ಪಾಟ್ನಾ: ಚಾತ್ ಪೂಜೆಯ ಸಂಭ್ರಮದಲ್ಲಿದ್ದ ಬಿಹಾರಕ್ಕೆ ಆಘಾತವಾಗಿದೆ. ಪೂಜೆಯ ವೇಳೆ ಬಿಹಾರದ ಹಲವು ಜಿಲ್ಲೆಗಳಲ್ಲಿ ನಡೆದ ಪ್ರತ್ಯೇಕ ಅವಘಡಗಳಲ್ಲಿ18 ಮಕ್ಕಳೂ ಸೇರಿ 30 ಮಂದಿ ಸಾವನ್ನಪ್ಪಿದ್ದು, 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ದೇವಾಲಯದ ಗೋಡೆ ಕುಸಿತ, ಕಾಲ್ತುಳಿತ ಹಾಗೂ ನದಿಯಲ್ಲಿಮುಳುಗಿ ಮೃತಪಟ್ಟಿರುವ ಘಟನೆಗಳು ಸಮಷ್ಠಿಪುರ, ಔರಂಗಾಬಾದ್, ಬೇಗುಸರಾಯ್, ವೈಶಾಲಿ, ಬಾಗಲ್ಪುರ ಜಿಲ್ಲೆಗಳಲ್ಲಿ ಭಾನುವಾರ ನಡೆದಿವೆ. ಸಮಷ್ಠಿಪುರದ ಹಾಸನ್ಪುರ ಬಳಿಯ ಕಾಳಿ ಮಂದಿರದಲ್ಲಿ ಪೂಜೆ ಸಲ್ಲಿಸುತ್ತಿದ್ದ ವೇಳೆ ದೇವಸ್ಥಾನದ ಗೋಡೆ ಕುಸಿದು ಇಬ್ಬರು ಮಹಿಳೆ ಸೇರಿ ಮೂವರು ಸಾವನ್ನಪ್ಪಿದ್ದಾರೆ. ರಾಜ್ಯ ಪ್ರಾಕೃತಿಕ ವಿಕೋಪ ಪರಿಹಾರ ಪಡೆ ರಕ್ಷಣಾ ಕಾರ್ಯಾಚರಣೆ ನಡೆಸಿ ಅವಶೇಷಗಳಡಿ ಸಿಲುಕಿದವರನ್ನು ರಕ್ಷಿಸಿದೆ. ಇನ್ನೊಂದೆಡೆ ಔರಂಗಾಬಾದ್ ಜಿಲ್ಲೆಯ ಸೂರ್ಯನಗರಿ ದೇವ್ ಪ್ರದೇಶದಲ್ಲಿ ಚಾತ್ ಪೂಜೆ ಮುಗಿಸಿ ವಾಪಸ್ಸಾಗುತ್ತಿದ್ದ ವೇಳೆ ಕಾಲ್ತುಳಿತ ಉಂಟಾದ ಪರಿಣಾಮ 16 ತಿಂಗಳ ಮಗು ಸೇರಿ ಇಬ್ಬರು ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ. ಪುಣ್ಯ ಸ್ನಾನಕ್ಕಾಗಿ ಸೂರ್ಯ ದೇವಾಲಯದ ಬಳಿ ಸಹಸ್ರಾರು ಭಕ್ತರು ಸೇರಿದ್ದರು. ಈ ವೇಳೆ ಜನದಟ್ಟಣೆಯಿಂದ ಕಾಲ್ತುಳಿತ ಉಂಟಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇನ್ನು ರಾಜ್ಯದ ಹಲವು ಜಿಲ್ಲೆಗಳ ನದಿ ತೀರದ ಪ್ರದೇಶಗಳಲ್ಲಿ ಪುಣ್ಯ ಸ್ನಾನ ಕೈಗೊಳ್ಳಲು ಹೋಗಿ 25 ಮಂದಿ ನೀರು ಪಾಲಾಗಿದ್ದಾರೆ. ಈ ಮಧ್ಯೆ ರಾಜ್ಯ ಸರಕಾರ ಮೃತರ ಕುಟುಂಬಗಳಿಗೆ ತಲಾ 4 ಲಕ್ಷ ರೂ. ಪರಿಹಾರ ಘೋಷಿಸಿದೆ.
from India & World News in Kannada | VK Polls https://ift.tt/2oFm5Ky