ಕೋಲ್ಕತಾ: ಭಾರತದಲ್ಲಿ ಆಯೋಜನೆಯಾದ ಚೊಚ್ಚಲ ಪಿಂಕ್ ಬಾಲ್ ಪಂದ್ಯ ಭಾರಿ ಯಶಸ್ಸನ್ನು ಕಂಡಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ನೂತನ ಅಧ್ಯಕ್ಷ , ಗುಲಾಬಿ ಟೆಸ್ಟ್ ಆಯೋಜನೆಯಲ್ಲಿ ಚುಕ್ಕಾಣಿ ಹಿಡಿದಿದ್ದರು. ಅತ್ಯಂತ ಕಿರು ಸಮಯದಲ್ಲಿ ಇತ್ತಂಡಗಳನ್ನು ಮನವೊಳಿಸಿದ್ದರಲ್ಲದೆ ಇತಿಹಾಸ ಪ್ರಸಿದ್ಧ ಕೋಲ್ಕತಾದ ಮೈದಾನವನ್ನು ಸಂಪೂರ್ಣ ಗುಲಾಬಿಮಯಗೊಳಿಸಿದ್ದರು. ಇದಕ್ಕೆ ತಕ್ಕಂತೆ ಪ್ರತಿಕ್ರಿಯಿಸಿದ ಪ್ರೇಕ್ಷಕರು ಕಿಕ್ಕಿರಿದು ಸೇರುವ ಮೂಲಕ ಗುಲಾಬಿ ಚೆಂಡಿನಾಟಕ್ಕೆ ಭಾರಿ ಯಶಸ್ಸನ್ನು ತಂದುಕೊಟಿದ್ದರು. ಮೂರೇ ದಿನದಲ್ಲಿ ಪಂದ್ಯ ಅಂತ್ಯಗೊಂಡರೂ ಭಾರತದಲ್ಲಿ ನಡೆದ ಚೊಚ್ಚಲ ಹಗಲು ರಾತ್ರಿ ಪಂದ್ಯಕ್ಕೆ ಭಾರಿ ಬೆಂಬಲ ದೊರಕಿದೆ. ಸದ್ಯ ಭಾರತದ್ಯಾಂತ ಪಿಂಕ್ ಬಾಲ್ ಕ್ರಿಕೆಟ್ ಪಸರಿಸಲು ದಾದಾ ಹೆಚ್ಚಿನ ಆಸಕ್ತಿಯನ್ನು ತೋರ್ಪಡಿಸಿದ್ದಾರೆ. ಈ ಮಧ್ಯೆ ಪಂದ್ಯವು ವಿಶ್ವಕಪ್ ಫೈನಲ್ ತರಹನೇ ಭಾಸವಾಗಿತ್ತು ಎಂದು ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ. "ಕಿಕ್ಕಿರಿದು ತುಂಬಿರುವ ಸ್ಟೇಡಿಯಂನಲ್ಲಿ ಪ್ರೇಕ್ಷಕರ ಜತೆಗೆ ಸೆಲ್ಫಿ ಹಂಚಿರುವ ಸೌರವ್ ಗಂಗೂಲಿ, ನೀವಿದನ್ನು ನೋಡಿರುವೀರಾ? ಟೆಸ್ಟ್ ಕ್ರಿಕೆಟ್ನಲ್ಲಿ ನೀವಿದನ್ನು ನೋಡಿರುವೀರಾ? ಕೊನೆಯ ಬಾರಿಗೆ ಫುಲ್ ಹೌಸ್ ಟೆಸ್ಟ್ ಪಂದ್ಯ ನಡೆದಿದ್ದು ಯಾವಾಗ? ವಿಶ್ವಕಪ್ ಫೈನಲ್ನಂತೆ ಭಾಸವಾಗುತ್ತಿದೆ" ಎಂದರು. "ಇದು ನಿಜಕ್ಕೂ ಅದ್ಭುತ. ಶ್ರೇಷ್ಠ ಭಾವನೆಯನ್ನು ನೀಡುತ್ತಿದೆ. ಇದು ನನಗೆ 2001ರ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಪಂದ್ಯವನ್ನು ನೆನಪಿಸುತ್ತಿದೆ. ಟೆಸ್ಟ್ ಕ್ರಿಕೆಟ್ ಹೀಗಿರಬೇಕು. ಪ್ಯಾಕ್ಡ್ ಸ್ಟೇಡಿಯಂ" ಎಂದು ಸೇರಿಸಿದರು. ಹಾಗಿದ್ದರೂ ಪಿಂಕ್ ಬಾಲ್ ಭವಿಷ್ಯದ ಬಗ್ಗೆ ಈಗಲೇ ಪ್ರತಿಕ್ರಿಯಿಸುವುದು ಸಮಂಜಸವಲ್ಲ ಎಂದು ಗಂಗೂಲಿ ಹೇಳಿದರು. ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾದಂತಹ ತಂಡಗಳು ಭಾರತದಲ್ಲಿ ಡೇ ನೈಟ್ ಟೆಸ್ಟ್ ಪಂದ್ಯವನ್ನಾಡಿದರೆ ಖಂಡಿತವಾಗಿಯೂ ಸ್ಟೇಡಿಯಂ ಪ್ರೇಕಕ್ಷರಿಂದ ತುಂಬಿ ತುಳುಕಲಿದೆ ಎಂದು ಹೇಳಿದರು. ಪಿಂಕ್ ಬಾಲ್ ಡೇ ನೈಟ್ ಟೆಸ್ಟ್ ಕ್ರಿಕೆಟ್ನಲ್ಲಿ ಚೊಚ್ಚಲ ಶತಕ ಬಾರಿಸಿರುವ ವಿರಾಟ್ ಕೊಹ್ಲಿ ಸಾಧನೆಯನ್ನು ದಾದಾ ವಿಶೇಷವಾಗಿ ಉಲ್ಲೇಖಿಸಿದರು. "ಎಂತಹ ಅದ್ಭುತ ಇನ್ನಿಂಗ್ಸ್? ನಾನು ಕೆಲವು ಶ್ರೇಷ್ಠ ಆಟಗಾರರೊಂದಿಗೆ (ಸಚಿನ್, ಲಕ್ಷ್ಮಣ್, ಸೆಹ್ವಾಗ್) ಆಡಿದ್ದೇನೆ. ಅದೇ ವಿಭಾಗಕ್ಕೆ ವಿರಾಟ್ ಕೊಹ್ಲಿ ಸೇರುತ್ತಾರೆ. ಸ್ಥಿರ ನಿರ್ವಹಣೆ ನೀಡುತ್ತಿರುವುದು ನೋಡುವುದೇ ಆನಂದ. ಅವರೊಬ್ಬ ರನ್ ಮೆಶಿನ್" ಎಂದು ಶ್ಲಾಘಿಸಿದರು. ಅದೇ ಹೊತ್ತಿಗೆ ಟೀಮ್ ಇಂಡಿಯಾ ಬೌಲಿಂಗ್ ಪಡೆಯನ್ನು ಹಿಂದಿನ ದಿಗ್ಗಜರೊಂದಿಗೆ ಹೋಲಿಕೆ ಮಾಡಲು ಗಂಗೂಲಿ ನಿರಾಕರಿಸಿದರು. ನಾವೀಗ ಅತ್ಯುತ್ತಮ ಬೌಲಿಂಗ್ ಪಡೆಯನ್ನು ಹೊಂದಿದ್ದೇವೆ. ನ್ಯೂಜಿಲೆಂಡ್ ಕೂಡಾ ಉತ್ತಮ ತಂಡವಾಗಿದೆ. ಅವರದ್ದೇ ಪರಿಸ್ಥಿತಿಯಲ್ಲಿ ಆಡುವುದು ನಿಜಕ್ಕೂ ಸವಾಲಿನಿಂದ ಕೂಡಿರಲಿದೆ. ಆದರೆ ವಿರಾಟ್ ಕೊಹ್ಲಿ ಪಡೆ ಉತ್ತಮ ನಿರ್ವಹಣೆ ನೀಡುವ ಭರವಸೆಯಿದೆ ಎಂದರು. ಎನ್ಸಿಎ ಮುಖ್ಯಸ್ಥ ಹಾಗೂ ಮಾಜಿ ನಾಯಕ ರಾಹುಲ್ ದ್ರಾವಿಡ್, ಚೊಚ್ಚಲ ಡೇ-ನೈಟ್ ಪಂದ್ಯವನ್ನು ವೀಕ್ಷಿಸಿದ್ದರಲ್ಲದೆ ತಾವು ಕೂಡಾ ಇದರ ಭಾಗವಾಗಲು ಬಯಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಗಂಗೂಲಿ, "ಮಾಜಿ ಸಹ ಆಟಗಾರನಿಂದ ಇಂತಹದೊಂದು ಅಭಿನಂದನೆ ವ್ಯಕ್ತವಾಗಿರುವುದು ನಿಜಕ್ಕೂ ವಿಶೇಷ. ತಮಗಿದು ಅತೀವ ಸಂತೃಪ್ತಿಯನ್ನು ನೀಡಿದೆ" ಎಂದರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/34uIPwo