ಬೆಂಗಳೂರು: 2018ನೇ ಸಾಲಿನ ಕರ್ನಾಟಕ ಪ್ರೀಮಿಯರ್ ಲೀಗ್ ಹಗರಣಕ್ಕೆ ಸಂಬಂಧಪಟ್ಟಂತೆ ಬೆಂಗಳೂರು ಬ್ಲಾಸ್ಟರ್ಸ್ ಫ್ರಾಂಚೈಸಿಯ ಬ್ಯಾಟ್ಸ್ಮನ್ ಎಂ ವಿಶ್ವನಾಥನ್ ಮತ್ತು ಬೌಲಿಂಗ್ ಕೋಚ್ ವಿನೂ ಪ್ರಸಾದ್ ಅವರನ್ನು ಬಂಧಿಸಲಾಗಿದೆ. ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಕರ್ನಾಟಕ ಪೊಲೀಸ್ ಅಪರಾಧ ದಳ ವಿಭಾಗ (ಸಿಸಿಬಿ), ಬೆಂಗಳೂರು ಬ್ಲಾಸ್ಟರ್ಸ್ ಬ್ಯಾಟ್ಸ್ಮನ್ ವಿಶ್ವನಾಥನ್ ಹಾಗೂ ಬೌಲಿಂಗ್ ಕೋಚ್ ವಿನೂ ಪ್ರಸಾದ್ರನ್ನು ಶುಕ್ರವಾರ ವಶಕ್ಕೆ ತೆಗೆದುಕೊಂಡಿದೆ. ಸಿಸಿಬಿ ವಿಭಾಗದ ಜಂಟಿ ಪೊಲೀಸ್ ಆಯುಕ್ತರಾದ ಸಂದೀಪ್ ಪಾಟೀಲ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಕೆಪಿಎಲ್ನಲ್ಲಿ ಮಗದೊಂದು ಫಿಕ್ಸಿಂಗ್ ಹಗರಣವನ್ನು ಪತ್ತೆ ಹಚ್ಚಲಾಗಿದ್ದು, ಬೆಂಗಳೂರು ಬ್ಲಾಸ್ಟರ್ಸ್ ತಂಡದ ಬೌಲಿಂಗ್ ಕೋಚ್ ವಿನೂ ಪ್ರಸಾದ್ ಮತ್ತು ಬ್ಯಾಟ್ಸ್ಮನ್ ವಿಶ್ವನಾಥನ್ರನ್ನು ಬಂಧಿಸಲಾಗಿದೆ ಎಂದಿದ್ದಾರೆ. ನಿಧಾನವಾಗಿ ಆಡಲು ಫಿಕ್ಸ್? 2018ನೇ ಸಾಲಿನ ಕೆಪಿಎಲ್ ಪಂದ್ಯವೊಂದರಲ್ಲಿ ನಿಧಾನವಾಗಿ ಆಡಲು ಐದು ಲಕ್ಷ ರೂ.ಗಳಿಗೆ ವಿಶ್ವನಾಥನ್ ಫಿಕ್ಸಿಂಗ್ ಮಾಡಿರುವುದು ಬಯಲಾಗಿದೆ. ಪ್ರಕರಣದಲ್ಲಿ ಮತ್ತಷ್ಟು ಬುಕ್ಕಿಗಳು ಶಾಮೀಲಾಗಿರುವುದು ಕಂಡುಬಂದಿದ್ದು, ಈ ಸಂಬಂಧ ಮತ್ತಷ್ಟು ಬಂಧನಗಳು ಶೀಘ್ರದಲ್ಲೇ ನಡೆಯಲಿದೆ. ಬಳ್ಳಾರಿ ಟಸ್ಕರ್ಸ್ ತಂಡದಲ್ಲಿದ್ದ ಡ್ರಮ್ಮರ್ ಭವೇಶ್ ಬಾಫ್ನಾ ಬಂಧನದಿಂದ ಫಿಕ್ಸಿಂಗ್ ಬಗ್ಗೆ ಸುಳಿವು ದೊರಕಿತ್ತು. ಕೆಪಿಎಲ್ ಭ್ರಷ್ಟಾಚಾರ ಸಂಬಂಧ ಅಕ್ಬೋಬರ್ 3ರಂದು ಬಾಫ್ನಾರನ್ನು ಬಂಧಿಸಿದ್ದರು. ಇದಕ್ಕೂ ಮೊದಲು ಬೆಟ್ಟಿಂಗ್ ಸಂಬಂಧ ಸೆಪ್ಟೆಂಬರ್ 24ರಂದು ಬೆಳಗಾವಿ ಪ್ಯಾಂಥರ್ಸ್ ಮಾಲಿಕ ಅಶ್ಫಾಕ್ ಅಲಿ ತಾರಾರನ್ನು ಬಂಧನಗೊಳಪಡಿಸಿ ವಿಚಾರಣೆಗೊಳಪಡಿಸಲಾಗಿತ್ತು. ಕೆಪಿಎಲ್ 2018ರಲ್ಲಿ ಮೂರು ಪಂದ್ಯಗಳನ್ನು ಆಡಿರುವ ವಿಶ್ವನಾಥನ್, ಅನುಕ್ರಮವಾಗಿ ಬಳ್ಳಾರಿ ಟಸ್ಕರ್ಸ್ ವಿರುದ್ಧ 13 ಎಸೆತಗಳಲ್ಲಿ 14 ರನ್, ನಮ್ಮ ಶಿವಮೊಗ್ಗ ವಿರುದ್ಧ 6 ಎಸೆತಗಳಲ್ಲಿ ಐದು ರನ್ ಮತ್ತು ಹುಬ್ಬಳ್ಳಿ ಟೈಗರ್ಸ್ ವಿರುದ್ಧ 17 ಎಸೆತಗಳಲ್ಲಿ 9 ರನ್ ಗಳಿಸಿದ್ದರು. ಫಿಕ್ಸಿಂಗ್ ಬಗ್ಗೆ ಹೆಚ್ಚಿನ ಮಾಹಿತಿ ನೀಡಿರುವ ಪಾಟೀಲ್, ಡ್ರಮ್ಮರ್ ಹಾಗೂ ದಿಲ್ಲಿ ಮೂಲದ ಮಗದೋರ್ವ ಬುಕ್ಕಿ ಸನ್ಯಾಮ್ ಕಳೆದ ವರ್ಷ ಮ್ಯಾಚ್ ಫಿಕ್ಸಿಂಗ್ ಮಾಡಲು ಬಳ್ಳಾರಿ ಟಸ್ಕರ್ಸ್ ಆಟಗಾರರೊಬ್ಬರನ್ನು ಸಂಪರ್ಕ ನಡೆಸಿದ್ದರು. ಆದರೆ ಬೌಲರ್ ನಿರಾಕರಿಸಿದ್ದರು. ಇದೀಗ ಸನ್ಯಾಮ್ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದಿದ್ದಾರೆ. ಒಟ್ಟಾರೆಯಾಗಿ 2019ರ ಫಿಕ್ಸಿಂಗ್ ಬೆನ್ನಟ್ಟಿ ಹೋಗಿರುವ ಪೊಲೀಸರಿಗೆ 2018ರ ಫಿಕ್ಸಿಂಗ್ ಬಯಲು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಸಿಸಿಬಿ ಪೊಲೀಸರೀಗ ಮತ್ತಷ್ಟು ಅಪರಾಧಿಗಳನ್ನು ಬಂಧಿಸಲಿದ್ದು, ಪ್ರಕರಣ ಕರ್ನಾಟಕ ಕ್ರಿಕೆಟ್ಗೆ ಕಳಂಕ ತಟ್ಟುವಂತಾಗಿದೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2qMeFWI