ಕೋಲ್ಕತಾ: ಈಡನ್ ಗಾರ್ಡನ್ಸ್ನಲ್ಲಿ ನಡೆದ ಐತಿಹಾಸಿಕ ಡೇ-ನೈಟ್ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಭಾರತ ತಂಡ ಪ್ರವಾಸಿ ತಂಡವನ್ನು ಕೇವಲ ಎರಡೂವರೆ ದಿನಗಳ ಅಂತರದಲ್ಲಿ ಬಗ್ಗುಬಡಿದು, ತವರಿನಲ್ಲಿ ಸತತ 12ನೇ ಮತ್ತು ಟೆಸ್ಟ್ ಕ್ರಿಕೆಟ್ನಲ್ಲಿ ಸತತ 7ನೇ ಸರಣಿ ಗೆದ್ದ ಅಮೋಘ ಸಾಧನೆ ಮೆರೆಯಿತು. ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ತಂಡದ ಬ್ಯಾಟ್ಸ್ಮನ್ಗಳು ಕಳಾಹೀನ ಪ್ರದರ್ಶನ ನೀಡಿದರೂ, ಬೌಲರ್ಗಳು ಕೊಂಚ ದಿಟ್ಟ ಪ್ರದರ್ಶನ ನೀಡಿ ಗಮನ ಸೆಳೆದರು. ಪ್ರಮುಖವಾಗಿ ಬ್ಯಾಟಿಂಗ್ ಬಲಿಷ್ಠ ಟೀಮ್ ಇಂಡಿಯಾವನ್ನು 9 ವಿಕೆಟ್ಗೆ 347 ರನ್ಗಳಿಗೆ ನಿಯಂತ್ರಿಸುವಲ್ಲಿ ಬಾಂಗ್ಲಾ ಯಶಸ್ವಿಯಾಗಿತ್ತು. ಒಂದು ವೇಳೆ ಬಾಂಗ್ಲಾ ತನ್ನ ಮೊದಲ ಇನಿಂಗ್ಸ್ನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದರೆ, ಪಂದ್ಯ ಮತ್ತಷ್ಟು ಸ್ಪರ್ಧಾತ್ಮಕವಾಗಿ ಮೂಡಿಬರುತ್ತಿತ್ತು. ಹೊನಲು ಬೆಳಕಿನಡಿ ಭಾರತ ತಂಡದ ವೇಗಿಗಳಷ್ಟೇ ಅಲ್ಲ. ಬಾಂಗ್ಲಾ ತಂಡದ ವೇಗಿಗಳು ಕೂಡ ಗಮನಾರ್ಹ ಪ್ರದರ್ಶನ ನೀಡಿದರು. ಪ್ರಮುಖವಾಗಿ ಅಲ್ ಅಮಿನ್ ಹುಸೇನ್ ಮತ್ತು ತಲಾ ಮೂರು ವಿಕೆಟ್ ಪಡೆದು ಬ್ಯಾಟ್ಸ್ಮನ್ಗಳನ್ನು ಕಾಡಿದರು. ಇವೆಲ್ಲದರ ನಡುವೆ ಯುವ ವೇಗಿ ಇಬಾದತ್ ಹುಸೇನ್ ಪ್ರತಿಬಾರಿ ವಿಕೆಟ್ ಪಡೆದಾಗಲೆಲ್ಲಾ ವೆಸ್ಟ್ ಇಂಡೀಸ್ನ ವೇಗದ ಬೌಲರ್ ಶೆಲ್ಡನ್ ಕಾಟ್ರೆಲ್ ಅವರ ರೀತಿಯಲ್ಲಿ ಸೆಲ್ಯೂಟ್ ಮಾಡುವ ಮೂಲಕವೂ ಗಮನ ಸೆಳೆದಿದ್ದರು. ಶೆಲ್ಡನ್ ಕಾಟ್ರೆಲ್, ಕ್ರಿಕೆಟರ್ ಆಗುವ ಮುನ್ನ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಹೀಗಾಗಿ ಪ್ರತಿಬಾರಿ ವಿಕೆಟ್ ಪಡೆದಾಗಲೆಲ್ಲಾ ತನ್ನ ಸೇನೆಗೆ ಸೆಲ್ಯೂಟ್ ಹೊಡೆದು ಸಂಬ್ರಮಿಸುತ್ತಿದ್ದರು. ಅಂದಹಾಗೆ ಇಬಾದತ್ ಈ ರೀತಿ ವಿಂಡೀಸ್ ಬೌಲರ್ನ ಸಂಭ್ರಮಾಚರಣೆಯನ್ನು ಕಾಪಿ ಮಾಡುತ್ತಿರುವುದಾದರೂ ಏಕೆ ಎಂದು ಹಲವರು ತಲೆ ಕಡೆಡಿಸಿಕೊಂಡಿದ್ದರು. ಈ ಎಲ್ಲಾ ಪ್ರಶ್ನೆಗಳಿಗೆ ಕೊನೆಗೂ ಉತ್ತರ ಸಿಕ್ಕಿದ್ದು, ಬಾಂಗ್ಲಾ ಬೌಲರ್ ತಮ್ಮ ವಿಶೇಷ ಸಂಭ್ರಮಾಚರಣೆಯ ಹಿಂದಿರುವ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ. ಮಹ್ಮೂದುಲ್ಲಾ ಹೇಳಿಕೊಟ್ಟ ಪಾಠ ಇಬಾದತ್ ತಮ್ಮ ವಿಶೇಷ ಸಂಭ್ರಮಾಚರಣೆಯ ಬಗ್ಗೆ ಸಂದರ್ಷನವೊಂದರಲ್ಲಿ ಮಾತನಾಡಿದ್ದಾರೆ. "ನಾನು ಬಾಂಗ್ಲಾದೇಶದ ವಾಯು ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದೆ. ನನ್ನ ಈ ಸೆಲ್ಯೂಟ್ ಸಂಭ್ರಮಾಚರಣೆ ಅವರಿಗೆ ಸೌರವಾರ್ಥವಾಗಿ. ವಾಯುಸೇನೆಯಲ್ಲಿ ನಾನು 5 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೇನೆ. ಈಗಲೇ ಸೇನೆಯಲ್ಲಿ ಯಾವುದೇ ಸ್ಥಾನ ನೀಡಿದರೂ ಅದನ್ನು ಶ್ರದ್ಧೆಯಿಂದ ನಿಭಾಯಿಸುತ್ತೇನೆ," ಎಂದು ಎಬಾದತ್ ಪಂದ್ಯದ ಎರಡನೇ ದಿನದಾಟದ ಅಂತ್ಯದ ಬಳಿಕ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಅಂದಹಾಗೆ ಇಬಾದತ್ಗೆ ಈ ರೀತಿ ವಿಶೇಷವಾಗಿ ಸಂಭ್ರಮಿಸುವಂತೆ ಹೇಳಿಕೊಟ್ಟದ್ದು, ಅನುಭವಿ ಆಟಗಾರ ಮಹ್ಮೂದುಲ್ಲ ಎಂಬುದು ವಿಶೇಷ. ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯವೊಂದರ ವೇಳೆ ಮಹ್ಮೂದುಲ್ಲ ರಿಯಾದ್ ಇಂಥದ್ದೊಂದು ಸಲಹೆ ನೀಡಿದ್ದರು ಎಂದಿದ್ದಾರೆ. "ವಿಕೆಟ್ ಪಡೆದ ಬಳಿಕ ವಿಶೇಷವಾಗಿ ಸಂಬ್ರಮಿಸುವುದನ್ನು ನಾನು ರೂಢಿಸಿಕೊಂಡಿರಲಿಲ್ಲ. ನಾನು ವಾಯು ಸೇನೆಯಲ್ಲಿ ಕಾರ್ಯನಿರ್ವಹಿಸಿದ್ದರಿಂದ ವಿಕೆಟ್ ಪಡೆದಾಗಲೆಲ್ಲಾ ಸೆಲ್ಯೂಟ್ ಹೊಡೆದು ಸಂಭ್ರಮಿಸುವಂತೆ ರಿಯಾದ್ ಹೇಳಿದ್ದರು. ಇದರಿಂದ ನನ್ನದೇ ಆದ ಬ್ರಾಂಡ್ ಬೆಳೆಸಲು ನೆರವಾಗುತ್ತದೆ ಎಂದು ಸಲಹೆ ನೀಡಿದ್ದರು," ಎಂದು ಇಬಾದತ್ ವಿವರಿಸಿದ್ದಾರೆ. ಇಬಾದತ್, ಈಡನ್ ಗಾರ್ಡನ್ಸ್ನಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಪ್ರಮುಖ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ವಿರಾಟ್ ವಿಕೆಟ್ ಪಡೆದದ್ದು, ಕನಸು ನನಸಾದ ಅನುಭವ ತಂದುಕೊಟ್ಟಿತು ಎಂದು ಇಬಾದತ್ ಹೇಳಿದ್ದಾರೆ. "ರೋಹಿತ್ ಮತ್ತು ವಿರಾಟ್ ವಿಶ್ವ ಶ್ರೇಷ್ಠ ಬ್ಯಾಟ್ಸ್ಮನ್ಗಳು. ವಿರಾಟ್ ವಿಕೆಟ್ ಪಡೆದದ್ದು ಕನಸು ನನಸಾದ ಅನುಭವ ನೀಡಿದೆ. ಅದರಲ್ಲೂ ಅವರ ವಿರುದ್ಧ ನಾನು ಆಡಿದ ಮೊದಲ ಟೆಸ್ಟ್ನಲ್ಲೇ ಈ ಯಶಸ್ಸು ಸಿಕ್ಕಿದೆ. ಇನ್ನು ಮುಂದೆ ಸಾಗುವುದು ಬಹಳಷ್ಟಿದೆ," ಎಂದಿದ್ದಾರೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2OggvIE