ಹೊಸದಿಲ್ಲಿ: ಪ್ರವಾಸಿ ಬಾಂಗ್ಲಾದೇಶ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಯ ಮೊದಲ ಪಂದ್ಯವು ನವೆಂಬರ್ 3 ಭಾನುವಾರದಂದು ಹೊಸದಿಲ್ಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿದೆ. ದಿಲ್ಲಿಯಲ್ಲಿ ವಾಯು ಗುಣಮಟ್ಟ ತೀವ್ರವಾಗಿ ಕುಸಿದಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಮಧ್ಯೆ ಬಾಂಗ್ಲ ವಿರುದ್ಧದ ಮಿನಿ ಸಮರಕ್ಕೆ ಬಳಗ ಸಜ್ಜಾಗಿದೆ. ಟೆಸ್ಟ್ ಹಾಗೂ ಏಕದಿನಕ್ಕೆ ಹೋಲಿಸಿದರೆ ಟ್ವೆಂಟಿ-20 ಕ್ರಿಕೆಟ್ನಲ್ಲಿ ಸ್ಥಿರ ಪ್ರದರ್ಶನ ನೀಡಲು ವಿಫಲವಾಗುತ್ತಿರುವ ಭಾರತ ತಂಡಕ್ಕೆ ಮುಂಬರುವ ಟ್ವೆಂಟಿ-20 ವಿಶ್ವಕಪ್ ಗಮನದಲ್ಲಿಟ್ಟುಕೊಂಡು ಈ ಸರಣಿಯು ಹೆಚ್ಚು ಮುಖ್ಯವೆನಿಸಿದೆ. ಖಾಯಂ ನಾಯಕ ವಿರಾಟ್ ಕೊಹ್ಲಿಗೆ ವಿಶ್ರಾಂತಿ ಸೂಚಿಸಿರುವ ಹಿನ್ನಲೆಯಲ್ಲಿ ಯುವ ತಂಡವನ್ನು ಮುನ್ನಡೆಸುವ ಜವಾಬ್ದಾರಿ ರೋಹಿತ್ ಶರ್ಮಾ ಹೆಗಲ ಮೇಲಿದೆ. ರೋಹಿತ್ ಈಗಾಗಲೇ ಹೇಳಿರುವಂತೆಯೇ ಮೊದಲು ಬ್ಯಾಟಿಂಗ್ ಮಾಡಿ ಗುರಿ ನಿಗದಿಪಡಿಸಿ ಆ ಬಳಿಕ ಗುರಿಯನ್ನು ಡಿಫೆಂಡ್ ಮಾಡುವ ಗೇಮ್ ಪ್ಲ್ಯಾನ್ಗೆ ಭಾರತ ಮೊರೆ ಹೋಗಲಿದೆ. ನಾಯಕ ರೋಹಿತ್ ಜತೆಗೆ ಅನುಭವಿ ಶಿಖರ್ ಧವನ್ ಆರಂಭಿಕ ಸ್ಥಾನದಲ್ಲಿ ಬಲ ತುಂಬಲಿದ್ದಾರೆ. ಆದರೆ ಏಕದಿನ ವಿಶ್ವಕಪ್ ಬಳಿಕ ಧವನ್ ತಮ್ಮ ಲಯ ಕಂಡುಕೊಳ್ಳುವಲ್ಲಿ ವಿಫಲವಾಗಿದ್ದಾರೆ. ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಮೂರನೇ ಸ್ಥಾನಕ್ಕೆ ಕರ್ನಾಟಕದ ಕೆಎಲ್ ರಾಹುಲ್ ಆಯ್ಕೆಯಾಗುವುದು ಖಚಿತವೆನಿಸಿದೆ. ಆದರೆ ಇವರಿಗೆ ಕೇರಳದ ಯುವ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಸಂಜು ಸ್ಯಾಮ್ಸನ್ರಿಂದ ನಿಕಟ ಪೈಪೋಟಿ ಏರ್ಪಟ್ಟಿದೆ. ಓರ್ವ ಪರಿಪೂರ್ಣ ಬ್ಯಾಟ್ಸ್ಮನ್ ರೂಪದಲ್ಲಿ ಸಂಜುರನ್ನು ಈ ಸರಣಿಗೆ ಆಯ್ಕೆ ಮಾಡಲಾಗಿದೆ. ನಾಲ್ಕನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ತಮ್ಮ ಸಾಮರ್ಥ್ಯವನ್ನು ಈಗಾಗಲೇ ಸಾಬೀತು ಮಾಡಿದ್ದಾರೆ. ಕೃುಣಾಲ್ ಪಾಂಡ್ಯ ಆಲ್ರೌಂಡರ್ ಸ್ಥಾನವನ್ನು ಭದ್ರವಾಗಿಸಿದ್ದಾರೆ. ಆದರೆ ಮಗದೊಂದು ಸ್ಥಾನಕ್ಕಾಗಿ ಚೊಚ್ಚಲ ಕರೆ ಪಡೆದಿರುವ ಶಿವಂ ದುಬೆ ಹಾಗೂ ಕರ್ನಾಟಕದ ಮನೀಶ್ ಪಾಂಡೆ ನಡುವೆ ಪೈಪೋಟಿ ಏರ್ಪಟ್ಟಿದೆ. ರಿಷಬ್ ಪಂತ್ ವಿಕೆಟ್ ಕೀಪರ್ ಜವಾಬ್ದಾರಿ ವಹಿಸುವುದು ನಿಚ್ಚಳವೆನಿಸಿದೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲೇ ರೋಹಿತ್ ಶರ್ಮಾ ಸ್ಪಷ್ಟನೆ ನೀಡಿದ್ದಾರೆ. ಬೌಲಿಂಗ್ ವಿಭಾಗಕ್ಕೆ ರಿಸ್ಟ್ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಕಮ್ಬ್ಯಾಕ್ ಮಾಡಲಿದ್ದಾರೆ. ಮಗದೊಂದು ಸ್ಥಾನಕ್ಕಾಗಿ ಯುವ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಹಾಗೂ ರಾಹುಲ್ ಚಹರ್ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಇನ್ನು ಇಬ್ಬರು ವೇಗಿಗಳ ಪೈಕಿ ದೀಪಕ್ ಚಹರ್ ಪ್ಲೇಯಿಂಗ್ ಇಲೆವೆನ್ನಲ್ಲಿ ಕಾಣಿಸಿಕೊಳ್ಳುವುದು ಖಚಿತವೆನಿಸಿದೆ. ಹಾಗಾಗಿ ಮಗದೊಂದು ಸ್ಥಾನಕ್ಕಾಗಿ ಖಲೀಲ್ ಅಹ್ಮದ್ ಹಾಗೂ ಕಮ್ಬ್ಯಾಕ್ ವೇಗಿ ಶಾರ್ದೂಲ್ ಠಾಕೂರ್ ನಡುವೆ ನಿಕಟ ಪೈಪೋಟಿ ಕಂಡುಬಂದಿದೆ. ಇನ್ನೊಂದೆಡೆ ಭಾರತ ಸರಣಿಗೂ ಮುನ್ನ ಶಕಿಬ್ ಅಲ್ ಹಸನ್ ಸೇವೆಯನ್ನು ಬಾಂಗ್ಲಾದೇಶ ಕಳೆದುಕೊಂಡಿತ್ತು. ಇದರಿಂದಾಗಿ ಆಘಾತಕ್ಕೊಳಗಾದ ಬಾಂಗ್ಲಾ, ತಾಜಾ ತಂಡವನ್ನು ಘೋಷಿಸಬೇಕಾದ ಒತ್ತಡಕ್ಕೆ ಸಿಲುಕಿತ್ತು. ಮ್ಯಾಚ್ ಫಿಕ್ಸಿಂಗ್ ಸಂಬಂಧ ಬುಕ್ಕಿಗಳು ಸಂಪರ್ಕಿಸಿದ ವಿಚಾರವನ್ನು ರಹಸ್ಯವಾಗಿರಿಸಿದ ಶಕಿಬ್ ಮೇಲೆ ಐಸಿಸಿ ಎರಡು ವರ್ಷಗಳ ನಿಷೇಧವನ್ನು ಹೇರಿದೆ. ಇದರಿಂದಾಗಿ ಮಹಮುದುಲ್ಲಾ ರಿಯಾದ್ಗೆ ಟಿ20 ನಾಯಕ ಪಟ್ಟ ವಹಿಸಿಕೊಡಲಾಗಿದೆ. ಯುವ ಆಟಗಾರರಿಂದ ತುಂಬಿಕೊಂಡಿರುವ ಬಾಂಗ್ಲಾ ತಂಡಕ್ಕೆ ನಾಯಕ ಮಹಮುದುಲ್ಲಾ ಜತೆಗೆ ಮುಶ್ಫೀಕರ್ ರಹೀಂ, ಸೌಮ್ಯ ಸರ್ಕಾರ್, ಲಿಟನ್ ದಾಸ್ ಹಾಗೂ ಮುಸ್ತಾಫಿಜುರ್ ರಹೀಂ ಬುಲ ತುಂಬಬೇಕಾಗಿದೆ. ಒಟ್ಟಿನಲ್ಲಿ ಟಿ20 ಪ್ರಕಾರದಲ್ಲಿ ಯಾವ ತಂಡವನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ಹಾಗಾಗಿ ದಿಲ್ಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ಮಗದೊಂದು ರೋಚಕ ಕದನವನ್ನು ನಿರೀಕ್ಷೆ ಮಾಡಬಹುದಾಗಿದೆ. ಭಾರತ ಸಂಭಾವ್ಯ ಆಡುವ ಬಳಗ ಇಂತಿದೆ: 1. ರೋಹಿತ್ ಶರ್ಮಾ (ನಾಯಕ) 2. ಶಿಖರ್ ಧವನ್ 3. ಕೆಎಲ್ ರಾಹುಲ್/ ಸಂಜು ಸ್ಯಾಮ್ಸನ್ 4. ಶ್ರೇಯಸ್ ಅಯ್ಯರ್ 5. ಕೃುಣಾಲ್ ಪಾಂಡ್ಯ 6. ರಿಷಬ್ ಪಂತ್ (ವಿಕೆಟ್ ಕೀಪರ್) 7. ಶಿವಂ ದುಬೆ/ಮನೀಶ್ ಪಾಂಡೆ 8. ವಾಷಿಂಗ್ಟನ್ ಸುಂದರ್/ರಾಹುಲ್ ಚಹರ್ 9. ದೀಪಕ್ ಚಹರ್ 10. ಖಲೀಲ್ ಅಹ್ಮದ್/ಶಾರ್ದೂಲ್ ಠಾಕೂರ್ 11. ಯುಜ್ವೇಂದ್ರ ಚಹಲ್ ತಂಡಗಳು ಇಂತಿದೆ: ಭಾರತ: ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ಶಿವಂ ದುಬೆ, ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ಕೃುಣಾಲ್ ಪಾಂಡ್ಯ, ರಿಷಬ್ ಪಂತ್, ಕೆಎಲ್ ರಾಹುಲ್, ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್, ಖಲೀಲ್ ಅಹ್ಮದ್, ಯುಜ್ವೇಂದ್ರ ಚಹಲ್, ದೀಪಕ್ ಚಹರ್, ರಾಹುಲ್ ಚಹರ್ ಮತ್ತು ಶಾರ್ದೂಲ್ ಠಾಕೂರ್. ಬಾಂಗ್ಲಾದೇಶ: ಮಹಮುದುಲ್ಲಾ ರಿಯಾದ್ (ನಾಯಕ), ತೈಜುಲ್ ಇಸ್ಲಾಂ, ಮೊಹಮ್ಮದ್ ಮಿಥುನ್, ಲಿಟನ್ ದಾಸ್, ಸೌಮ್ಯ ಸರ್ಕಾರ್, ನೈಮ್ ಶೇಖ್, ಮುಶ್ಫಿಕರ್ ರಹೀಂ, ಆಫಿಫ್ ಹುಸೇನ್, ಮೊಸದೆಕ್ ಹುಸೇನ್ ಸೈಕತ್, ಅಮಿನುಲ್ ಇಸ್ಲಾಂ ಬಿಪ್ಲೊಬ್, ಅರಾಫತ್ ಸನ್ನಿ, ಅಬು ಹೈದರ್, ಅಲ್ ಅಮಿನ್ ಹುಸೇನ್, ಮುಸ್ತಾಫಿಜುರ್ ರಹ್ಮಾನ್ ಮತ್ತು ಶಫಿಯುಲ್ ಇಸ್ಲಾಂ. ಪಂದ್ಯಾರಂಭ: ರಾತ್ರಿ 7ಕ್ಕೆ
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/36pKnJD