಲ. ಯುಪಿಎ ಸರಕಾರದ ಅವಧಿಯಲ್ಲಿ ಆರ್ಸಿಇಪಿ ಮುಕ್ತ ವ್ಯಾಪಾರದ ಕುರಿತು ಮಾತುಕತೆಗಳು ನಡೆದಿದ್ದವು. ಆಗ ಈಗಿನಂತೆ ಆರ್ಥಿಕ ಸಂಕಷ್ಟ ಇರಲಿಲ್ಲ. ಆಘ ಹೂಡಿಕೆಯ ಉಬ್ಬರವಿತ್ತು, ರಫ್ತುಗಳು ಹೆಚ್ಚಾಗಿದ್ದವು. ಆಗ ಮತ್ತು ಈಗಿನ ಸ್ಥಿತಿಗತಿಗೆ ವ್ಯತ್ಯಾಸಗಳಿವೆ ಎಂದಿದ್ದಾರೆ.
from India & World News in Kannada | VK Polls https://ift.tt/2NdhMys