ಮಂಗಳೂರು: ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅಧ್ಯಕ್ಷತೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಯಪಡೆಗೆ(ಅರೆಕಾ ಟಾಸ್ಕ್ಫೋರ್ಸ್)ಇದೀಗ ರಾಜ್ಯ ಸರಕಾರ 10 ಕೋಟಿ ರೂ. ಅನುದಾನ ಘೋಷಿಸಿದ್ದು, ಇದು ಕಾರ್ಯಪಡೆಯ ಕೆಲಸ ಕಾರ್ಯಗಳಿಗೆ ಇನ್ನಷ್ಟು ವೇಗ ನೀಡಲಿದೆ ಎಂದು ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ತಿಳಿಸಿದ್ದಾರೆ. ಈ ಅನುದಾನ ಅಡಕೆಯ ಬಗೆಗಿನ ಕಾನೂನಾತ್ಮಕ ವ್ಯವಹಾರಗಳಿಗಾಗಿ ಮತ್ತು ಅಡಕೆಯ ಮೌಲ್ಯವರ್ಧನೆ ಸಂಬಂಧ ಸಂಶೋಧನೆ ನಡೆಸುವುದಕ್ಕಾಗಿ ವಿನಿಯೋಗವಾಗಲಿದೆ. ಅಡಕೆ ಕೃಷಿಯ ಬಗ್ಗೆ ಒಲವಿರಿಸಿಕೊಂಡು ಮುತುವರ್ಜಿ ವಹಿಸಿ ಕಾರ್ಯಪಡೆಗೆ ಅನುದಾನವನ್ನೊದಗಿಸಿಕೊಟ್ಟ ಮುಖ್ಯಮಂತ್ರಿಗಳ ಮತ್ತು ರಾಜ್ಯ ಸರಕಾರದ ನಡೆ ಪ್ರಶಂಸನೀಯ. ಇದಕ್ಕಾಗಿ ಅಡಕೆ ಕೃಷಿಕರ ಪರವಾಗಿ ಕೃಷಿಕರ ಸಂಸ್ಥೆ ಕ್ಯಾಂಪ್ಕೊ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಅಭಿನಂದಿಸುತ್ತದೆ ಎಂದು ಹೇಳಿದ್ದಾರೆ. ಈ ಅನುದಾನಕ್ಕಾಗಿ ಶ್ರಮಿಸಿದ ದಕ್ಷಿಣ ಕನ್ನಡದ ಸಂಸದ ನಳಿನ್ ಕುಮಾರ್ ಕಟೀಲು ಮತ್ತು ಅಡಕೆ ಬೆಳೆಯುವ ಪ್ರದೇಶದ ಎಲ್ಲ ಶಾಸಕರಿಗೆ ಕೃತಜ್ಞತೆ ಸಲ್ಲಿಸುತ್ತದೆ. ರಾಜ್ಯ ಸರಕಾರ ಅಡಕೆ ಬೆಳೆಯ ಸರ್ವತೋಮುಖ ಅಭಿವೃದ್ಧಿಗಾಗಿ ರೂಪಿಸಿರುವ ಅಡಕೆ ಭವಿಷ್ಯಕ್ಕಾಗಿ ಎಲ್ಲ ರೀತಿಯಲ್ಲೂ ಕಾರ್ಯಪ್ರವೃತ್ತವಾಗಿದ್ದು, ಅಡಕೆ ಮಾರುಕಟ್ಟೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ.
from India & World News in Kannada | VK Polls https://ift.tt/3lxRCFP