ಹೊಸದಿಲ್ಲಿ: ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ನೀಡುವ ಪ್ರದರ್ಶನಕ್ಕೂ ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಬದುಕಿಗೂ ಯಾವುದೇ ಸಂಬಂಧವಿಲ್ಲ ಎಂದು ಭಾರತ ತಂಡದ ಮಾಜಿ ಎಡಗೈ ವೇಗದ ಬೌಲರ್ ಆಶಿಶ್ ನೆಹ್ರಾ ಹೇಳಿದ್ದಾರೆ. ಕಳೆದ ವರ್ಷ ಇಂಗ್ಲೆಂಡ್ ಮತ್ತು ವೇಲ್ಸ್ ಆತಿಥ್ಯದಲ್ಲಿ ನಡೆದ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಸೆಮಿಫೈನಲ್ನಲ್ಲಿ ನ್ಯೂಜಿಲೆಂಡ್ ವಿರುದ್ಧ 18 ರನ್ಗಳಿಂದ ಅಚ್ಚರಿಯ ಸೋಲುಂಡಿತ್ತು. ಆ ಪಂದ್ಯದಲ್ಲಿ ಅರ್ಧಶತಕ ಬಾರಿಸಿ ಭಾರತದ ಪರ ಹೋರಾಟ ಹಿಡಿದಿಟ್ಟಿದ್ದ ಧೋನಿ ದುರದೃಷ್ಟವಶಾತ್ ರನ್ಔಟ್ಗೆ ಬಲಿಯಾಗಿದ್ದರು. ಬಳಿಕ ಕಣ್ಣೀರಿಡುತ್ತಲೇ ಪೆವಿಲಿಯನ್ ಸೇರಿದ್ದರು. ಅದೇ ಕೊನೆ, ಟೀಮ್ ಇಂಡಿಯಾ ಪರ ಧೋನಿ ಮತ್ತೆ ಕಾಣಿಸಿಕೊಂಡಿಲ್ಲ. ಕಳೆದ ವರ್ಷವೇ ವಿಶ್ವಕಪ್ ಬಳಿಕ ಧೋನಿ ನಿವೃತ್ತಿ ಘೋಷಿಸುತ್ತಾರೆ ಎಂದು ಎಣಿಸಲಾಗಿತ್ತು. ಆದರೆ, ಧೋನಿ ಮೌನಕ್ಕೆ ಶರಣಾಗಿ ಅನಿರ್ದಿಷ್ಟ ಅವಧಿಯ ವಿರಾಮ ತೆಗೆದುಕೊಂಡಿದ್ದಾರೆ. ಇನ್ನು ಮಾರ್ಚ್ 29ರಿಂದ ಮೇ 24ರವರೆಗೆ ನಡೆಯಬೇಕಿದ್ದ ಟೂರ್ನಿಯಲ್ಲಿ ಮೂಲಕ ಧೋನಿ ಸ್ಪರ್ಧಾತ್ಮಕ ಕ್ರಿಕೆಟ್ಗೆ ಮರಳುವುದಿದ್ದರು. ಈ ಮೂಲಕ ಇದೇ ವರ್ಷ ನಡೆಯಬೇಕಿದ್ದ ಟಿ20 ಕ್ರಿಕೆಟ್ ವಿಶ್ವಕಪ್ಗೆ ಟೀಮ್ ಇಂಡಿಯಾ ಪರ ಆಡುವುದನ್ನು ಅವರ ಲೆಕ್ಕಾಚಾರವಾಗಿತ್ತು. ಆದರೆ, ಕೋವಿಡ್-19 ಮಹಾಮಾರಿ ಸೋಂಕು ಧೋನಿಯ ಎಲ್ಲಾ ಯೋಜನೆಗಳಿಗೆ ಮುಳುವಾಗಿದೆ. ಐಪಿಎಲ್ 2020 ಟೂರ್ನಿ ಈಗ ಯುಎಇ ಅಂಗಣದಲ್ಲಿ ಸೆಪ್ಟೆಂಬರ್ ಮತ್ತು ನವೆಂಬರ್ ಅವಧಿಯಲ್ಲಿ ನಡೆಯುವುದಿದೆ. ಆದರೆ, ಧೋನಿಗೆ 2021ರ ವಿಶ್ವಕಪ್ನಲ್ಲಿ ಆಡುವ ಅವಕಾಶ ಸಿಗುತ್ತದೆಯೇ ಅಥವಾ ಇಲ್ಲವೇ ಎಂಬುದು ಇನ್ನೂ ಕಗ್ಗಂಟಾಗಿದೆ. ಏಕೆಂದರೆ ಇದಕ್ಕೂ ಮುನ್ನ ಧೋನಿ ಎರಡು ಐಪಿಎಲ್ ಟೂರ್ನಿಗಳಲ್ಲಿ ತಮ್ಮ ಫಿಟ್ನೆಸ್ ಸಾಬೀತು ಪಡಿಸಬೇಕಿದೆ. ಏಕೆಂದರೆ 2020ರ ಟಿ20 ವಿಶ್ವಕಪ್ ಟೂರ್ನಿಯನ್ನು 2022ಕ್ಕೆ ಮುಂದೂಡಲಾಗಿದೆ. "ಧೋನಿ ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಬದುಕಿಗೆ ಐಪಿಎಲ್ ಪ್ರದರ್ಶನ ಯಾವುದೇ ಪ್ರಭಾವ ಬೀರುವುದಿಲ್ಲ. ಕ್ಯಾಪ್ಟನ್, ಕೋಚ್ ಮತ್ತು ಸೆಲೆಕ್ಟರ್ಗಳಿಗೆ ಮುಖ್ಯ ಸಂಗತಿ ಎಂದರೆ ಧೋನಿ ಲಭ್ಯತೆ. ಏಕೆಂದರೆ ಅವರ ಪಟ್ಟಿಯಲ್ಲಿ ನಂ.1 ಆಟಗಾರ ಧೋನಿಯೇ ಆಗಿರುತ್ತಾರೆ," ಎಂದು ಸ್ಟಾರ್ ಸ್ಪೋರ್ಟ್ಸ್ನ ಕ್ರಿಕೆಟ್ ಕನೆಕ್ಟೆಡ್ ಕಾರ್ಯಕ್ರಮದಲ್ಲಿ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ. "ಧೋನಿಯನ್ನು ನಾನು ಕಂಡಿರುವ ಪ್ರಕಾರ ಹೇಳುವುದಾದರೆ, ಟೀಮ್ ಇಂಡಿಯಾ ಪರ ಅವರು ಆಡಿದ ಕೊನೆಯ ಪಂದ್ಯದಲ್ಲಿ ಸಂತಸದಿಂದಲೇ ಆಡಿದ್ದಾರೆ. ಧೋನಿ ಏನನ್ನೂ ಸಾಬೀತು ಪಡಿಸುವ ಅಗತ್ಯವಿಲ್ಲ. ಅವರಿನ್ನೂ ನಿವೃತ್ತಿ ಘೋಷಿಸಿಲ್ಲ ಎಂದ ಮಾತ್ರಕ್ಕೆ ನಾವಿಂದು ಈ ರೀತಿ ಚರ್ಚೆಗಳನ್ನು ಮಾಡುತ್ತಿದ್ದೇವೆ. ಅವರ ಮನಸ್ಸಲ್ಲಿ ಏನು ನಡೆಯುತ್ತಿದೇ ಎಂಬುದು ಅವರಷ್ಟೇ ಬಲ್ಲರು. ಹೀಗಾಗಿ ಅಂತಿಮ ನಿರ್ಧಾರವನ್ನೂ ಅವರೇ ತೆಗೆದುಕೊಳ್ಳಲಿದ್ದಾರೆ," ಎಂದು ಧೋನಿ ನಿವೃತ್ತಿ ವಿಚಾರವಾಗಿ ಚರ್ಚೆ ನಡೆಸುವುದು ಅಷ್ಟು ಸೂಕ್ತವಲ್ಲ ಎಂದು ಖಡಕ್ ಮಾತುಗಳನ್ನಾಡಿದ್ದಾರೆ. ಇನ್ನು ಕಳೆದ ವರ್ಷ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ನಲ್ಲಿ ಧೋನಿ ಕ್ರೀಸ್ನಲ್ಲಿ ಇರುವವರೆಗೂ ಟೀಮ್ ಇಂಡಿಯಾಗೆ ನ್ಯೂಜಿಲೆಂಡ್ ಎದುರು ಗೆಲ್ಲುವ ಉತ್ತಮ ಅವಕಾಶವಿತ್ತು ಎಂದು ಆಶಿಶ್ ಹೇಳಿದ್ದಾರೆ. "ಧೋನಿ ಅವರ ಆಟ ಎಲ್ಲಿಯೂ ಕೂಡ ಕಳೆಗುಂದಿಲ್ಲ. ಅವರು ಭಾರತದ ಪರ ಆಡಿದ ಕೊನೆಯ ಪಂದ್ಯದಲ್ಲಿ ಕ್ರೀಸ್ನಲ್ಲಿ ಇದ್ದಷ್ಟು ಸಮಯ ತಂಡಕ್ಕೆ ಗೆಲ್ಲುವ ಉತ್ತಮ ಅವಕಾಶವಿತ್ತು. ಆದರೆ ಅವರು ರನ್ಔಟ್ ಆಗುತ್ತಿದ್ದಂತೆಯೇ ಗೆಲ್ಲುವ ಅವಕಾಶ ಕಮರಿಹೋಯಿತು," ಎಂದು ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಅತ್ಯಂತ ಬೇಸರ ತಂಡ ಸೆಮಿಫೈನಲ್ ಪಂದ್ಯವನ್ನು ಸ್ಮರಿಸಿದ್ದಾರೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3fkTyOW