ಪುಣೆ: ಬಿಜೆಪಿ ಜೊತೆ ಕೈ ಜೋಡಿಸಿ ಉಪ ಮುಖ್ಯಮಂತ್ರಿಯಾದ ತೀರ್ಮಾನದ ಹಿಂದೆ ತಾವಿಲ್ಲ ಎಂಬುದಾಗಿ ಮುಖ್ಯಸ್ಥ ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ ಅವರು ಮುಂದಿನ ದಿನಗಳಲ್ಲಿ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್-ಎನ್ಸಿಪಿ-ಶಿವಸೇನೆ ಸರಕಾರ ರಚನೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸತಾರಾ ಜಿಲ್ಲೆಯ ಕರಾಡ್ನಲ್ಲಿ ವರದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಜೊತೆ ಕೈ ಜೋಡಿಸುವುದು ತಮ್ಮ ಸಂಬಂಧಿ ಅಜಿತ್ ಪವಾರ್ ಅವರ ನಿರ್ಧಾರವೇ ಹೊರತು ಎನ್ಸಿಪಿಯ ನಿರ್ಧಾರವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. “ಇದು ಪಕ್ಷದ ನಿರ್ಧಾರವಲ್ಲ ಮತ್ತು ನಾವು ಇದನ್ನು ಬೆಂಬಲಿಸುವುದಿಲ್ಲ,” ಎಂದು ಹೇಳಿದ ಪವಾರ್, “ಅಜಿತ್ ಪವಾರ್ ಬಂಡಾಯದ ಹಿಂದೆ ನನ್ನ ಕೈವಾಡವಿದೆ ಎನ್ನುವುದು ಸರಿಯಲ್ಲ,” ಎಂದು ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ಎನ್ಸಿಪಿ, ಕಾಂಗ್ರೆಸ್, ಶಿವಸೇನೆ ಸರಕಾರ ರಚಿಸಲಿದೆಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ಮಹಾರಾಷ್ಟ್ರದಲ್ಲಿ ಸರಕಾರ ರಚನೆಯಾಗಲಿದೆ ಎಂಬುದರಲ್ಲಿ ಎಳ್ಳಷ್ಟೂ ಸಂಶಯ ಬೇಡ,” ಎಂದಿದ್ದಾರೆ. ಇದಲ್ಲದೆ ಪಕ್ಷದ ವಿರುದ್ಧ ಬಂಡಾಯವೆದ್ದಿರುವ ಅಜಿತ್ ಪವಾರ್ ಜೊತೆ ತಮಗೆ ಯಾವುದೇ ಸಂಪರ್ಕವಿಲ್ಲ ಎಂದಿರುವ ಪವಾರ್, ಅವರನ್ನು ಪಕ್ಷದಿಂದ ಉಚ್ಚಾಟಿಸುವ ಸಂಬಂಧ ಪಕ್ಷದ ಮಟ್ಟದಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಸಮಜಾಯಿಷಿ ನೀಡಿದ್ದಾರೆ. ಶನಿವಾರ ಮುಂಜಾನೆ ನಡೆದ ನಾಟಕೀಯ ಬೆಳವಣಿಗೆಯಲ್ಲಿ ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯಾಗಿ ಮತ್ತು ಎನ್ಸಿಪಿಯ ಅಜಿತ್ ಪವಾರ್ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು.
“ನಾನು ನನ್ನ ರಾಜಕೀಯ ಜೀವನದ 50 ವರ್ಷಗಳಲ್ಲಿ ಇಂಥಹ ಹಲವಾರು ಬೆಳವಣಿಗೆಗಳನ್ನು ನೋಡಿದ್ದೇನೆ. ಸಂಕಷ್ಟಗಳು ಬರುತ್ತವೆ, ಆದರೆ ಅವೆಲ್ಲ ಕ್ಷಣಿಕ ಮಾತ್ರ. ನನ್ನ ಅನುಭವದ ಮಾತೇನೆಂದರೆ ರಾಜ್ಯದ ಜನರು ಗಟ್ಟಿಯಾಗಿ ನಿಲ್ಲುತ್ತಾರೆ,” ಎಂಬುದಾಗಿ ಅವರು ವಿವರಿಸಿದ್ದಾರೆ. ಯುವಕರ ಬೆಂಬಲ ಇರುವವರೆಗೆ ನಾನು ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ ಎಂಬುದಾಗಿ ಅವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.
from India & World News in Kannada | VK Polls https://ift.tt/37DdtWn