ಅಬುಧಾಬಿ: ಕರ್ನಾಟಕ ಪ್ರೀಮಿಯರ್ ಲೀಗ್ನಲ್ಲಿ ನಡೆದಿರುವ ಮ್ಯಾಚ್ ಫಿಕ್ಸಿಂಗ್ನ ಬಿಸಿ ದೂರದ ಅಬುಧಾಬಿಯಲ್ಲಿ ನಡೆಯುತ್ತಿರುವ ಟಿ10 ಕ್ರಿಕೆಟ್ ಲೀಗ್ಗೂ ತಟ್ಟಿದೆ. ಎರಡನೇ ಆವೃತ್ತಿಯ ಟೂರ್ನಿಯಲ್ಲಿ ಪಾಲ್ಗೊಂಡಿದ್ದ ಹೊಸ ಫ್ರಾಂಚೈಸಿ ತಂಡದ ಮಾಲೀಕತ್ವವನ್ನು ಟೂರ್ನಿಯ ಮಧ್ಯದಲ್ಲೇ ಬದಲಾವಣೆ ಮಾಡಲಾಗಿದೆ. ಕೆಪಿಎಲ್ ಟೂರ್ನಿಯಲ್ಲಿ ಬಳ್ಳಾರಿ ಟಸ್ಕರ್ಸ್ ತಂಡದ ಮಾಲೀಕತ್ವ ಹೊಂದಿದ್ದ ಅರವಿಂದ್ ವೆಂಕಟೇಶ್ ರೆಡ್ಡಿ ಅವರೇ ಲೀಗ್ನ ಫ್ರಾಂಚೈಸಿ ಖರೀದಿಸಿದ್ದರು. ಇದೀಗ ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಹಗರಣದಲ್ಲಿ ಬಳ್ಳಾರಿ ಟಸ್ಕರ್ಸ್ ತಂಡ ಕೂಡ ಶಾಮೀಲಾಗಿರುವ ಸಾಧ್ಯತೆ ಇದ್ದು, ಈ ವಿಚಾರವಾಗಿ ಬೆಂಗಳೂರಿನ ಸಿಸಿಬಿ ಪೊಲೀಸರು ವಿದೇಶದಲ್ಲಿರುವ ಅರವಿಂದ್ ರೆಡ್ಡಿಗೆ ವಿಚಾರಣಗೆ ಹಾಜರಾಗುವಂತೆ ಸಮನ್ಸ್ ಜಾರಿಗೊಳಿಸಿತ್ತು. ಈ ನಿಟ್ಟಿನಲ್ಲಿ ಟಿ10 ಲೀಗ್ನಲ್ಲಿ ಕರ್ನಾಟಕ ಟಸ್ಕರ್ಸ್ ತಂಡದ ಮಾಲೀಕತ್ವವನ್ನು ಟೂರ್ನಿ ಸಂಘಟಕರು ಬದಲಾವಣೆ ಮಾಡಿದ್ದು, ಮಂಗಳವಾರ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಬಾಲಿವುಡ್ ಸಿನೆಮಾ ನಿರ್ಮಾಪಕ ಹಾಗೂ ಉದ್ಯಮಿ ಕೃಷ್ಣ ಕುಮಾರ್ ಚೌಧರಿ ಅವರನ್ನು ಕರ್ನಾಟಕ ಟಸ್ಕರ್ಸ್ ತಂಡದ ನೂತನ ಮಾಲೀಕರಾಗಿ ಘೋಷಿಸಲಾಗಿದೆ. ಕರ್ನಾಟಕ ಟಸ್ಕರ್ಸ್ ತಂಡವನ್ನು ದಕ್ಷಿಣ ಆಫ್ರಿಕಾದ ಮಾಜಿ ದಿಗ್ಗಜ ಆಟಗಾರ ಹಶೀಮ್ ಆಮ್ಲಾ ಮುನ್ನಡೆಸುತ್ತಿದ್ದಾರೆ. "ಟಿ10 ಕ್ರಿಕೆಟ್ ಅಭಿಯಾನದ ಒಂದು ಭಾಗವಾಗಿರುವುದಕ್ಕೆ ಸಂತವಿದೆ. ಟಿ10 ಕ್ರಿಕೆಟ್ ಸಂಘಟಕರು ಈ ಅವಕಾಶ ನೀಡಿರುವುದಕ್ಕೆ ಧನ್ಯವಾದಗಳು," ಎಂದು ಕೃಷ್ಣ ಕುಮಾರ್ ಚೌಧರಿ ಹೇಳಿದ್ದಾರೆ. "ಅಬುಧಾಬಿ ಟಿ10 ಮೂಲಕ ಚುಟಕು ಮಾದರಿಯ ಕ್ರಿಕೆಟ್ ಅಭಿವೃದ್ಧಿ ಕಡೆಗೆ ಶ್ರಮಿಸಲು ಈ ಅವಕಾಶ ನೀಡಿರುವುದಕ್ಕೆ ಧನ್ಯವಾದಗಳು. ಎಲ್ಲಾ ಸ್ಟೇಕ್ ಹೋಲ್ಡರ್ಸ್ ಜೊತೆಗೆ ಕೈಜೋಡಿಸುವ ಮೂಲಕ ಲೀಗ್ ಅನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವ ಕಡೆಗೆ ಎದುರು ನೋಡುತ್ತಿದ್ದೇವೆ," ಎಂದಿದ್ದಾರೆ. ಬಳ್ಳಾರಿ ಟಸ್ಕರ್ಸ್ ತಂಡದ 2 ಆಟಗಾರರ ಬಂಧನ ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ವಿಚಾರಣೆಯಲ್ಲಿ 2019ರ ಆವೃತ್ತಿಯ ಟೂರ್ನಿಯ ಬಳ್ಳಾರಿ ಟಸ್ಕರ್ಸ್ ಮತ್ತು ಹುಬ್ಬಳ್ಳಿ ಟೈಗರ್ಸ್ ನಡುವಣ ಫೈನಲ್ ಪಂದ್ಯದಲ್ಲಿ ಮೋಸದಾಟ ನಡೆದಿರುವುದು ಬಯಲಾಗಿತ್ತು. ಬೆಂಗಳೂರು ಸಿಸಿಬಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಟಸ್ಕರ್ಸ್ ತಂಡದ ನಾಯಕ ಸಿಎಂ ಗೌತಮ್ ಮತ್ತು ಆಲ್ರೌಂಡರ್ ಅಬ್ರಾರ್ ಖಾಜಿ ಮ್ಯಾಚ್ ಫಿಕ್ಸಿಂಗ್ ಸಲುವಾಗಿ ಹಣ ಸ್ವೀಕರಿಸಿದ್ದನ್ನು ಒಪ್ಪಿಕೊಂಡಿದ್ದರು. ಇದರ ಬೆನ್ನಲ್ಲೇ ಟಸ್ಕರ್ಸ್ ತಂಡದ ಮಾಲೀಕರಿಗೆ ಸಮನ್ಸ್ ನೀಡಲಾಗಿತ್ತು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2CT8P8O