ಬೆಂಗಳೂರು: ಕರ್ನಾಟಕ ಭೂಸುಧಾರಣೆ ಕಾಯಿದೆಗೆ ತಿದ್ದುಪಡಿ ತಂದು ಸರಕಾರ 2ನೇ ಬಾರಿ ಹೊರಡಿಸಿರುವ ಸುಗ್ರೀವಾಜ್ಞೆ ಆಧರಿಸಿ ಕೈಗೊಳ್ಳುವ ಎಲ್ಲ ಕ್ರಮಗಳೂ ನೀಡುವ ಅಂತಿಮ ಆದೇಶಕ್ಕೆ ಒಳಪಡಲಿದೆ ಎಂದು ಹೈಕೋರ್ಟ್ ಮಧ್ಯಂತರ ನೀಡಿದೆ. ಕಳೆದ ಜುಲೈನಲ್ಲಿ ಮೊದಲ ಸಲ ಹೊರಡಿಸಿದ್ದ ಸುಗ್ರೀವಾಜ್ಞೆ ಪ್ರಶ್ನಿಸಿ ಭಾರತೀಯ ಕಿಸಾನ್ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಸಿ. ಗಂಗಾಧರಯ್ಯ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹೈಕೋರ್ಟ್ಗೆ ಪಿಐಎಲ್ ಸಲ್ಲಿಸಿದ್ದವು. ಈ ಮಧ್ಯೆ, ತಿದ್ದುಪಡಿ ವಿಧೇಯಕಕ್ಕೆ ಪರಿಷತ್ನಲ್ಲಿ ಅನುಮೋದನೆ ದೊರಕಿದ್ದರಿಂದ ಎರಡನೇ ಸಲ ಸುಗ್ರೀವಾಜ್ಞೆ ಹೊರಡಿಸಿತ್ತು. ಹಾಗಾಗಿ, ಅರ್ಜಿಗಳ ತಿದ್ದುಪಡಿಗೆ ಅವಕಾಶ ಕೋರಿ ಮಧ್ಯಂತರ ಅರ್ಜಿ ಸಲ್ಲಿಸಲಾಗಿತ್ತು. ಆ ಅರ್ಜಿಗಳನ್ನು ಬುಧವಾರ ಪರಿಶೀಲಿಸಿದ ಸಿಜೆ ಎ.ಎಸ್.ಓಕ್ ನೇತೃತ್ವದ ವಿಭಾಗೀಯ ಪೀಠ, ಎಲ್ಲ ಅರ್ಜಿದಾರರಿಗೆ ತಿದ್ದುಪಡಿಗಳನ್ನು ಮಾಡಲು ಅವಕಾಶ ನೀಡಿ, ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿ ಆಕ್ಷೇಪಣೆ ಸಲ್ಲಿಸಲು ಸೂಚಿಸಿತು. ಅಲ್ಲದೆ, ಸುಗ್ರೀವಾಜ್ಞೆ ಆಧರಿಸಿ ಕೈಗೊಳ್ಳುವ ಯಾವುದೇ ಕ್ರಮ ಹೈಕೋರ್ಟ್ ನೀಡುವ ಅಂತಿಮ ಆದೇಶಕ್ಕೆ ಒಳಪಡಲಿದೆ ಎಂದು ಆದೇಶಿಸಿತು. ಕರ್ನಾಟಕ ಭೂ ಸುಧಾರಣಾ ಕಾಯಿದೆ-1961ಕ್ಕೆ ತಿದ್ದುಪಡಿ ಸಂಬಂಧ ಸರಕಾರ ಸುಗ್ರೀವಾಜ್ಞೆ ಹೊರಡಿಸಿದೆ. ಅದರಂತೆ ಖಾಸಗಿ ಕಂಪೆನಿಗಳು, ಟ್ರಸ್ಟ್ಗಳು ಖರೀದಿಸುವ ಜಮೀನಿನ ಪ್ರಮಾಣಕ್ಕೆ ಯಾವುದೇ ನಿರ್ಬಂಧ ವಿಧಿಸಿಲ್ಲ. ಇದು ಪರೋಕ್ಷವಾಗಿ ಜಮೀನು ಕಬಳಿಕೆಯನ್ನು ಉತ್ತೇಜಿಸುತ್ತದೆ. ತಿದ್ದುಪಡಿ ನಿಯಮವು ಸಂವಿಧಾನದ ಮೂಲ ಸ್ವರೂಪಕ್ಕೆ ಧಕ್ಕೆ ತಂದಿದೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.
from India & World News in Kannada | VK Polls https://ift.tt/3oiPune