ಬೆಳಗಾವಿ: ತವರಿಗೆ ತೆರಳಿದ್ದ ಪತ್ನಿಯನ್ನು ಕರೆದುಕೊಂಡು ಬರಲು ತೆರಳಿದ್ದ ಯೋಧನೊಬ್ಬ ಪತ್ನಿ ಹಾಗೂ ಅತ್ತೆ, ಮಾವನ ಮೇಲೆ ಗಂಭೀರ ಹಲ್ಲೆ ಮಾಡಿರುವ ಬಗ್ಗೆ ಪೊಲೀಸ್ ದೂರು ದಾಖಲಾಗಿದೆ. ಅಗಸಗಾ ಗ್ರಾಮದ ನಿವಾಸಿ, ಯೋಧ ಹೇಮಂತಕುಮಾರ ರಂಗಾನಿ (26) ಆತನ ತಂದೆ ವಿಠ್ಠಲ ರಂಗಾನಿ (56), ತಾಯಿ ಸಂಗೀತಾ ರಂಗಾನಿ (47) ವಿರುದ್ಧ ಪ್ರಕರಣ ದಾಖಲಾಗಿದೆ. ಗಂಭೀರ ಗಾಯಗೊಂಡಿರುವ ಕೊಂಡಸಕೊಪ್ಪ ಗ್ರಾಮದ ಲಕ್ಷತ್ರ್ಮಣ ದೇಸಾಯಿ (40), ಇಂದಿರಾ ದೇಸಾಯಿ (38) ಹಾಗೂ ಆರೋಪಿಯ ಪತ್ನಿ ದೀಪಾ ರಂಗಾನಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಯ ಬಗ್ಗೆ ಆರೋಪಿಗಳ ವಿರುದ್ಧ ದೀಪಾ ಪೊಲೀಸರಿಗೆ ದೂರು ನೀಡಿದ್ದಾರೆ. ಘಟನೆ ಹಿನ್ನೆಲೆ?: ಹತ್ತು ತಿಂಗಳ ಹಿಂದೆ ದೀಪಾ ಮತ್ತು ಹೇಮಂತಕುಮಾರ ಅವರ ವಿವಾಹ ನಡೆದಿತ್ತು. ಹೇಮಂತಕುಮಾರ ಭಾರತೀಯ ಸೇನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ದೀಪಾ ದೀಪಾವಳಿಗೆ ತವರು ಮನೆಗೆ ಹೋಗಿದ್ದರು. ಡಿ.22ರ ರಾತ್ರಿ ದೀಪಾಳ ತವರು ಮನೆಗೆ ತೆರಳಿದ್ದ ಹೇಮಂತಕುಮಾರ ರಾತ್ರಿಯೇ ಪತ್ನಿಯನ್ನು ತನ್ನೊಂದಿಗೆ ಕಳುಹಿಸಿಕೊಡುವಂತೆ ಕೇಳಿದ್ದಾನೆ. ರಾತ್ರಿ ಮನೆಯಲ್ಲಿ ಇದ್ದು ಬೆಳಗ್ಗೆ ಹೋಗುವಂತೆ ದೀಪಾಳ ತಾಯಿ ಹೇಳಿದ್ದಾರೆ. ಇದರಿಂದ ಸಿಟ್ಟಾದ ಹೇಮಂತಕುಮಾರ ಕುಡುಗೋಲಿನಿಂದ ಅತ್ತೆ ಮೇಲೆ ಹಲ್ಲೆ ನಡೆಸಿದ್ದಾನೆ. ಬಿಡಿಸಲು ಬಂದ ಪತ್ನಿ ಮತ್ತು ಮಾವನ ಮೇಲೂ ಹಲ್ಲೆ ನಡೆಸಿದ್ದಾನೆ. ಅಕ್ಕ ಪಕ್ಕದವರು ಬಂದು ಹೇಮಂತ ಕುಮಾರನನ್ನು ತಡೆದಿದ್ದಾರೆ. ಇದರ ಬಳಿಕ ಹೇಮಂತಕುಮಾರನ ತಂದೆ, ತಾಯಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೀಪಾ ಪೊಲೀಸರಿಗೆ ಕೊಟ್ಟ ದೂರಿನಲ್ಲಿ ತಿಳಿಸಿದ್ದಾರೆ. ಘಟನೆ ಸಂಬಂಧ ಹಿರೇಬಾಗೇವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
from India & World News in Kannada | VK Polls https://ift.tt/34DHLII