ಹೊಸದಿಲ್ಲಿ: ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 1000ನೇ ಟ್ವೆಂಟಿ-20 ಪಂದ್ಯದಲ್ಲಿ ಭಾರತ ವಿರುದ್ಧ ಬಾಂಗ್ಲಾದೇಶ ಏಳು ವಿಕೆಟುಗಳ ಅಂತರದ ರೋಚಕ ಗೆಲುವು ದಾಖಲಿಸಿದೆ. ಇದರೊಂದಿಗೆ ಬಾಂಗ್ಲಾದೇಶ ಚಾರಿತ್ರಿಕ ಸಾಧನೆ ಮೆರೆದಿದೆ. ಇದು ಟ್ವೆಂಟಿ-20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಭಾರತ ವಿರುದ್ಧ ಬಾಂಗ್ಲಾ ಹುಲಿಗಳಿಂದ ದಾಖಲಾದ ಮೊದಲ ಗೆಲುವಾಗಿದೆ. ಒಂದೆರಡು ಬಾರಿ ಗೆಲುವಿನ ಸನಿಹ ತಲುಪಿದರೂ ಪಂದ್ಯ ಗೆಲ್ಲಲಾಗಲಿಲ್ಲ. ಮೂರು ವರ್ಷಗಳ ಹಿಂದೆ ಟ್ವೆಂಟಿ-20 ವಿಶ್ವಕಪ್ನಲ್ಲಿ ಮಹೇಂದ್ರ ಸಿಂಗ್ ಧೋನಿ ರನೌಟ್ನಿಂದಾಗಿ ಒಂದು ರನ್ ಅಂತರದಿಂದ ಸೋಲಿಗೆ ಶರಣಾಗಿರುವ ಬಾಂಗ್ಲಾ ಬಳಿಕ ನಿಧಹಸ್ ಟ್ರೋಫಿಯಲ್ಲಿ ದಿನೇಶ್ ಕಾರ್ತಿಕ್ ಮಿಂಚಿನ ಆಟದಿಂದಾಗಿ ಸೋಲಿಗೆ ಶರಣಾಗಿತ್ತು. ಆದರೆ ಈ ಬಾರಿ ಮುಷ್ಫಿಕರ್ ರಹೀಂ ಅವರಿಗೆ ಯಾವುದೇ ಆತಂಕಗಳಿಗೆ ಆಸ್ಪದ ಕೊಡಲಿಲ್ಲ. ಅಲ್ಲದೆ ಅಜೇಯ ಅರ್ಧಶತದ ನೆರವಿನಿಂದ ತಂಡವನ್ನು ಗೆಲುವಿನ ದಡ ಸೇರಿಸಿದರು. 2005ನೇ ಇಸವಿಯಲ್ಲಿ ಮೊದಲ ಟ್ವೆಂಟಿ-20 ಪಂದ್ಯ ಆಯೋಜನೆಯಾಗಿತ್ತು. ಅಲ್ಲದೆ 14 ವರ್ಷಗಳಲ್ಲಿ ಭಾರತ ವಿರುದ್ಧ ಆಡಲಾಗಿರುವ ಎಂಟು ಪಂದ್ಯಗಳಲ್ಲಿ ಬಾಂಗ್ಲಾದೇಶ ಸೋಲಿಗೆ ಶರಣಾಗಿತ್ತು. ಆದರೆ ಇದೀಗ ಒಂಬತ್ತನೇ ಪಂದ್ಯದಲ್ಲಿ ಗೆಲುವು ಬಾರಿಸುವ ಮೂಲಕ ದಾಖಲೆ ಬರೆದಿದೆ. ವಾಯು ಮಾಲಿನ್ಯ ಆತಂತಕದ ನಡುವೆಯೂ ಅರುಣ್ ಜೇಟ್ಲಿಸ್ಟೇಡಿಯಂನ ಲ್ಲಿ ಭಾನುವಾರ ನಡೆದ ಹಣಾಹಣಿಯಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಪೇರಿಸಿದ್ದ 148 ರನ್ಗಳ ಗುರಿಯನ್ನು ಬೆನ್ನತ್ತಿದ ಬಾಂಗ್ಲಾಆಟಗಾರರು 19.3 ಓವರ್ಗಳಲ್ಲಿ154 ರನ್ ಗಳಿಸಿ ಗೆಲುವಿನ ನಗೆ ಬೀರಿದರು. ಬ್ಯಾಟಿಂಗ್, ಬೌಲಿಂಗ್ ಸೇರಿದಂತೆ ಪಂದ್ಯದ ಎಲ್ಲ ಹಂತದಲ್ಲೂ ಭಾರತೀಯ ಬೌಲರ್ಗಳು ಅತಿ ಕೆಟ್ಟ ಪ್ರದರ್ಶನ ನೀಡಿರುವುದು ಹಿನ್ನಡೆಗೆ ಕಾರಣವಾಯಿತು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/36pwJq1