ಮಹಾ ಸರಕಾರ ರಚನೆ ಬಿಕ್ಕಟ್ಟು: ಪವಾರ್‌ ಹೇಳಿಕೆ ಕೇಳಿ ಶಿವಸೇನೆ ಇಕ್ಕಟ್ಟು

ಮುಂಬಯಿ: ಮಹಾರಾಷ್ಟ್ರದಲ್ಲಿ ಚುನಾವಣೆ ಫಲಿತಾಂಶ ಬಂದು ತಿಂಗಳಾದರೂ ಸರಕಾರ ರಚನೆ ಪ್ರಕ್ರಿಯೆ ಇನ್ನೂ ತಾರ್ಕಿಕ ಅಂತ್ಯಕ್ಕೆ ತಲುಪಿಲ್ಲ. ಕೈ ಕೊಟ್ಟ ನಂತರ ಸರಕಾರ ರಚನೆ ಮಾಡುವುದಿಲ್ಲ ಎಂದು ಬಿಜೆಪಿ ಈಗಾಗಲೇ ಹಿಂದೆ ಸರಿದಿದೆ. ಶಿವಸೇನೆ ಜತೆ ಕೈ ಜೋಡಿಸಿ , ಸರಕಾರ ರಚಿಸಲು ಕಾರ್ಯತಂತ್ರ ಶುರುವಾದರೂ ಯಾವುದೇ ಅಂತಿಮ ನಿರ್ಧಾರ ಸಾಧ್ಯವಾಗಿಲ್ಲ. ಈಗ ಶರದ್‌ ಪವಾರ್‌ ಕೂಡ ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ ಹೇಳಿಕೆಗಳನ್ನು ನೀಡುತ್ತಿರುವುದು ಶಿವಸೇನೆಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಎನ್‌ಸಿಪಿ, ಕಾಂಗ್ರೆಸ್‌ ಬೆಂಬಲ ಪಡೆದು ಸರಕಾರ ರಚಿಸಿಬಿಡಬಹುದು ಎಂದು ಕನಸು ಕಂಡಿದ್ದ ಶಿವಸೇನೆ ಈಗ ಕೈ ಕೈ ಹಿಸುಕಿಕೊಳ್ಳುವಂತಾಗಿದೆ. ಸೋನಿಯಾ ಗಾಂಧಿ ಜತೆ ಸೋಮವಾರ ಸುದೀರ್ಘವಾಗಿ ಚರ್ಚೆ ನಡೆಸಿದ ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌, ಸರಕಾರ ರಚನೆ ಕುರಿತು ಚರ್ಚಿಸಿಲ್ಲ ಎಂದು ನೇರವಾಗಿ ಹೇಳಿಬಿಟ್ಟಿದ್ದಾರೆ. ಇದು ಶಿವಸೇನೆ ನಾಯಕರು ಇರಿಸು ಮುರಿಸುಗೊಳ್ಳುವಂತೆ ಮಾಡಿದೆ. ಈಗಾಗಲೇ ಕೆಲವು ಶಿವಸೇನೆ ನಾಯಕರು ಎನ್‌ಸಿಪಿ, ಕಾಂಗ್ರೆಸ್‌ ಜತೆ ಹೆಜ್ಜೆ ಹಾಕುವುದು ಮಾಡುವುದು ಬೇಡ ಎಂದು ಒತ್ತಡ ಹೇರುತ್ತಿದ್ದಾರೆ. ಬೇಕಿದ್ದರೆ ಬಿಜೆಪಿ ಜತೆ ಮತ್ತೆ ಸೇರೋಣ, ಇಲ್ಲದಿದ್ದರೆ ಏಕಾಂಗಿಯಾಗಿ ಇದ್ದು ಬಿಡೋಣ ಎಂದು ಶಿವಸೇನೆ ನಾಯಕರು ತಮ್ಮ ಅಭಿಪ್ರಾಯವನ್ನು ಪಕ್ಷದ ವೇದಿಕೆಯಲ್ಲೇ ವ್ಯಕ್ತಪಡಿಸಿದ್ದಾರೆ. ಇದು ಯಾವ ರೀತಿಯ ರಾಜಕೀಯ. ಶಿವಸೇನೆ ಮೊದಲಿನಿಂದಲೂ ಗುರುತಿಸಿಕೊಂಡಿರುವುದು ಸಾಮಾಜಿಕ ಕಾರ್ಯಗಳಿಂದ ಹಾಗೂ ಅಲ್ಪಸ್ವಲ್ಪ ರಾಜಕೀಯ ಚಟುವಟಿಕೆಗಳಿಂದ. ಪರಿಸ್ಥಿತಿ ಹೀಗಿರುವಾಗ ಸೂಕ್ತ ನಿರ್ಧಾರ ಕೈಗೊಳ್ಳಬೇಕಾಗಿದೆ ಎಂದು ಹೇಳಿದ್ದಾರೆ. ದಕ್ಷಿಣ ಮುಂಬಯಿ ಭಾಗದ ಶಿವಸೇನೆಯ ಹಿರಿಯ ನಾಯಕರು ಕೂಡ ಕಾಂಗ್ರೆಸ್‌, ಎನ್‌ಸಿಪಿ ಜತೆ ಮೈತ್ರಿ ಮಾಡಿಕೊಳ್ಳುವುದು ಬೇಡ ಎಂದು ಖಡಕ್ಕಾಗಿ ಹೇಳಿದ್ದಾರೆ. ಬಿಜೆಪಿ ಜತೆಯೇ ನಮ್ಮ ಮೈತ್ರಿ ಇರಲಿ. ಏಕೆಂದರೆ ಎರಡೂ ಪಕ್ಷಗಳದ್ದು ಬಹುತೇಕ ಸಮಾನ ಸಿದ್ಧಾಂತ, ಆಶಯ, ಉದ್ದೇಶಗಳಿವೆ ಎಂದು ತಿಳಿಸಿದ್ದಾರೆ. ಈ ಎಲ್ಲ ಬೆಳವಣಿಗಳ ಮೇಲೆ ನಿಗಾ ಇಟ್ಟಿರುವ ಶಿವಸೇನೆ ಮುಖ್ಯಸ್ಥ ಉದ್ಧವ್‌ ಠಾಕ್ರೆ ರಾಜ್ಯದ ರಾಜಕೀಯ ಚಟುವಟಿಕೆಗಳ ಬಗ್ಗೆ ಗಮನ ಹರಿಸಿ, ಸೂಕ್ತ ವರದಿ ನೀಡುವಂತೆ ಪಕ್ಷದ ಹಿರಿಯ ನಾಯಕ ಸಂಜಯ್‌ ರಾವುತ್‌ಗೆ ಸೂಚನೆ ನೀಡಿದ್ದಾರೆ. ಒಟ್ಟಾರೆಯಾಗಿ ಮಹಾರಾಷ್ಟ್ರದಲ್ಲಿ ರಾಜಕೀಯ ಚಟುವಟಿಕೆಗಳು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇದು ಯಾವ ಹಂತಕ್ಕೆ ತಲುಪುತ್ತದೋ, ತಾರ್ಕಿಕ ಅಂತ್ಯ ಎಂದು ಸಿಗುತ್ತದೋ ಎಂಬುದು ಮತದಾರ ಪ್ರಭುವಿನ ಪ್ರಶ್ನೆಯಾಗಿದೆ.


from India & World News in Kannada | VK Polls https://ift.tt/2pAHncW

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...