ಬೆಂಗಳೂರು: ಉಪ ಚುನಾವಣಾ ಅಖಾಡ ರಂಗೇರಿದೆ. ಅನರ್ಹ ಶಾಸಕರಿಗೆ ಟಿಕೆಟ್ ಕೊಟ್ಟಿರುವ ಬಿಜೆಪಿ, ಅವರನ್ನು ಗೆಲ್ಲಿಸಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಕನಿಷ್ಟ 8 ಸ್ಥಾನವಾದ್ರೂ ಗೆಲ್ಲದೇ ಹೋದರೆ, ಸರ್ಕಾರವೇ ಉರುಳುವ ಆತಂಕವಿದೆ. ಹೀಗಾಗಿ, ಕ್ಷೇತ್ರವಾರು ಉಸ್ತುವಾರಿ ಸಚಿವರಿಗೆ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಕೆಲಸ ಮಾಡುವಂತೆ ಸಿಎಂ ಕಟ್ಟಾಜ್ಞೆ ಹೊರಡಿಸಿದ್ದಾರೆ. ಉಪ ಚುನಾವಣಾ ಪ್ರಚಾರಕ್ಕೆ ಆರ್ಥಿಕ ಸಂಪನ್ಮೂಲ ಕ್ರೋಢೀಕರಣ, ಚುನಾವಣಾ ನಿರ್ವಹಣಾ ಜವಾಬ್ದಾರಿಗಳನ್ನು ಸಚಿವರುಗಳ ಹೆಗಲಿಗೆ ಹಾಕಿದ್ದಾರೆ. ಕ್ಷೇತ್ರಗಳಲ್ಲಿ ಇರುವ ಮುಖಂಡರ ವೈಮನಸ್ಸುಗಳನ್ನ ಶಮನ ಮಾಡುವ ‘ಟಾಸ್ಕ್’ ಕೂಡಾ ಆಯಾ ಕ್ಷೇತ್ರಗಳ ಉಸ್ತುವಾರಿ ಸಚಿವರ ಹೆಗಲೇರಿದೆ. ಇದೇ ವೇಳೆ, ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಬೇಡಿ ಎಂದು ಯಡಿಯೂರಪ್ಪ ತಾಕೀತು ಮಾಡಿದ್ದು, ವಿವಾದಾತ್ಮಕ ಹೇಳಿಕೆಗಳಿಗೆ ಬ್ರೇಕ್ ಹಾಕಿದ್ದಾರೆ. ಚುನಾವಣಾ ಅಖಾಡ ಅಷ್ಟು ಸಲೀಸೂ ಅಲ್ಲ, ಸುಲಭವೂ ಅಲ್ಲ ಎಂದು, ಎಲ್ಲ ಸಚಿವರಿಗೂ ಸಿಎಂ ಯಡಿಯೂರಪ್ಪ ಸೂಚನೆ ನೀಡಿದ್ಧಾರೆ. ತೀವ್ರ ಒತ್ತಡದಲ್ಲಿ ಯಡಿಯೂರಪ್ಪ..! ಬಿಜೆಪಿ ಜೊತೆ ಕೈಜೋಡಿಸುವ ಮೂಲಕ ರಾಜೀನಾಮೆ ಕೊಟ್ಟು ದೋಸ್ತಿ ಸರ್ಕಾರ ಬೀಳಿಸಿ ಅನರ್ಹರಾದ ಕಾಂಗ್ರೆಸ್-ಜೆಡಿಎಸ್ ಶಾಸಕರಿಗೆ ಪಾಠ ಕಲಿಸಲೇಬೇಕೆಂದು ಜೆಡಿಎಸ್ ನಿರ್ಧರಿಸಿದೆ. ಮಾಜಿ ಸಿಎಂ ಕುಮಾರಸ್ವಾಮಿ ಅವರಂತೂ ಅನರ್ಹರಿಗೆ ಪಾಠ ಕಲಿಸಲೇಬೇಕೆಂದು ನಿರ್ಧರಿಸಿದ್ದಾರೆ. ಅನರ್ಹರ ಕ್ಷೇತ್ರಗಳಲ್ಲಿ ಕಾಂಗ್ರೆಸ್ಗೆ ಬೆಂಬಲ ನೀಡೋದಕ್ಕೂ ಎಚ್ಡಿಕೆ ಮುಂದಾಗಿದ್ದಾರೆ. ಈ ಬೆಳವಣಿಗೆ, ಬಿಜೆಪಿಗೆ ಮಗ್ಗುಲ ಮುಳ್ಳಾಗಿ ಪರಿಣಮಿಸಿದೆ. ಅನರ್ಹರ ಕ್ಷೇತ್ರಗಳಲ್ಲಿ ಕಾಂಗ್ರೆಸ್-ಜೆಡಿಎಸ್ ಒಂದಾದರೆ ನಮ್ಮ ಗತಿಯೇನು ಎಂದು ಸಿಎಂ ಯಡಿಯೂರಪ್ಪ ಭಾರೀ ಒತ್ತಡದಲ್ಲಿದ್ದಾರೆ. ಈ ಉಪ ಚುನಾವಣೆಯಲ್ಲಿ ಕನಿಷ್ಟ ಪಕ್ಷ 8 ಸ್ಥಾನಗಳನ್ನಾದ್ರೂ ಗೆಲ್ಲದೇ ಇದ್ದರೆ ರಾಜ್ಯ ಬಿಜೆಪಿ ಸರ್ಕಾರವೇ ಅಲ್ಪ ಮತಕ್ಕೆ ಕುಸಿಯಲಿದೆ. ಹೀಗಾಗಿ, ಯಡಿಯೂರಪ್ಪ ಒತ್ತಡಕ್ಕೆ ಸಿಲುಕಿದ್ದಾರೆ. ಇದರ ಬೆನ್ನಲ್ಲೇ ಕ್ಷೇತ್ರವಾರು ಉಸ್ತುವಾರಿ ಸಚಿವರುಗಳು ಪೂರ್ಣ ಮನಸ್ಸಿನಿಂದ ಚುನಾವಣೆ ಕೆಲಸದಲ್ಲಿ ತೊಡಗಿಲ್ಲ ಅನ್ನೋ ಅನುಮಾನವೂ ಸಿಎಂಗೆ ಇದೆ ಎನ್ನಲಾಗಿದೆ. ಚುನಾವಣೆಯ ಸಂಪೂರ್ಣ ಹೊಣೆಗಾರಿಕೆ ನನ್ನ ಮೇಲೇ ಬಿದ್ದಿದೆ ಅನ್ನೋ ಟೆನ್ಶನ್ ಕೂಡಾ ಸಿಎಂಗೆ ಶುರುವಾಗಿದೆ.
from India & World News in Kannada | VK Polls https://ift.tt/2KDeGDr