ಹೊಸದಿಲ್ಲಿ: ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಹೀನಾಯ ಸೋಲಿಗೆ ಶರಣಾಗಿದೆ. ಇದರೊಂದಿಗೆ ಸರಣಿ ವಶಪಡಿಸಿಕೊಳ್ಳಲು ಮುಂದಿನ ಎರಡು ಪಂದ್ಯಗಳಲ್ಲಿ ಗೆಲ್ಲಲೇ ಬೇಕಾದ ಒತ್ತಡಕ್ಕೆ ಸಿಲುಕಿದೆ. ಪ್ರಮುಖವಾಗಿಯೂ ಫೀಲ್ಡಿಂಗ್ನಲ್ಲಿ ಮಾಡಿದ ಎಡವಟ್ಟಿನಿಂದಾಗಿ ಭಾರತ ಹಿನ್ನಡೆಗೆ ಗುರಿಯಾಗಿದೆ. ಅದರಲ್ಲೂ ವಿಶೇಷವಾಗಿಯೂ ವಿಕೆಟ್ ಕೀಪರ್ ಡಿಆರ್ಎಸ್ ಮನವಿಯನ್ನು ನಿಖರವಾಗಿ ಗ್ರಹಿಸಲು ವಿಫಲವಾಗುವ ಮೂಲಕ ಟೀಕೆಗೆ ಗುರಿಯಾಗಿದ್ದಾರೆ. ಮೊದಲ ಬ್ಯಾಟಿಂಗ್ ನಡೆಸಿದ ಭಾರತ ಆರು ವಿಕೆಟ್ ನಷ್ಟಕ್ಕೆ 148 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಬಳಿಕ ಮುಷ್ಫಿಕರ್ ರಹೀಂ ಅಜೇಯ ಅರ್ಧಶತಕದ (60*) ನೆರವಿನಿಂದ ಬಾಂಗ್ಲಾದೇಶ ಇನ್ನು ಮೂರು ಎಸೆತಗಳು ಬಾಕಿ ಉಳಿದಿರುವಂತೆಯೇ ಮೂರು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಇದು ಟ್ವೆಂಟಿ-20 ಕ್ರಿಕೆಟ್ನಲ್ಲಿ ಭಾರತ ವಿರುದ್ಧ ಬಾಂಗ್ಲಾದಿಂದ ದಾಖಲಾದ ಮೊದಲ ಗೆಲುವಾಗಿದೆ. ಆದರೆ ಭಾರತ ಫೀಲ್ಡಿಂಗ್ನಲ್ಲಿ ಮಾಡಿದ ತಮ್ಮದೇ ತಪ್ಪಿಗಾಗಿ ಬಾರಿ ಬೆಲೆ ತೆರಬೇಕಾಯಿತು. ಒಂದೇ ಓವರ್ನಲ್ಲಿ ಮೂರು ಮೂರು ಬಾರಿ ಪಂತ್ ಡಿಆರ್ಎಸ್ ಎಡವಟ್ಟು ಮಾಡಿಕೊಂಡರು. ಯುಜ್ವೇಂದ್ರ ಚಹಲ್ ಎಸೆದ ಇನ್ನಿಂಗ್ಸ್ನಲ್ಲಿ 10ನೇ ಓವರ್ನಲ್ಲಿ ಎರಡು ಬಾರಿ ಎಲ್ಬಿಡಬ್ಲ್ಯುಗಾಗಿ ಡಿಆರ್ಎಸ್ ಮನವಿ ಪಡೆಯುವ ಅವಕಾಶವಿದ್ದರೂ ರಿಷಬ್ ಪಂತ್ ತಪ್ಪಿನಿಂದಾಗಿ ಭಾರತ ಅವಕಾಶ ಮಿಸ್ ಮಾಡಿಕೊಂಡಿತು. ಆದರೆ ಅದೇ ಓವರ್ನ ಅಂತಿಮ ಎಸೆತದಲ್ಲಿ ಬ್ಯಾಟ್ ತಗುಲದಿದ್ದರೂ ಮನವಿ ಮಾಡುವ ಮೂಲಕ ಮಹತ್ವದ ಡಿಆರ್ಎಸ್ ಕಳೆದುಕೊಂಡಿತು. ಇದರೊಂದಿಗೆ ಒಂದೇ ಓವರ್ನಲ್ಲಿ ಮೂರು ಮೂರು ಬಾರಿ ಎಡವಟ್ಟು ಮಾಡಿಕೊಂಡಿತು. ಇದರ ಸಂಪೂರ್ಣ ಪ್ರಯೋಜನ ಪಡೆದುಕೊಂಡಿರುವ ಮುಷ್ಷಿಕರ್ ರಹೀಂ ಭಾರತದಿಂದ ಪಂದ್ಯ ಕಸಿದುಕೊಂಡರು. ಈ ಸಂದರ್ಭದಲ್ಲಿ ನಾಯಕ ವಿಕೆಟ್ ಕೀಪರ್ ರಿಷಬ್ ಪಂತ್ ಮೇಲೆ ಅಸಮಾಧಾನಗೊಂಡರೂ ನಗು ಮುಖ ಬೀರಿದರು. ಎಂತ ಮಾರಾಯ ನೀನು? ಎಂಬ ರೀತಿಯಲ್ಲಿ ಸನ್ನೆ ಮಾಡಿದರು. ಆದರೂ ಅತೀವ ಒತ್ತಡದಲ್ಲಿ ಯುವ ವಿಕೆಟ್ ಕೀಪರ್ ಮೇಲೆ ಆಕ್ರೋಶಕ್ಕೊಳಗಾಗದೇ ಸಂಯಮವನ್ನು ಪಾಲಿಸಿದರು. ಇಲ್ಲಿ ಪ್ರಮುಖವಾಗಿಯೂ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕೌಶಲ್ಯಗಳನ್ನು ಭಾರತ ಮಿಸ್ ಮಾಡಿಕೊಂಡಿದೆ. ಇನ್ನೊಂದೆಡೆ ವಿಕೆಟ್ ಹಿಂದುಗಡೆ ಕಳಪೆ ನಿರ್ವಹಣೆ ನೀಡುತ್ತಿರುವ ಪಂತ್ ಮೇಲೆ ವ್ಯಾಪಕ ಟೀಕೆಗಳು ಹರಿದಾಡುತ್ತಿದೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2C8r6yt