ಹೊಸದಿಲ್ಲಿ: ಬಾಂಗ್ಲಾದೇಶ ವಿರುದ್ಧ ನಡೆದ ಮೊದಲ ಟ್ವೆಂಟಿ-20 ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲಿಗೆ ಶರಣಾಗಿದೆ. ಇದರೊಂದಿಗೆ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 0-1ರ ಅಂತರದ ಹಿನ್ನಡೆಗೊಳಗಾಗಿದೆ. ಇದೇ ಸಂದರ್ಭದಲ್ಲಿ ಅನನುಭವವು ಮೈದಾನದಲ್ಲಿ ತಪ್ಪು ನಿರ್ಧಾರಕ್ಕೆ ಕಾರಣವಾಯಿತು ನಾಯಕ ತಿಳಿಸಿದರು. ಪ್ರಮಾದದಿಂದಾಗಿ ಭಾರತ ಅವಕಾಶಗಳನ್ನು ಕೈಚೆಲ್ಲಿತ್ತು. ಮುಷ್ಫಿಕರ್ ರಹೀಂರನ್ನು ಎರಡೆರಡು ಬಾರಿ ಎಲ್ಬಿಡಬ್ಲ್ಯು ಬಲೆಗೆ ಸಿಲುಕಿಸುವ ಅವಕಾಶವಿದ್ದರೂ ಭಾರತ ಡಿಆರ್ಎಸ್ ಮನವಿ ಪಡೆಯದೇ ಅವಕಾಶ ಮಿಸ್ ಮಾಡಿಕೊಂಡಿತು. ಅದೇ ಓವರ್ನಲ್ಲಿ ಮಗದೊಂದು ಬಾರಿ ಬ್ಯಾಟ್ ತಗುಲದಿದ್ದರೂ ಮೇಲ್ಮನವಿ ಮಾಡುವ ಮೂಲಕ ಡಿಆರ್ಎಸ್ ಕಳೆದುಕೊಂಡಿತು. ಇದರ ಸಂಪೂರ್ಣ ಪ್ರಯೋಜನ ಪಡೆದ ಬಾಂಗ್ಲಾ ಬ್ಯಾಟ್ಸ್ಮನ್ ಮುಷ್ಫಿಕರ್ ರಹೀಂ ಭಾರತದಿಂದ ಪಂದ್ಯವನ್ನು ಕಸಿದುಕೊಂಡರು. ನಿರ್ಣಾಯಕ ಹಂತದಲ್ಲಿ ಮುಷ್ಪಿಕರ್ ಕ್ಯಾಚ್ ಅನ್ನು ಕೃುಣಾಲ್ ಪಾಂಡ್ಯ ಮಿಸ್ ಮಾಡಿಕೊಂಡರು. ಇದು ಕೂಡಾ ಸೋಲಿಗೆ ಕಾರಣವಾಯಿತು. ಈ ಬಗ್ಗೆ ಪ್ರತಿಕ್ರಿಯಿಸಿದ ರೋಹಿತ್, ಇದೊಂದು ಡಿಫೆಂಡ್ ಮಾಡಬಹುದಾಗಿದ್ದ ಮೊತ್ತವಾಗಿತ್ತು. ಆದರೆ ಮೈದಾನದಲ್ಲಿ ತಪ್ಪುಗಳನ್ನು ಮಾಡಿದೆವು. ಹುಡುಗರು ಸ್ವಲ್ಪ ಅನನುಭವರಾಗಿದ್ದು, ತಪ್ಪುಗಳಿಂದ ಕಲಿಯಲಿದ್ದಾರೆ. ಬಹುಶ: ಮುಂದಿನ ಬಾರಿ ಪುನರಾವರ್ತನೆಯಾಗದು. ಡಿಆಎಸ್ ರಿವ್ಯೂ ನಮ್ಮಿಂದಾದ ತಪ್ಪು ಎಂದು ಒಪ್ಪಿಕೊಂಡರು. ಯುಜ್ವೇಂದ್ರ ಚಹಲ್ ದಾಳಿಯಲ್ಲಿ ಮುಷ್ಫಿಕರ್ ರಹೀಂ ಬ್ಯಾಕ್ ಫೂಟ್ ಆಡಿದಾಗ ಚೆಂಡು ಸ್ಟಂಪ್ ಮಿಸ್ ಮಾಡಲಿದೆ ಎಂದು ಅಂದುಕೊಂಡೆವು. ಎರಡನೇ ಬಾರಿಗೆ ಫ್ರಂಟ್ ಫೂಟ್ನಲ್ಲಿ ಬಡಿಯಿತು. ಆದರೆ ಅವರೆಷ್ಟು ಅಂತರದಲ್ಲಿದ್ದಾರೆ ಎಂಬುದನ್ನು ಅರಿಯಲು ವಿಫಲರಾದೆವು. ಫೀಲ್ಡಿಂಗ್ನಲ್ಲಿ ನಮ್ಮ ಶ್ರೇಷ್ಠ ಪ್ರದರ್ಶನವನ್ನು ನೀಡಲಿಲ್ಲ ಎಂದು ಡಿಆರ್ಎಸ್ ಎಡವಟ್ಟಿನ ಬಗ್ಗೆ ರೋಹಿತ್ ಸೇರಿಸಿದರು. ನಿಖರ ದಾಳಿ ಸಂಘಟಿಸಿದ ಚಹಲ್ ಪ್ರದರ್ಶನವನ್ನು ರೋಹಿತ್ ಕೊಂಡಾಡಿದರು. ಈ ಪ್ರಕಾರದಲ್ಲಿ ಚಹಲ್ ತಂಡದ ಪಾಲಿಗೆ ನಿರ್ಣಾಯಕ. ಎಷ್ಟು ಪರಿಣಾಮ ಬೀರಬಲ್ಲರೆಂದು ತೋರಿಸಿಕೊಟ್ಟಿದ್ದಾರೆ. ಆ ನಿರ್ದಿಷ್ಟ ಸಂದರ್ಭದಲ್ಲಿ ಏನು ಮಾಡಬೇಕೆಂದು ಚೆನ್ನಾಗಿ ತಿಳಿದಿರುತ್ತದೆ. ಇದರಿಂದ ನಾಯಕನ ಕೆಲಸವು ಸುಲಭವಾಗುತ್ತದೆ ಎಂದರು. ಅದೇ ಹೊತ್ತಿಗೆ ಬಾಂಗ್ಲಾದೇಶಕ್ಕೆ ಸಂಪೂರ್ಣ ಶ್ರೇಯ ಸಲ್ಲಿಸಲು ರೋಹಿತ್ ಬಯಿಸಿದರು. ಪಂದ್ಯ ಆರಂಭದಿಂದಲೇ ನಮ್ಮ ಮೇಲೆ ಒತ್ತಡವನ್ನು ಹೇರುತ್ತಲೇ ಸಾಗಿದರು ಎಂದು ತಿಳಿಸಿದರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2Ne1uXu