ತೆಲಂಗಾಣ: ಶ್ರೀಶೈಲಂ ಜಲವಿದ್ಯುತ್ ಕೇಂದ್ರದಲ್ಲಿ ಶುಕ್ರವಾರ ಮುಂಜಾನೆ ಭೀಕರ ಬೆಂಕಿ ಅವಘಡ ಸಂಭವಿಸಿದೆ. ವಿದ್ಯುತ್ ಸ್ಥಾವರದ ನಾಲ್ಕನೇ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಇದೇ ಘಟಕದಿಂದ ಭಯಾನಕ ಸ್ಫೋಟದ ಶಬ್ಧವೊಂದು ಕೇಳಿಬಂದಿದೆ. ಇನ್ನು ಘಟನೆ ವೇಳೆ ಒಟ್ಟು 19 ಮಂದಿ ನಾಲ್ಕನೇ ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ. ಈ ಪೈಕಿ 10 ಮಂದಿ ಘಟನೆ ವೇಳೆ ಟನಲ್ ಮೂಲಕ ಹೊರಬಂದು ಬಚಾವ್ ಆಗಿದ್ದಾರೆ ಎನ್ನಲಾಗಿದೆ. ಆದರೆ ಒಳಗಡೆ ಉಳಿದಿದ್ದ 9 ಮಂದಿಗೆ ಏನಾಗಿದೆ ಎಂದು ತಿಳಿದುಬಂದಿಲ್ಲ. ಇನ್ನು ಬೃಹತ್ ಸ್ಪೋಟದಿಂದಾಗಿ ನಾಲ್ಕನೇ ಘಟಕದಲ್ಲಿ ಸಂಪೂರ್ಣ ಬೆಂಕಿ ಆವರಿಸುವ ಜೊತೆಗೆ ಸಂಪೂರ್ಣವಾಗಿ ಹೊಗೆ ತುಂಬಿಕೊಂಡಿತ್ತು. ಹೀಗಾಗಿ ಅಗ್ನಿಶಾಮಕ ಸಿಬ್ಬಂದಿಗಳು ಒಳ ಪ್ರವೇಶಕ್ಕೆ ಸಾಧ್ಯವಾಗಿರಲಿಲ್ಲ. ಸದ್ಯ ಶ್ರೀಶೈಲಂ ಜಲವಿದ್ಯುತ್ ಕೇಂದ್ರದಲ್ಲಿ ಎಲ್ಲಾ ಕೆಲಸವನ್ನ ಸ್ಥಗಿತಗೊಳಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಆರಂಭವಾಗಿದೆ. ಅಲ್ಲದೇ ಹೊರ ಬಂದ ಹತ್ತು ಮಂದಿಯನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ಯಾನೆಲ್ ಬೋರ್ಡ್ಗೆ ಬೆಂಕಿ! ಇನ್ನು ಬೆಂಕಿ ಅವಘಡಕ್ಕೆ ಶಾರ್ಟ್ ಸರ್ಕ್ಯೂಟ್ ಮೂಲ ಕಾರಣ ಎಂದು ವಿದ್ಯುತ್ ಸ್ಥಾವರದ ಮೂಲಗಳ ತಿಳಿಸಿವೆ. ಆದರೆ ತನಿಖೆ ಬಳಿಕವಷ್ಟೆ ನಿಜಾಂಶ ಹೊರಬರಬೇಕಿದೆ. ಮೂಲಗಳ ಪ್ರಕಾರ ಪ್ಯಾನೆಲ್ ಬೋರ್ಡ್ನಲ್ಲಿ ಶಾರ್ಟ್ ಸರ್ಕ್ಯೂಟ್ನಿಂದಾಗಿ ಬೆಂಕಿ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ.
from India & World News in Kannada | VK Polls https://ift.tt/31ihCOF