ಲೇಖಕಿ -ಜಯಶ್ರೀ ದೇಶಪಾಂಡೆ ಸರಸ್ವತಿ ಪೂಜೆಯ ದಿನಂದು ಹುಬ್ಬಳ್ಳಿಯ ವೈದ್ಯರಾದ ಡಾ. ಎಚ್ ಎ ಕಟ್ಟಿ ಮತ್ತು ಭಾರತಿ ಕಟ್ಟಿಯವರಿಗೆ ಸರಸ್ವತಿಯಂಥ ಮಗಳ ಜನ್ಮವಾಯಿತು. ತಂದೆ ತಾಯಿ 'ಸಂಗೀತಾ' ಎಂಬ ಹೆಸರನ್ನು ಇಟ್ಟಿರುವುದು ಸಾರ್ಥಕವೆನಿಸುವಂತೆ ಎಂಬ ಗಾನ ವಿಶಾರದೆ ನಮ್ಮ ಕನ್ನಡ ನಾಡಿನ ಅಪೂರ್ವ ಕೊಡುಗೆಯಾಗಿ ಕ್ಷೇತ್ರದಲ್ಲಿ ಇಂದಿಗೂ ಪ್ರಜ್ವಲಿಸುವ ತಾರೆಯಾಗಿದ್ದಾರೆ. ಸಂಗೀತಾರ ಕಂಠದಲ್ಲಿ ಅಡಗಿದ್ದ ಸ್ವರಮಾಧುರ್ಯವನ್ನು ಗುರುತಿಸಿ, ಸ್ವತ: ಸಂಗೀತಜ್ಞರಾಗಿದ್ದು ಮಗಳಿಗೆ ಆರಂಭಿಕ ಪಾಠ ಹೇಳಿಕೊಟ್ಟು ಪ್ರೋತ್ಸಾಹಿಸಿದ ತಂದೆ ತಾಯಿಯರ ಒತ್ತಾಸೆ ಕೇವಲ ನಾಲ್ಕರ ಎಳೆ ಬಾಲ್ಯದಲ್ಲೇ ಹಿಂದಿ ಚಲನಚಿತ್ರ ದಿಗ್ಗಜ ಸಂಗೀತ ನಿರ್ದೇಶಕ ನೌಷಾದ್ ಅಲಿಯವರಿಂದ 'ಗಾಯನಲೋಕದ ಅದ್ಭುತ ಈ ಹುಡುಗಿ' ಎಂಬ ಮೆಚ್ಚುಗೆಯನ್ನು ಪಡೆಯಲು ಅನುಗೊಳಿಸಿತು. ಅವರ ಶಿಷ್ಯೆಯಾಗಿ ಪಡೆದ ಹಾಡುಗಾರಿಕೆಯ ಶಿಕ್ಷಣದ ಬುನಾದಿ ಮುಂದೆ ಸಂಗೀತಾರನ್ನು ಅತ್ಯಂತ ಹೆಚ್ಚಿನ ಸಫಲತೆಗಳ ದೀರ್ಘದಾರಿಗೆ ಕರೆದೊಯ್ದಿತು. ಅನಂತರ ಮತ್ತೆ ಸಾಧನೆಯ ಮಾರ್ಗದಲ್ಲಿ ಹಿಂದಿರುಗಿ ನೋಡದ ಸಂಗೀತಾ ನಿರಂತರ ತಪಸ್ಸಿನಂತೆ ಹಲವಾರು ಸಂಗೀತ ಗುರುಶಿರೋಮಣಿಗಳ ಬಳಿ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ, ಭಾವಗೀತೆ, ಭಕ್ತಿಗೀತೆ, ಜಾನಪದ, ಗಜಲ್, ಸೂಫೀ, ಹೀಗೆ ಅಸಂಖ್ಯ ವಿಧದ ಸಂಗೀತ ಪ್ರಕಾರಗಳ ಜ್ಞಾನವನ್ನು ಪಡೆದು ಹಾಡಿದ್ದಾರೆ. ಇವರ ಚಲನಚಿತ್ರ, ಟಿವಿ ಧಾರಾವಾಹಿಯ ಹಾಡುಗಳೂ ಕೂಡ ಅತ್ಯಂತ ಜನಪ್ರಿಯತೆ ಗಳಿಸಿವೆ. ಸಂಗೀತಾರವರು ಚಂದ್ರಶೇಖರ ಪುರಾಣಿಕಮಠ ಹಾಗೂ ಶ್ರೀ ಶೇಷಗಿರಿ ದಂಡಾಪುರ್ ಅವರಿಂದ ಆರಂಭಿಕ ತರಬೇತಿ ಪಡೆದು, ಹೆಚ್ಚಿನ ತರಬೇತಿಯನ್ನು ಕಿರಣಾ ಮತ್ತು ಗ್ವಾಲಿಯರ್ ಘರಾಣಾದ ಪದ್ಮಭೂಷಣ ಪಂಡಿತ ಬಸವರಾಜ ರಾಜಗುರು ಅವರಿಂದ ಸುಮಾರು ಹನ್ನೆರಡು ವರ್ಷಗಳ ಕಾಲ ಪಡೆದರು. ಗುರು ಶಿಷ್ಯಪರಂಪರೆಯ ಸಂಗೀತ ಕಲಿಕೆಯಲ್ಲಿ ಪದ್ಮವಿಭೂಷಣ ಗಾನಸರಸ್ವತಿ ದಿ. ಕಿಶೋರಿ ಅಮೋಣ್ಕರ್ ಅವರ ಮನೆಯಲ್ಲಿ, ಅವರ ಸನ್ನಿಧಾನದಲ್ಲೇ ವಾಸಿಸುತ್ತ ಎಂಟು ವರ್ಷಗಳ ಕಾಲ ಜೈಪುರ್ ಮತ್ತು ಅತ್ರೌಲಿ ಘರಾಣಾಗಳ ಸಂಗೀತ ಸಾಧನೆ ಮಾಡಿದ್ದನ್ನೂ ಸೇರಿ ಸುಮಾರು ಎರಡೂವರೆ ದಶಕಗಳ ಕಾಲ ನಿರಂತರ ಮಾರ್ಗದರ್ಶನ ಪಡೆದರು.. ಏಳು ಸಾವಿರ ಸಂಗೀತ ಕಚೇರಿಗಳನ್ನು ಮಾಡಿರುವ ಸಂಗೀತಾರವರು ಜಗದುದ್ದಗಲಕ್ಕೂ ಸಂಚರಿಸಿ ಹಲವೆಂಟು ವಿದೇಶಗಳಲ್ಲಿ ನಡೆದ ಸಂಗೀತ ಹಬ್ಬಗಳಲ್ಲಿ ಅಲ್ಲಿನವರಿಗೆ ತಮ್ಮ ಹಾಡುಗಳ ರಸಾಸ್ವಾದನೆಯನ್ನು ಒದಗಿಸಿದರು. ಹಾಗೂ ಅಮೇರಿಕ, ಇಂಗ್ಲೆಂಡ್ ನಲ್ಲಿ "ಅಕ್ಕ" ಸಮ್ಮೇಳನಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದರು. ಬೆಂಗಳೂರು ಆಕಾಶವಾಣಿಗಾಗಿ ಭಾರತರತ್ನ ಪಂಡಿತ್ ರವಿಶಂಕರ್ ಅವರ ಠುಮರಿ ರಚನೆಗಳನ್ನು ಹಾಡಿದ್ದಕ್ಕಾಗಿ ಅವರಿಂದ ಪ್ರಶಂಸೆ ಪಡೆದಿದ್ದಾರೆ. 'ನಾಗಮಂಡಲ' ಚಲನಚಿತ್ರದ ಹಿನ್ನೆಲೆ ಗಾಯನಕ್ಕಾಗಿ ಸಂಗೀತಾ ಅವರಿಗೆ ಅತ್ಯುತ್ತಮ ಗಾಯಕಿ ಪ್ರಶಸ್ತಿ ಲಭಿಸಿದೆ. ಹಲವಾರು ವೈವಿಧ್ಯಮಯ ಸಂಗೀತದ ಅಲ್ಬಮ್ ಗಳಲ್ಲದೆ ನಾಲ್ಕು ನೂರಕ್ಕೂ ಹೆಚ್ಚು ಚಲನಚಿತ್ರಗಳಿಗೆ ಹಾಡಿರುವ ಪ್ರತಿಭೆ ಇವರು. ಸಂಗೀತಾ ಅವರು ರಸಾಯನಶಾಸ್ತ್ರದಲ್ಲಿ ಪದವೀಧರೆ. ಕನ್ನಡವಷ್ಟೇ ಅಲ್ಲದೆ ಹಿಂದಿ, ಇಂಗ್ಲೀಷ್, ಮರಾಠಿ ಭಾಷೆಗಳನ್ನು ಚೆನ್ನಾಗಿ ಬಲ್ಲರು. ಪತ್ರಿಕೆಗಳಲ್ಲಿ ಕನ್ನಡ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಸಂಗೀತದ ಕುರಿತು ವಿದ್ವತ್ಪೂರ್ಣ ಲೇಖನಗಳನ್ನು ಸಹ ಬರೆಯುತ್ತಿದ್ದಾರೆ. ಭಾರತದಲ್ಲಿ ಬಹುಮುಖ್ಯ ಸಂಗೀತ ಸಮಾರೋಹಗಳಲ್ಲಿ ಸಾಮಾನ್ಯವಾಗಿ ಅವರ ಕಾರ್ಯಕ್ರಮ ಇದ್ದೇ ಇರುವುದು ಅಪರೂಪವಲ್ಲ. ಸಂಗೀತಾ ಕಟ್ಟಿಯವರ ವೆಬ್ ಸೈಟಿನಲ್ಲಿ ಅವರು ನಡೆಸಿರುವ ಸಂಗೀತ ಕಚೇರಿಗಳು, ಅವರು ಜೊತೆ ಧ್ವನಿಗೂಡಿಸಿರುವ ಸಂಗೀತ ಲೋಕದ ದಿಗ್ಗಜರು, ಅವರು ವ್ಯಾಪಿಸಿರುವ ವಿಸ್ತಾರಗಳು ಅಚ್ಚರಿ ಮೂಡಿಸುತ್ತವೆ. ಆದರೂ ಕನ್ನಡಿಗರಿಗೆ ಇವರು ನಮ್ಮವರು ಎಂಬುದೊಂದು ಭಾವನೆ ಅವರೊಂದಿಗೆ ಇನ್ನೂ ಆತ್ಮೀಯವಾದ ನಂಟನ್ನು ಬೆಸೆಯುತ್ತದೆ. ಕರ್ನಾಟಕ ಸರಕಾರದ ಅತ್ಯುಚ್ಚ ನಾಗರಿಕ ಪ್ರಶಸ್ತಿಯಾದ 'ಸುವರ್ಣ ಸನ್ಮಾನ'ವನ್ನು ಇವರು 2006-2007 ರಲ್ಲಿ ಪಡೆದಿರುವ ಸಂಗೀತಾ ಇಂಥದೊಂದು ಪುರಸ್ಕಾರ ಪಡೆದಿರುವ ಅತಿ ಕಿರಿ ವಯಸ್ಸಿನ ಗಾನ ಕೋಗಿಲೆ. ಪಂಡಿತ್ ರಾಜಗುರು ರಾಷ್ಟ್ರೀಯ ಪುರಸ್ಕಾರ 2011, ನ್ಯೂಸ್ 18, ಸಿ ಎನ್ ಬಿಸಿ, 1000 petals ಇವರಿಂದ 'ಸಾರ್ಥಕ ನಾರಿ ಪ್ರಶಸ್ತಿ 2016,' ಇವೆಲ್ಲವನ್ನೂ ಮುಡಿಗೇರಿಸಿಕೊಂಡಿದ್ದಾರೆ. ವಚನಸಂಗೀತದ ಅಪ್ರತಿಮ ಹಾಡುಗಾರಿಕೆಗಾಗಿ "ಬಸವಶ್ರೀ ವಚನಸಾಹಿತ್ಯಶ್ರೀ" ಪುರಸ್ಕಾರವು ಇವರನ್ನು ಅರಸಿಕೊಂಡು ಬಂದಿತು. "22ಜುಲೈ 1974" ಎಂಬ ಅವರ ಪ್ರಪ್ರಥಮ ಚಲನಚಿತ್ರ ಸಂಗೀತ ನಿರ್ದೇಶನದ ಆರಂಭಿಕ ಕಿರು ಮುದ್ರಿಕೆಯ(ಟೀಸರ್) ವೀಡಿಯೋವನ್ನು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಖುದ್ದಾಗಿ ಬಿಡುಗಡೆ ಮಾಡಿದರಲ್ಲದೆ ಸಂಗೀತಾ ಅವರಿಗೆ 'ನಾದಬ್ರಹ್ಮೋ ವಿಜಯತೇ' ಎಂದು ಆಶೀರ್ವದಿಸಿ ಹಾರೈಸಿದ್ದಾರೆ. ಇಂದು ನಮ್ಮ ನಿಮ್ಮೆಲ್ಲರ ನಡುವಿರುವ ಈ ಅಪರೂಪದ ಗಾನಪ್ರತಿಭೆ ತಮ್ಮ ಸ್ವರೋತ್ತುಂಗ ಸಾಧನೆಯ ಮೇರುಸ್ತರವನ್ನು ಇನ್ನೂ ವಿಸ್ತರಿಸುತ್ತಲೇ ಹೊರಟಿದ್ದಾರೆ. ಸಂಗೀತಾರವರ ನಾದಾಲಾಪನೆ ನಮ್ಮೆಲ್ಲರ ಕಿವಿ, ಮನಸ್ಸು ಹೃದಯಗಳನ್ನು ಹೀಗೆಯೇ ಅನವರತ ತಲುಪಿ ಮುದಗೊಳಿಸುತ್ತಿರಲಿ ಎಂದು ಹಾರೈಸೋಣ. ಜಯಶ್ರೀ ದೇಶಪಾಂಡೆ "RAMA" ಅಥವಾ ಅನಂತಾದಿ ರಾಯರ ಮಠ ಅಟ್ಲಾಂಟಾ ಸಂಸ್ಥೆಯು ಈ ಮಹಾನ್ ಸಂಗೀತ ವಿದುಷಿಯ ಗಾನಸುಧೆಯನ್ನು ಸಂಗೀತಾಸಕ್ತರಿಗೆ ಉಣಬಡಿಸಿ ತನ್ಮೂಲಕ ಸಂಗ್ರಹಿಸುವ ದೇಣಿಗೆಯನ್ನು ಭಾರತದ ನೂರಾರು ಸಂಗೀತ ಕಲಾವಿದರಿಗೆ ಪ್ರೋತ್ಸಾಹಧನವಾಗಿ ನೀಡುವ ಕೈಂಕರ್ಯವನ್ನು ಹಮ್ಮಿಕೊಂಡಿದೆ. ಇವರೊಂದಿಗೆ ಇನ್ನೂ ಹಲವಾರು ಸಂಗೀತ ಪ್ರೇಮಿ ಸಂಸ್ಥೆಗಳೂ ಈ ಕಾರ್ಯದಲ್ಲಿ ಕೈ ಜೋಡಿಸಿವೆ. ಇದು ಅಂರ್ಜಾಲದ ಮೂಲಕ ಹರಿದು ಬರುವ ಕಾರ್ಯಕ್ರಮವಾಗಿದ್ದು ಈ ಕಾರ್ಯಕ್ರಮಕ್ಕೆ ಒಂದಿಷ್ಟು ಧನಸಹಾಯದ ಮೂಲಕ ತಾವುಗಳೆಲ್ಲ ರಿಜಿಸ್ಟರ್ ಮಾಡಿಕೊಂಡರೆ ಅವರು ಒದಗಿಸುವ ಲಿಂಕ್ ನ ಮೂಲಕ ಸಂಗೀತಾ ಕಟ್ಟಿಯವರ ಗಾಯನವನ್ನು ಕೇಳುವ ಹಾಗೂ ತನ್ಮೂಲಕ ನೂರಾರು ಸಂಗೀತಗಾರರಿಗೆ ಬೆಂಬಲವಾಗಿ ನಿಲ್ಲುವ ಅವಕಾಶವು ದೊರೆಯಲಿದೆ. https://ift.tt/2JEVFCL. The date and time and contact information: Saturday, 12/12/2020 8 PM EST/7 PM CST/ 5 PM PST Contact : Pradeep Vittalmurthy @ 678-656-4076
from India & World News in Kannada | VK Polls https://ift.tt/37oXOuB