ಅಶ್ವಿನ್ ಬಾಣೂರುಹೊಸದಿಲ್ಲಿ: ಮಹಾರಾಷ್ಟ್ರದಲ್ಲಿ ಬೆಳ್ಳಂಬೆಳಗ್ಗೆ ಅಚ್ಚರಿಯ ಬೆಳವಣಿಗೆ ನಡೆದಿದ್ದು, ಮತ್ತೆ ದೇವೇಂದ್ರ ಫಡ್ನವಿಸ್ ನೇತೃತ್ವದ ಸರಕಾರ ರಚನೆಯಾಗಿದ್ದು, ಇದಕ್ಕೆ ಅಜಿತ್ ಪವಾರ್ ಸಾಥ್ ಕೊಟ್ಟಿದ್ದಾರೆ. ಆದರೆ, ಎನ್ಸಿಪಿ ವರಿಷ್ಠ ಇದಕ್ಕೆ ಬೆಂಬಲ ನೀಡಿಲ್ಲ. ಈ ಹಿನ್ನೆಲೆ ಅಜಿತ್ ಪವಾರ್ ಅವರ ಈ ನಡೆಗೂ ಶರದ್ ಪವಾರ್ ತೆಗೆದುಕೊಂಡಿದ್ದ 41 ವರ್ಷಗಳ ಹಿಂದಿನ ನಡೆಗೂ ಹಲವು ಸಾಮ್ಯತೆಗಳಿವೆ. 1978ರಲ್ಲಿ ಶರದ್ ಪವಾರ್ ಕೇವಲ 37 ವರ್ಷಕ್ಕೇ ಮುಖ್ಯಮಂತ್ರಿಯಾಗಿದ್ದರು. ಅದೂ ಕಾಂಗ್ರೆಸ್ ಪಕ್ಷವನ್ನು ಒಡೆದು. ಕಾಂಗ್ರೆಸ್ (ಯು) ನಲ್ಲಿದ್ದ ಶರದ್ ಪವಾರ್, ಕೈ ಪಕ್ಷ ತೊರೆದು ಜನತಾ ಪಕ್ಷದ ಜತೆಗೆ ಮೈತ್ರಿ ಮಾಡಿಕೊಂಡು ಮಹಾರಾಷ್ಟ್ರದ ಸಿಎಂ ಆದರು. ನಂತರ ಕಾಂಗ್ರೆಸ್ (ಎಸ್) ಎಂಬ ಪಕ್ಷ ಸ್ಥಾಪಿಸಿ ಜನತಾ ಪಕ್ಷದೊಂದಿಗೆ ಮೈತ್ರಿ ಸರಕಾರ ನಡೆಸುತ್ತಿದ್ದರು. 1967ರಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಮೂಲಕ ಬಾರಾಮತಿ ಶಾಸಕರಾಗಿ ಆಯ್ಕೆಯಾದ ಶರದ್ ಪವಾರ್, 11 ವರ್ಷಕ್ಕೇ ತಮ್ಮ ಪಕ್ಷವನ್ನೇ ಬಿಟ್ಟು ಸಿಎಂ ಆದರು. ಆದರೆ, 1980ರಲ್ಲಿ ಇಂದಿರಾ ಗಾಂಧಿ ಮತ್ತೆ ಪ್ರಧಾನಿ ಆದ ಬಳಿಕ ಶರದ್ ಪವಾರ್, ಜನತಾ ಸರಕಾರ ವಿಸರ್ಜನೆಯಾಯಿತು. ನಂತರ 1984ರಲ್ಲಿ ಬಾರಾಮತಿ ಕ್ಷೇತ್ರದ ಸಂಸದರಾದ ಪವಾರ್, 85ರಲ್ಲಿ ಮತ್ತೆ ಅದೇ ವಿಧಾನಸಭೆ ಕ್ಷೇತ್ರದ ಶಾಸಕರಾದರು. ಅಲ್ಲದೆ, 1987ರಲ್ಲಿ ಕಾಂಗ್ರೆಸ್ಗೆ ಮತ್ತೆ ಸೇರಿದರು. ನಂತರ 1988 ಹಾಗೂ 1990ರಲ್ಲಿ ಮತ್ತೆ ಮಹಾರಷ್ಟ್ರದ ಮುಖ್ಯಮಂತ್ರಿಯೂ ಆದರು. ನಂತರ, 1999ರಲ್ಲಿ ಸೋನಿಯಾ ಗಾಂಧಿ ಕೈ ಪಕ್ಷದ ನಾಯಕತ್ವದ ಗದ್ದುಗೆ ಏರುತ್ತಿದ್ದಂತೆ, ಆಕೆಯ ವಿದೇಶಿ ಮೂಲವನ್ನು ಪ್ರಶ್ನಿಸಿ ಕೆಲ ಕಾಂಗ್ರೆಸ್ ನಾಯಕರು ವಿರೋಧ ವ್ಯಕ್ತಪಡಿಸಿದರು. ಈ ವೇಳೆ ಶರದ್ ಪವಾರ್, ಪಿಎ ಸಂಗ್ಮಾ ಹಾಗೂ ತರೀಖ್ ಅನ್ವರ್ ಸೇರಿಕೊಂಡು ಎನ್ಸಿಪಿ ರಚನೆ ಮಾಡಿದರು. 1999ರಲ್ಲಿ ಪವಾರ್ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಈಗಲೂ ಎನ್ಸಿಪಿಯ ಅಧ್ಯಕ್ಷರಾಗಿ ಮುಂದುವರಿದಿದ್ದಾರೆ. ಈಗ, ಇದೇ ರೀತಿ ಅಜಿತ್ ಪವಾರ್ ತಮ್ಮ ಸಂಬಂಧಿ ಶರದ್ ಪವಾರ್ ಬೆಂಬಲವಿಲ್ಲದೆ ಬಿಜೆಪಿಗೆ ಬೆಂಬಲ ಸೂಚಿಸಿ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅಜಿತ್ ಪವಾರ್ಗೆ 20ಕ್ಕೂ ಹೆಚ್ಚು ಶಾಸಕರ ಬೆಂಬಲವಿದೆ ಎಂದು ಕೆಲವರು ಹೇಳುತ್ತಿದ್ದರೆ, ಇನ್ನೂ ಹಲವರು ಸುಮಾರು 35 ಶಾಸಕರ ಬೆಂಬಲವಿದೆ ಎಂದು ಹೇಳುತ್ತಿದ್ದಾರೆ. ಈ ಹಿನ್ನೆಲೆ 41 ವರ್ಷಗಳ ಹಿಂದೆ ಕಾಂಗ್ರೆಸ್ ತೊರೆದು ಸಿಎಂ ಆಗಿದ್ದ ಶರದ್ ಪವಾರ್ ರೀತಿಯಲ್ಲೇ ಶರದ್ ವಿರೋಧ ಕಟ್ಟಿಕೊಂಡು ಅಜಿತ್ ಪವಾರ್ ಬಿಜೆಪಿ ಸರಕಾರದಲ್ಲಿ ಡಿಸಿಎಂ ಆಗಿದ್ದಾರೆ. ಅಂದು ಕಾಂಗ್ರೆಸ್ ವಿಭಜನೆಯಾದ ರೀತಿ ಈಗ ಎನ್ಸಿಪಿ ವಿಭಜನೆಯಾಗುತ್ತಾ? ಅಥವಾ ಅಜಿತ್ ಪವಾರ್ ಹಾಗೂ ಬೆಂಬಲಿತ ಶಾಸಕರ ಮುಂದಿನ ನಡೆಯೇನು ಎಂಬುದು ಕುತೂಹಲ ಕೆರಳಿಸಿದೆ. ಒಟ್ಟಿನಲ್ಲಿ ಮತ್ತಷ್ಟು ಅಚ್ಚರಿಯ ಬೆಳವಣಿಗೆಗಳಿಗೆ ಕಾರಣವಾಗುವ ಎಲ್ಲ ಸಾಧ್ಯತೆಗಳಿವೆ.
from India & World News in Kannada | VK Polls https://ift.tt/34fLbPN