- ಎಂಎನ್ ಗುರುಮೂರ್ತಿ ರಾಜೀವ್ಗಾಂಧಿ ವಸತಿ ನಿಗಮದ ಮೂಲಕ ಅನುಷ್ಠಾನವಾಗುತ್ತಿರುವ ಪ್ರಧಾನಮಂತ್ರಿ ಆವಾಜ್ ಯೋಜನೆ, ಬಸವ , ದೇವರಾಜ ಅರಸು ವಸತಿ ಯೋಜನೆ, ಡಾ.ಬಿ.ಆರ್.ಅಂಬೇಡ್ಕರ್ ವಸತಿ ಯೋಜನೆ, ಇಂದಿರಾ ಗ್ರಾಮೀಣ ನಿವೇಶನ ಯೋಜನೆ ಸೇರಿದಂತೆ ವಿವಿಧ ವಸತಿ ಯೋಜನೆಗಳಲ್ಲಿ ಬಹುತೇಕ ಕಡೆ ನೈಜ ಫಲಾನುಭವಿಗಳಿಗೆ ಮನೆಗಳು ದೊರೆತಿಲ್ಲ. ಅನರ್ಹರಿಗೆ ಮನೆ ಹಂಚಿಕೆ ಮಾಡಿ ಮನೆ ನಿರ್ಮಿಸದೇ ಹಣ ಪಾವತಿಸಿರುವ ಸಾವಿರಾರು ಪ್ರಕರಣಗಳು ಮೇಲ್ನೋಟಕ್ಕೆ ಕಂಡು ಬರುತ್ತಿವೆ. ಹೀಗಾಗಿ ಅರ್ಹರಿಗೆ ಸೂರು ಕಲ್ಪಿಸಬೇಕಾದರೆ ತನಿಖೆ ಅಗತ್ಯವಿದೆ. ತನಿಖೆಯ ಸ್ವರೂಪವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು 'ವಿಜಯ ಕರ್ನಾಟಕ' ಕ್ಕೆ ನೀಡಿದ ವಿಶೇಷ ಸಂದರ್ಶನಲ್ಲಿಸಚಿವರು ಪ್ರತಿಪಾದಿಸಿದರು. ಸಂದರ್ಶನ ಪೂರ್ಣ ಪಾಠ ಈ ರೀತಿ ಇದೆ.  ವಸತಿ ಇಲಾಖೆಯ ವಿವಿಧ ಯೋಜನೆಗಳ ಪ್ರಗತಿ ಹೇಗಿದೆ? ಪ್ರಗತಿಗಿಂತಲೂ ಇಲಾಖೆಯಲ್ಲಿ ನಡೆದಿರುವ ಕರ್ಮಕಾಂಡವನ್ನು ಮೊದಲು ಸ್ವಚ್ಛಗೊಳಿಸಬೇಕಿದೆ. ನಿಗಮದ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಪಿಡಿಒ, ಗ್ರಾಮ ಲೆಕ್ಕಿಗರು, ಕೇಸ್ ವರ್ಕರ್ಗಳು ಶಾಮೀಲಾಗಿ ಸಾಕಷ್ಟು ಅಕ್ರಮಗಳನ್ನು ಮಾಡಿದ್ದಾರೆ. ಹಳೆ ಮನೆಗಳಿಗೆ ಮತ್ತು ಮನೆ ನಿರ್ಮಿಸದೆಯೂ ಹಣ ಪಾವತಿದ್ದಾರೆ. ಒಂದೇ ಮನೆಗೆ ಹತ್ತಾರು ಸಲ ಹಣ ಕೊಟ್ಟಿದ್ದಾರೆ. ಖಾಸಗಿ ಜಿಪಿಎಸ್ ಅಳವಡಿಸಿಕೊಂಡು ಮಾಡಬಾರದ್ದನ್ನು ಮಾಡಿದ್ದಾರೆ. ಸರಕಾರದ ಸಾವಿರಾರು ಕೋಟಿ ಹಣ ಖರ್ಚಾಗಿದ್ದರೂ ಅರ್ಹ ಬಡವರಿಗೆ ಮನೆ ಸಿಕ್ಕಿಲ್ಲ. ಹೀಗಾಗಿ ಸಚಿವರು, ಶಾಸಕರು, ಜಿಲ್ಲಾಧಿಕಾರಿಗಳು, ಸಿಇಒಗಳಿಗೆ ಪತ್ರ ಬರೆದು ಮಾಹಿತಿ ಕೇಳಿದ್ದೇನೆ. ಯಾವ ರೀತಿಯ ತನಿಖೆ ನಡೆಸಲಾಗುವುದು? ಈ ಬಗ್ಗೆ ಈಗಾಗಲೇ ಸಿಎಂ ಯಡಿಯೂರಪ್ಪ ಜತೆ ಸಮಾಲೋಚನೆ ನಡೆಸಿದ್ದು ತನಿಖೆಗೆ ಸಮ್ಮತಿಸಿದ್ದಾರೆ. ಬಡವರಿಗೆ ಅನ್ಯಾಯವಾಗಬಾರದು ಮುಂದುವರಿ ಎಂದು ಸಿಎಂ ಹೇಳಿದ್ದಾರೆ. ನಮ್ಮ ಇಲಾಖೆಯ ಕಾರ್ಯದರ್ಶಿಗಳು ಮುಖ್ಯ ಕಾರ್ಯದರ್ಶಿ ಜತೆ ಚರ್ಚಿಸಿ ತನಿಖೆಯ ಸ್ವರೂಪವನ್ನು ನಿರ್ಧರಿಸುವರು. 2016-17ನೇ ಅವಧಿಯಲ್ಲಿ 5,200 ಕೋಟಿ ಖರ್ಚಾಗಿದೆ. ಆದರೆ, ಆ ಹಣ ಎಲ್ಲಿಗೆ ಹೋಗಿದೆ ಗೊತ್ತಿಲ್ಲ. ಅಕ್ರಮ ಯಾವ ರೀತಿ ನಡೆದಿದೆ ಎಂಬುದಕ್ಕೆ ಇದು ಉದಾಹರಣೆ. ರಾಜ್ಯದಲ್ಲಿ ವಸತಿ ರಹಿತರ ಸಮೀಕ್ಷೆ ನಡೆಸಲಾಗಿದೆಯಾ? ಈ ಬಗ್ಗೆ ಇಲಾಖೆ ಬಳಿ ಸ್ಪಷ್ಟ ಮಾಹಿತಿ ಇಲ್ಲ. 14 ಲಕ್ಷ ಮನೆಗಳು ಮಂಜೂರಾಗಿದ್ದು, 7 ಲಕ್ಷ ಪ್ರಗತಿಯಲ್ಲಿವೆ, ಇನ್ನು 7 ಲಕ್ಷ ಮನೆ ನಿರ್ಮಾಣ ಕೈಗೆತ್ತಿಕೊಳ್ಳಬೇಕಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಯಾವುದೇ ಹಳ್ಳಿಗೆ ಹೋದರೂ ಬಡವರು ಮನೆ ಸಿಕ್ಕಿಲ್ಲವೆಂದು ಅಳಲು ತೋಡಿಕೊಳ್ಳುತ್ತಾರೆ. ಹಾಗಾದರೆ ಇಷ್ಟೊಂದು ಮನೆಗಳು ಯಾರ ಪಾಲಾಗಿವೆ ಎಂಬುದರ ಬಗ್ಗೆಯೇ ತನಿಖೆ ಅಗತ್ಯವಿದೆ. ಆ ನಂತರ ಸಮೀಕ್ಷೆ. ಮನೆ ಹಂಚಿಕೆಗೆ ಯಾವುದೇ ಮಾನದಂಡ ಅನುಸರಿಸಿಲ್ಲ. ಪಂಚಾಯಿತಿ ಹಂತದಲ್ಲಿ ಅವಶ್ಯಕತೆ ಉಳ್ಳವರನ್ನು ಕೈಬಿಟ್ಟು ಹಿಂಬಾಲಕರು, ಹಣ ಕೊಟ್ಟವರಿಗೆ ಮನಬಂದಂತೆ ಮನೆ ಹಂಚಿಕೆ ಮಾಡಿದ್ದಾರೆ. ಇದರಿಂದ ನೈಜ ಬಡವರು ಮನೆ ವಂಚಿತರಾಗಿದ್ದಾರೆ. ಹಿಂದೇ ನಾನೇ ಇಲಾಖೆ ಸಚಿವನಾಗಿದ್ದಾಗ ಅನೇಕ ಪಾರದರ್ಶಕ ವ್ಯವಸ್ಥೆ ಜಾರಿಗೊಳಿಸಿದ್ದೆ, ಅವುಗಳಲ್ಲಿ ಯಾವುದನ್ನೂ ಪಾಲಿಸಿಲ್ಲ. ಅಧಿಕಾರಿಗಳು ಮನಬಂದಂತೆ ತೀರ್ಮಾನ ಕೈಗೊಂಡಿದ್ದಾರೆ. ಎಲ್ಲವನ್ನೂ ಸರಿದಾರಿಗೆ ತರುವ ಸವಾಲಿದೆ. ಪ್ರತಿಯೊಬ್ಬರಿಗೂ ಸೂರು ಎಂಬ ಪ್ರಧಾನಿ ಕನಸು ನನಸು ಮಾಡುವ ನಿಟ್ಟಿನಲ್ಲಿ ಹೆಜ್ಜೆ ಹಾಕಿರುವೆ. ಪ್ರವಾಹ ಸಂತ್ರಸ್ತರಿಗೆ ಸೂರು ಕಲ್ಪಿಸುವುದು ಸರಕಾರಕ್ಕೆ ದೊಡ್ಡ ಸವಾಲು ಅಲ್ಲವೇ? ಖಂಡಿತವಾಗಿಯೂ ಇದು ಸವಾಲಿನ ಕೆಲಸ, ಆದರೆ ಪ್ರವಾಹದಿಂದ ಮನೆ ಕಳೆದುಕೊಂಡಿರುವ ಪ್ರತಿಯೊಬ್ಬ ನಾಗರಿಕನಿಗೂ 5 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಮನೆ ನಿರ್ಮಿಸಿಕೊಡಲು ರಾಜ್ಯ ಸರಕಾರ ಸಂಕಲ್ಪ ಮಾಡಿದೆ. ಸದ್ಯದ ಮಾಹಿತಿ ಪ್ರಕಾರ 2 ಲಕ್ಷ ಮನೆ ನಿರ್ಮಿಸಬೇಕೆಂಬ ಅಂದಾಜಿದೆ. ಸಂತ್ರಸ್ತರ ಬದುಕು ಸಹಜ ಸ್ಥಿತಿಗೆ ಬರಬೇಕೆಂಬುದು ಸಿಎಂ ಆಶಯ. ಆದ್ದರಿಂದ ಮಳೆಗಾಲ ಮುಗಿದ ತಕ್ಷಣವೇ ಸಮರೋಪಾದಿಯಲ್ಲಿ ಕೆಲಸ ಕೈಗೆತ್ತಿಕೊಂಡು ಮಾರ್ಚಿ ಅಂತ್ಯದೊಳಗೆ ಹೊಸ ಮನೆಗಳನ್ನು ಸಂತ್ರಸ್ತರಿಗೆ ಹಸ್ತಾಂತರಿಸಲಾಗುವುದು. ಜತೆಗೆ ಹೊಸದಾಗಿ ಮನೆ ನಿರ್ಮಿಸಿಕೊಡುವ ಪ್ರದೇಶಗಳಲ್ಲಿ ರಸ್ತೆ, ನೀರು, ಚರಂಡಿ, ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲಸೌಲಭ್ಯಗಳಿಗೂ ಆದ್ಯತೆ ಕೊಡಲಾಗುವುದು. ಭಾಗಶಃ ಹಾನಿಗೊಳಗಾಗಿದ್ದ ಮನೆಗಳ ರಿಪೇರಿಗಾಗಿ ಈಗಾಗಲೇ 211 ಕೋಟಿ ಬಿಡುಗಡೆ ಮಾಡಿದ್ದೇವೆ. ಮನೆ ನಿರ್ಮಿಸಿಕೊಳ್ಳುವವರಿಗೆ 5 ಲಕ್ಷ ರೂ.ಗಳ ಪೈಕಿ 1 ಲಕ್ಷ ಬಿಡುಗಡೆ ಮಾಡಿದ್ದೇವೆ. 2ನೇ ಸಲ ಪ್ರವಾಹ ಬಂದಿರುವುದರಿಂದ ಇನ್ನೂ ಸಮೀಕ್ಷೆ ಕೆಲಸ ನಡೆದಿದೆ. ಮನೆ ನಿರ್ಮಾಣಕ್ಕೆ ರಾಜ್ಯ ಸರಕಾರವೇ ಸಂಪೂರ್ಣ ಹಣ ವೆಚ್ಚ ಮಾಡುತ್ತಿದೆ. ನ.3ರಿಂದ 8 ರವರೆಗೆ ನಾನೇ ನೆರೆಪೀಡಿತ ಪ್ರದೇಶಗಳಿಗೆ ಹೋಗುತ್ತಿರುವೆ. ಆದರೆ, ರಾಜ್ಯ ಸರಕಾರ ಏನೂ ಮಾಡಿಲ್ಲವೆಂದು ಟೀಕಿಸುತ್ತಿವೆಯಲ್ಲಾ? ಇದು ಕೇವಲ ರಾಜಕಾರಣದ ಹೇಳಿಕೆ, ವಿಶೇಷವಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸರಕಾರದ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ನನ್ನ 40 ವರ್ಷಗಳ ರಾಜಕೀಯ ಅನುಭವದಲ್ಲೇ ಹೇಳುವುದಾದರೆ ಈ ರೀತಿಯ ಪ್ರವಾಹ ಯಾವತ್ತೂ ಬಂದಿರಲಿಲ್ಲ, ಜತೆಗೆ ನೆರೆ ಸಂತ್ರಸ್ತರಿಗೆ ಈ ರೀತಿ ಯಾವ ಸರಕಾರವೂ ತಕ್ಷಣ ಸ್ಪಂದಿಸಿರಲಿಲ್ಲ. ಆ ಕೆಲಸವನ್ನು ನಾವು ಮಾಡಿದ್ದೇವೆ. ಎಲ್ಲೋ ಸಣ್ಣಪುಟ್ಟ ವ್ಯತ್ಯಾಸಗಳು ಆಗಿರಬಹುದು; ಒಪ್ಪುತ್ತೇನೆ. ಆದರೆ ಏನೂ ಆಗಿಲ್ಲವೆಂದು ಹೇಳುವುದು ಸರಿಯಲ್ಲ.
from India & World News in Kannada | VK Polls https://ift.tt/36xG8LY