ಬೆಳೆ ವಿಮೆ ಪಡೆಯಲು ಸಾವಿರ ಸವಾಲು: ಮಳೆ ಮಾಪನ, ವರ್ಣಮಿತ್ರಾ ಆ್ಯಪ್‌ ಇಲ್ಲದೆ ಪಡಿಪಾಟಲು

ಜಿ.ಯೋಗೀಶ ಸಾಗರ ಶಿವಮೊಗ್ಗ: ಸಂಕಷ್ಟಗಳ ಸುಳಿಯಲ್ಲಿ ಸಿಕ್ಕಿರುವ ಕೃಷಿಕರು ಯೋಜನೆಯ ಆಶಾಭಾವವನ್ನೂ ಕಳೆದುಕೊಂಡಿದ್ದಾರೆ. ಆಪದ್ಭಾಂದವ ಆಗಬೇಕಿದ್ದ ಯೋಜನೆ ರೈತರ ಸಂಕಟ ಹೆಚ್ಚಿಸಿದೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಲವು ಕಡೆ ಮಳೆ ಮಾಪನ ಕೇಂದ್ರ ಕಾರ್ಯ ಸ್ಥಗಿತ, ವರ್ಣಮಿತ್ರಾ ಆ್ಯಪ್‌ ತೆಗೆದಿರುವುದು, ಕಂಪನಿಯಿಂದ ವಿಮೆ ಮೊತ್ತ ಪಾವತಿಯಲ್ಲಿ ವಿಳಂಬ, ಬೆಳೆ ಕಾಲಂನಲ್ಲಿ ವ್ಯತ್ಯಾಸ, ತಂತ್ರಜ್ಞಾನ ಬಳಕೆಯಲ್ಲಿ ಹಿನ್ನಡೆ ಮುಂತಾದ ಕಾರಣಗಳಿಂದ ರೈತರ ಕೈಗೆ ಸೂಕ್ತ ಸಂದರ್ಭಕ್ಕೆ ಬೆಳೆ ವಿಮೆ ಸಿಗುತ್ತಿಲ್ಲ. ಬೆಳೆ ವಿಮೆ ಯೋಜನೆಯಡಿ ಅತಿವೃಷ್ಟಿ ಹಾಗೂ ಅನಾವೃಷ್ಟಿ ಎರಡೂ ಸಂದರ್ಭಗಳ ಹಾನಿಗೆ ಪರಿಹಾರ ನೀಡಬೇಕು. ಅದರಂತೆ ಮಲೆನಾಡು ಭಾಗಗಳಲ್ಲಿ ಗ್ರಾ.ಪಂ. ವ್ಯಾಪ್ತಿ ಮಳೆ ಮಾಪನ ನಡೆಸಲಾಗುತ್ತಿದೆ. ಈ ಅಂಶಗಳನ್ನು ದಾಖಲಿಸುವ 'ವರ್ಣಮಿತ್ರಾ' ಆ್ಯಪ್‌ನ ಲೆಕ್ಕಾಚಾರದಿಂದ ಸಮರ್ಪಕ ವಿಮೆ ಪಾವತಿಯಾಗಿಲ್ಲ ಎಂದು ಕೆಲ ರೈತರು ನ್ಯಾಯಾಲಯದ ಮೊರೆ ಹೋಗಿದ್ದರು. ಬಳಿಕ ವರ್ಣಮಿತ್ರಾ ಸೇರಿದಂತೆ ಪೂರಕವಾಗಿದ್ದ ಎಲ್ಲ ಆ್ಯಪ್‌ಗಳನ್ನು ತೆಗೆದಿದ್ದು, ಇಲಾಖೆ ಕೊಡುವ ಮಾಹಿತಿಯನ್ನೇ ಆಧರಿಸಿ ಸರಕಾರ ವಿಮೆ ಮೊತ್ತ ಪಾವತಿಸುತ್ತಿದೆ. ಹಾಳಾಗುತ್ತಿರುವ ಉಪಕರಣ: ಈ ನಡುವೆ ಗ್ರಾ.ಪಂ.ಗಳ ಮಳೆ ಮಾಪನ ಉಪಕರಣ ಹಾಳಾಗುತ್ತಿದ್ದು. ತಾಲೂಕಿನ ಐದಕ್ಕೂ ಹೆಚ್ಚು ಕೇಂದ್ರಗಳು ಕೆಲಸ ಮಾಡುತ್ತಿಲ್ಲ. ಆ ಪಂಚಾಯಿತಿಗೆ ಸಮೀಪದ ಗ್ರಾ.ಪಂ.ಗಳ ಮಳೆ ವರದಿಯನ್ನೇ ಅವಲಂಬಿಸಿ ವಿಮೆ ಸಂಸ್ಥೆಗಳಿಗೆ ಮಾಹಿತಿ ನೀಡಲಾಗುತ್ತಿದೆ. ಖಂಡಿಕಾ ಮತ್ತು ಯಡಜಿಗಳೆಮನೆ ಗ್ರಾ.ಪಂ.ಗಳ ಮಳೆ ಮಾಪನ ಉಪಕರಣ ಹಾಳಾಗಿದ್ದು, ದೂರದ ಕಲ್ಮನೆ ಗ್ರಾ.ಪಂ.ನಲ್ಲಿರುವ ಮಾಪನದ ಮಾಹಿತಿ ಪರಿಗಣಿಸಲಾಗುತ್ತದೆ. ಒಂದು ಗ್ರಾ.ಪಂ. ವ್ಯಾಪ್ತಿಯಲ್ಲೆ ಮಳೆ ಪ್ರಮಾಣ ವ್ಯತ್ಯಾಸವಿರುತ್ತದೆ. ಆದರೆ, 10ಕ್ಕೂ ಹೆಚ್ಚು ಕಿ.ಮೀ. ದೂರದ ಮಾಹಿತಿ ಆಧರಿಸುತ್ತಿರುವುದರಿಂದ ಸಹಜವಾಗಿ ಬೆಳೆಗಾರರಿಗೆ ಅನ್ಯಾಯವಾಗುತ್ತದೆ. ಬೆಂಗಳೂರಿನ ಕೆಎಸ್‌ಎನ್‌ಡಿಎಂಸಿ ಮಾಪನ ಕೇಂದ್ರಗಳ ನಿರ್ವಹಣೆ ಮಾಡುತ್ತಿದೆ. ವಿಮೆ ಪಾವತಿ ವಿಳಂಬ ಕಂಪನಿ ವಿಮಾ ಮೊತ್ತ ಪಾವತಿಯಲ್ಲಿ ಸಹ 2ರಿಂದ 3 ತಿಂಗಳು ವಿಳಂಬವಾಗುತ್ತಿರುವುದು ಬೆಳೆಗಾರರಿಗೆ ನುಂಗಲಾರದ ತುತ್ತಾಗಿದೆ. ತಾಲೂಕಿನ ಅರೆಹದ ಪತ್ತಿನ ಸಹಕಾರ ಸಂಘದಲ್ಲಿ 2018-19ನೇ ಸಾಲಿನಲ್ಲಿ 47 ಸದಸ್ಯರು 1,63,175 ರೂ. ಪಾವತಿಸಿದ್ದರು. ಆದರೆ ಸಕಾಲದಲ್ಲಿ ವಿಮೆ ಹಣ ಬೆಳೆಗಾರರಿಗೆ ದೊರಕಲಿಲ್ಲ. ಜಿಲ್ಲಾಮಟ್ಟದ ಅಧಿಕಾರಿಗಳನ್ನು ಸಂಪರ್ಕಿಸಿ ನಿರಂತರ ಪರದಾಟದ ಬಳಿಕ ವಿಮೆ ಹಣ ಪಡೆದುಕೊಳ್ಳಲು ಸಾಧ್ಯವಾಗಿದೆ. "2018-19ರ ವಿಮಾ ಹಣ ಪಾವತಿಯಲ್ಲಿ ಕೆಲವು ಗೊಂದಲಗಳಿದ್ದವು. ಅಂತಹ 250ಕ್ಕೂ ಹೆಚ್ಚು ಪ್ರಕರಣಗಳನ್ನು ಬಗೆಹರಿಸಲಾಗಿದೆ. ಫೋಟೊಗಳ ವ್ಯತ್ಯಾಸ ಇತ್ತು. ಉಳಿದ 96 ಪ್ರಕರಣಗಳ ಪರಿಶೀಲನೆ ನಡೆಯುತ್ತಿದೆ." - ಉಲ್ಲಾಸ, ಸಹಾಯಕ ನಿರ್ದೇಶಕರು, ತೋಟಗಾರಿಕೆ ಇಲಾಖೆ, ಸಾಗರ "ಸಾಗರ ತಾಲೂಕಿನ 5 ಕಡೆಗಳಲ್ಲಿಮಳೆ ಮಾಪನ ಕೇಂದ್ರದಲ್ಲಿ ಸಮಸ್ಯೆ ಇದೆ. ಜತೆಗೆ ಸಲಕರಣೆಗಳ ಕಳ್ಳತನ ಸಹ ಸಮಸ್ಯೆಯಾಗಿದೆ. ದೋಷ ಕಾಣಿಸಿಕೊಂಡ ಕೇಂದ್ರಗಳಿಗೆ ಈಗಾಗಲೇ ತಜ್ಞರನ್ನು ಕಳುಹಿಸಿಕೊಡಲಾಗಿದೆ." - ಅಜಿತ್‌, ಯೋಜನಾ ವಿಜ್ಞಾನಿ, ಕೆಎಸ್‌ಎನ್‌ಡಿಎಂಸಿ, ಬೆಂಗಳೂರು. "ಅತಿವೃಷ್ಟಿ, ಅನಾವೃಷ್ಟಿ ಗಳಿಂದ ಹಾನಿಗೊಳಗಾದ ಸಂದರ್ಭ ವಿಮೆ ಹಣ ಒಂದಿಷ್ಟು ಆಸರೆ ಆಗುತ್ತದೆ. ಆದರೆ ಒಟ್ಟು ಪ್ರಕ್ರಿಯೆಯೇ ಬೆಳೆಗಾರರಿಗೆ ಅರ್ಥವಾಗುತ್ತಿಲ್ಲ. ಗ್ರೇಸ್‌ ಪಿರಿಯಡ್‌ ಎಂದು ಹೇಳಿ ವಿಮಾ ಮೊತ್ತ ಕೊಡಲು ವಿಳಂಬ ಮಾಡುತ್ತಾರೆ. ಕಳೆದ ಸಾಲಿನಲ್ಲಿ ಮನವಿ ಕೊಟ್ಟು, ಜನಪ್ರತಿನಿಧಿಗಳ ಮೊರೆ ಹೋಗಿ ಹಣ ಬಿಡುಗಡೆ ಮಾಡಿಸಿಕೊಂಡೆವು. ಈ ಬಾರಿ ಓರಿಯಂಟಲ್‌ ಸಂಸ್ಥೆಯವರಿಗೆ ದೂರವಾಣಿ ಮೂಲಕ ವಿಚಾರಿಸಿದರೆ ಸಮರ್ಪಕ ಉತ್ತರ ಸಿಗಲಿಲ್ಲ. ಬಹಳಷ್ಟು ಗೊಂದಲಗಳಿವೆ. ಕೊಳೆ ಪರಿಹಾರ ಸಹ ವಿಳಂಬವಾಗುತ್ತಿದೆ." - ಹೂ.ಬಾ.ಅಶೋಕ, ಸಾಗರ


from India & World News in Kannada | VK Polls https://ift.tt/3hkXwsr

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...