ಮುಂಬಯಿ: ಮುಂಬರುವ ವೆಸ್ಟ್ಇಂಡೀಸ್ ವಿರುದ್ಧದ ಏಕದಿನ ಹಾಗೂ ಟಿ20 ಸರಣಿಗಾಗಿನ ಟೀಮ್ ಇಂಡಿಯಾ ಆಯ್ಕೆಯು ನವೆಂಬರ್ 21 ಗುರುವಾರದಂದು ನಡೆಯಲಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮೂಲಗಳು ತಿಳಿಸಿವೆ. ಮುಂದಿನ ತಿಂಗಳಲ್ಲಿ ಭಾರತ ಹಾಗೂ ವಿಂಡೀಸ್ ತಂಡಗಳು ತಲಾ ಮೂರು ಪಂದ್ಯಗಳ ಏಕದಿನ ಹಾಗೂ ಟ್ವೆಂಟಿ-20 ಸರಣಿಯಲ್ಲಿ ಭಾಗವಹಿಸಲಿದೆ. ಡಿಸೆಂಬರ್ 6ರಂದು ಮುಂಬಯಿನ ವಾಂಖೆಡೆ ಮೈದಾನದಲ್ಲಿ ಟಿ20 ಪಂದ್ಯದೊಂದಿಗೆ ಸರಣಿ ಆರಂಭವಾಗಲಿದೆ. ಇದೀಗಷ್ಟೇ ಬಾಂಗ್ಲಾದೇಶ ವಿರುದ್ಧ ನಡೆದ ಟ್ವೆಂಟಿ-20 ಸರಣಿಯಲ್ಲಿ ಭಾರತ 2-1ರ ಅಂತರದ ಗೆಲುವು ದಾಖಲಿಸಿತ್ತು. ತದಾ ಬಳಿಕ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾಗವಹಿಸುತ್ತಿದ್ದು, 1-0 ಅಂತರದ ಮಹತ್ವದ ಮುನ್ನಡೆ ದಾಖಲಿಸಿದೆ. ವಿರಾಟ್ ಆಗಮನ... ಬಾಂಗ್ಲಾ ವಿರುದ್ಧದ ಸರಣಿಯಿಂದ ಹೊರಗುಳಿದಿರುವ ತಂಡದ ಖಾಯಂ ನಾಯಕ ತಂಡವನ್ನು ಸೇರಿಕೊಳ್ಳಲಿದ್ದಾರೆ. ಅತ್ತ ಕಳೆದೊಂದು ತಿಂಗಳಲ್ಲಿ ಭಾರತದಲ್ಲೇ ಉಳಿದಿಕೊಂಡಿರುವ ವೆಸ್ಟ್ಇಂಡೀಸ್, ಲಕ್ನೋದಲ್ಲಿ ಅಫಘಾನಿಸ್ತಾನ ವಿರುದ್ಧ ಸೀಮಿತ ಓವರ್ಗಳ ಸರಣಿಯಲ್ಲಿ ಭಾಗವಹಿಸಿದೆ. ಏಕದಿನ ಸರಣಿಯಲ್ಲಿ 3-0 ಅಂತರದ ಕ್ಲೀನ್ ಸ್ವೀಪ್ ಜಯ ದಾಖಲಿಸಿದರೆ ಟ್ವೆಂಟಿ-20 ಸರಣಿಯಲ್ಲಿ 1-2ರ ಅಂತರದ ಸೋಲಿಗೆ ಶರಣಾಗಿತ್ತು. ಇದೀಗ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾಗವಹಿಸಲಿದೆ. ಪ್ರಸಕ್ತ ಸಾಲಿನಲ್ಲೇ ವೆಸ್ಟ್ಇಂಡೀಸ್ ಪ್ರವಾಸ ಕೈಗೊಂಡಿರುವ ಟೀಮ್ ಇಂಡಿಯಾ, ತಲಾ ಮೂರು ಪಂದ್ಯಗಳ ಏಕದಿನ ಹಾಗೂ ಟ್ವೆಂಟಿ-20 ಜತೆಗೆ ಎರಡು ಪಂದ್ಯಗಳ ಟೆಸ್ಟ್ ಸರಣಿಗಳಲ್ಲಿ ಗೆಲುವು ಬಾರಿಸಿತ್ತು. ಇದೀಗ ವರ್ಷಾಂತ್ಯದ ಟೂರ್ನಿಯಲ್ಲೂ ಗೆಲುವಿನ ಓಟ ಮುಂದುವರಿಸುವ ತವಕದಲ್ಲಿದೆ. ರೋಹಿತ್ ಶರ್ಮಾಗೆ ವಿಶ್ರಾಂತಿ? ಹಿಟ್ಮ್ಯಾನ್ ಖ್ಯಾತಿಯ ಬಲಗೈ ಓಪನರ್ ಕೆಲಸದೊತ್ತಡವನ್ನು ಆಯ್ಕೆ ಸಮಿತಿಯು ಚರ್ಚಿಸಲಿದೆ. ಹಾಗೊಂದು ವೇಳೆ ರೋಹಿತ್ ವಿಶ್ರಾಂತಿ ಬಯಸಿದರೆ ಅಥವಾ ವಿಶ್ರಾಂತಿ ನೀಡಿದರೆ ಅಚ್ಚರಿ ಪಡಬೇಕಿಲ್ಲ. ಕಳೆದ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ರೋಹಿತ್ ಶರ್ಮಾ, ಟೆಸ್ಟ್ ಆರಂಭಿಕನಾಗಿ ತಮ್ಮ ಛಾಪು ಮೂಡಿಸಿದ್ದರು. ಇದೀಗ ಎಲ್ಲ ಪ್ರಕಾರದಲ್ಲೂ ಟೀಮ್ ಇಂಡಿಯಾದ ಅವಿಭಾಜ್ಯ ಅಂಗವಾಗಿದ್ದಾರೆ. ನ್ಯೂಜಿಲೆಂಡ್ ಸರಣಿ ವೇಳೆಗೆ ತಾಜಾತನ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ವಿಂಡೀಸ್ ಟಿ20 ಅಥವಾ ಏಕದಿನ ಸರಣಿಯಿಂದ ರೋಹಿತ್ಗೆ ಬ್ರೇಕ್ ನೀಡುವ ಸಾಧ್ಯತೆಗಳಿದೆ. ನಾಯಕ ವಿರಾಟ್ ಕೊಹ್ಲಿಗೆ ಹೋಲಿಸಿದರೆ ಪ್ರಸಕ್ತ ಸಾಲಿನಲ್ಲಿ ರೋಹಿತ್ ಶರ್ಮಾ ಮೂರು ಏಕದಿನ ಹಾಗೂ ನಾಲ್ಕು ಟ್ವೆಂಟಿ-20 ಪಂದ್ಯಗಳನ್ನು ಹೆಚ್ಚು ಆಡಿದ್ದಾರೆ. ಈ ಮೂಲಕ ಕ್ಯಾಲೆಂಡರ್ ವರ್ಷದಲ್ಲಿ 25 ಏಕದಿನ ಹಾಗೂ 11 ಟ್ವೆಂಟಿ-20 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಇನ್ನೊಂದೆಡೆ ವಿರಾಟ್ ಕೊಹ್ಲಿ ಎರಡು ಬಾರಿ ವಿಶ್ರಾಂತಿಗೆ ಮೊರೆ ಹೋಗಿದ್ದಾರೆ. ಧವನ್ಗೆ ಕತ್ತರಿ? ಮಯಾಂಕ್ಗೆ ಚಾನ್ಸ್? ಕಳಪೆ ಫಾರ್ಮ್ನಿಂದ ಬಳಲುತ್ತಿರುವ ಶಿಖರ್ ಧವನ್ ಫಾರ್ಮ್ ಬಗ್ಗೆ ಎಂಎಸ್ಕೆ ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿ ಗಂಭೀರ ಚರ್ಚೆ ಮಾಡುವ ಸಾಧ್ಯತೆಯಿದೆ. ಈಗಾಗಲೇ ಟೆಸ್ಟ್ ತಂಡದಿಂದ ಹೊರದಬ್ಬಲ್ಪಟ್ಟಿರುವ ಶಿಖರ್ ಧವನ್ಗೆ ಕೊನೆಯ ಅವಕಾಶ ನೀಡಬೇಕೇ ಬೇಡವೇ ಎಂಬುದರ ಬಗ್ಗೆ ನಿರ್ಣಾಯಕ ಚರ್ಚೆಗಳು ನಡೆಯಲಿದೆ. ಮುಂದಿನ ವರ್ಷ ನಡೆಯಲಿರುವ ಟ್ವೆಂಟಿ-20 ವಿಶ್ವಕಪ್ ಹಿನ್ನಲೆಯಲ್ಲಿ ಧವನ್ ಪಾಲಿಗೆ ನಾಯಕ ವಿರಾಟ್ ಕೊಹ್ಲಿ ಅಭಿಮತವು ಹೆಚ್ಚು ಮಹತ್ವದೆನಿಸಲಿದೆ. ಹಾಗೊಂದು ವೇಳೆ ಧವನ್ಗೆ ಅವಕಾಶ ತಪ್ಪಿದರೆ ಕರ್ನಾಟಕದ ಮಯಾಂಕ್ ಅಗರ್ವಾಲ್ರನ್ನು ಪರಿಗಣಿಸುವ ಸಾಧ್ಯತೆಯಿದೆ. ಈಗಾಗಲೇ ಟೆಸ್ಟ್ ಕ್ರಿಕೆಟ್ನಲ್ಲಿ ಲಭಿಸಿರುವ ಕೆಲವೇ ಕೆಲವು ಅವಕಾಶಗಳಲ್ಲಿ ಅಬ್ಬರಿಸಿರುವ ಮಯಾಂಕ್, ಟೆಸ್ಟ್ನಲ್ಲೂ ಅವಕಾಶಕ್ಕಾಗಿ ಹಾತೊರೆಯುತ್ತಿದ್ದಾರೆ. ಪಂತ್ ಅಥವಾ ಸಂಜು? ವಿಕೆಟ್ ಕೀಪರ್ ಹೊಣೆ ಯಾರು ವಹಿಸಿಕೊಳ್ಳಲಿದ್ದಾರೆ ಎಂಬುದು ಚರ್ಚೆಯ ವಿಷಯವಾಗಿರಲಿದೆ. ಸತತ ವೈಫಲ್ಯಗಳನ್ನು ಅನುಭವಿಸುತ್ತಿರುವ ಪಂತ್ಗೆ ಟೀಮ್ ಮ್ಯಾನೇಜ್ಮೆಂಟ್ನಿಂದ ಅಪಾರ ಬೆಂಬಲವಿದ್ದರೂ ಇದರ ಸಂಪೂರ್ಣ ಪ್ರಯೋಜನ ಪಡೆಯುವಲ್ಲಿ ಯುವ ಆಟಗಾರ ವಿಫಲವಾಗಿದ್ದಾರೆ. ಹಾಗಾಗಿ ಸಂಜುಗೆ ಅವಕಾಶ ಲಭಿಸಿದರೆ ಅಚ್ಚರಿಪಡಬೇಕಿಲ್ಲ. ಮಹೇಂದ್ರ ಸಿಂಗ್ ಧೋನಿ ಕಮ್ಬ್ಯಾಕ್ ಕ್ಷೀಣ ಏಕದಿನ ವಿಶ್ವಕಪ್ ಬಳಿಕ ಯುವ ಆಟಗಾರರಿಗೆ ಹೆಚ್ಚಿನ ಅವಕಾಶ ನೀಡುವ ನಿಟ್ಟಿನಲ್ಲಿ ವಿಶ್ರಾಂತಿಯಲ್ಲಿರುವ ಹಿರಿಯ ಅನುಭವಿ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ವೆಸ್ಟ್ಇಂಡೀಸ್ ವಿರುದ್ಧದ ಸರಣಿಯ ವೇಳೆಗೆ ಕಮ್ಬ್ಯಾಕ್ ಮಾಡುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಗಾಯದ ಸಮಸ್ಯೆ ಗಾಯದ ಸಮಸ್ಯೆಯಿಂದಾಗಿ ತಂಡದಿಂದ ಹೊರಗುಳಿದಿರುವ ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್ ಹಾಗೂ ನವದೀಪ್ ಸೈನಿ, ಇನ್ನು ಪುನಶ್ಚೇತನದ ಹಂತದಲ್ಲಿದ್ದು, ವಿಂಡೀಸ್ ಸರಣಿಯಿಂದಲೂ ಹೊರಗುಳಿಯಲಿದ್ದಾರೆ. ಹಾಗಾಗಿ ಶಿವಂ ದುಬೆ, ಶಾರ್ದೂಲ್ ಠಾಕೂರ್ ಮುಂತಾದ ಯುವ ಆಟಗಾರರು ತಂಡದಲ್ಲೇ ಉಳಿದುಕೊಳ್ಳಲಿದ್ದಾರೆ. ರವಿಂದ್ರ ಜಡೇಜಾ ಕಮ್ಬ್ಯಾಕ್ ಬಾಂಗ್ಲಾ ಸರಣಿಯಿಂದ ಹೊರಗುಳಿದಿರುವ ಆಲ್ರೌಂಡರ್ ರವೀಂದ್ರ ಜಡೇಜಾ ಕಮ್ಬ್ಯಾಕ್ ಮಾಡುವ ಸಾಧ್ಯತೆ ಹೆಚ್ಚಾಗಿದೆ. ಇದರಿಂದಾಗಿ ವಾಷಿಂಗ್ಟನ್ ಸುಂದರ್, ಕೃುಣಾಲ್ ಪಾಂಡ್ಯ ಹಾಗೂ ರಾಹುಲ್ ಚಹರ್ ಈ ಮೂವರು ಆಟಗಾರರಲ್ಲಿ ಒಬ್ಬರಿಗೆ ಸ್ಥಾನ ನಷ್ಟವಾಗುವ ಭೀತಿ ಎದುರಾಗಿದೆ. ಅತ್ತ ಯುಜ್ವೇಂದ್ರ ಚಹಲ್ ಭರ್ಜರಿ ಕಮ್ಬ್ಯಾಕ್ ಮಾಡಿಕೊಂಡಿದ್ದು, ಅಗ್ರ ಸ್ಪಿನ್ ಅಸ್ತ್ರವಾಗಿ ಮುಂದುವರಿಯಲಿದ್ದಾರೆ. ಹ್ಯಾಟ್ರಿಕ್ ಸಾಧನೆ ಮಾಡಿರುವ ದೀಪಕ್ ಚಹರ್, ವೇಗಿಗಳ ಪಡೆಯನ್ನು ಮುನ್ನಡೆಸಲಿದ್ದಾರೆ. ಇನ್ನೊಂದೆಡೆ ಸಾಕಷ್ಟು ರನ್ ಬಿಟ್ಟುಕೊಟ್ಟು ಕೆಂಗಣ್ಣಿಗೆ ಗುರಿಯಾಗಿರುವ ಖಲೀಲ್ ಅಹ್ಮದ್ ಮಗದೊಂದು ಅವಕಾಶ ಪಡೆಯುವ ಸಾಧ್ಯತೆಯಿದೆ. ಇನ್ನುಳಿದಂತೆ ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರವಾಗಿಸಿದ್ದಾರೆ. ವಿಂಡೀಸ್ ವಿರುದ್ಧದ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಯು ಡಿಸೆಂಬರ್ 6, 8 ಹಾಗೂ 11ನೇ ದಿನಾಂಕಗಳಲ್ಲಿ ಅನುಕ್ರಮವಾಗಿ ಮುಂಬಯಿ, ತಿರುವನಂತಪುರ ಹಾಗೂ ಹೈದರಾಬಾದ್ನಲ್ಲಿ ನಡೆಯಲಿದೆ. ತದಾ ಬಳಿಕ ಮೂರು ಪಂದ್ಯಗಳ ಏಕದಿನ ಸರಣಿಯು ಡಿಸೆಂಬರ್ 15, 18 ಹಾಗೂ 22ನೇ ದಿನಾಂಕಗಳಲ್ಲಿ ಅನುಕ್ರಮವಾಗಿ ಚೆನ್ನೈ, ವಿಶಾಖಪಟ್ಟಣ ಹಾಗೂ ಕಟಕ್ ಮೈದಾನಗಳಲ್ಲಿ ನಡೆಯಲಿದೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2OzJbLQ