ಲಖನೌ: ಕೊರೊನಾ ವೈರಸ್ನಿಂದ ಬಳಲುತ್ತಿದ್ದ ಉತ್ತರ ಪ್ರದೇಶದ ಸಚಿವೆ ಕಮಲ ರಾಣಿ ವರುಣ್ ಭಾನುವಾರ ಮೃತಪಟ್ಟಿದ್ದಾರೆ. 62 ವರ್ಷದ ಕಮಲ ರಾಣಿ ಬೆಳಗ್ಗೆ 9.30ಕ್ಕೆ ಲಖನೌನ ಸಂಜಯ್ ಗಾಂಧಿ ವೈದ್ಯಕೀಯ ಕಾಲೇಜಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸಂತಾಪ ಸೂಚಿಸಿದ್ದಾರೆ. ಎರಡು ವಾರಗಳ ಹಿಂದೆ ಸಚಿವೆಗೆ ಕೊರೊನಾ ಸೋಂಕು ತಗುಲಿತ್ತು. ಜುಲೈ 18ರಿಂದ ಕಮಲಾ ರಾಣಿಯವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೆಲ ದಿನಗಳಿಂದ ಆಮ್ಲಜನಕ ಮತ್ತು ವೆಂಟಿಲೇಟರ್ನಲ್ಲಿ ಚಿಕಿತ್ಸೆ ಮುಂದುವರೆದಿತ್ತು. ಯೋಗಿ ಆದಿತ್ಯನಾಥ್ ಸಚಿವ ಸಂಪುಟದಲ್ಲಿ ತಾಂತ್ರಿಕ ಶಿಕ್ಷಣದ ಸಚಿವೆಯಾಗಿ ಸೇವೆ ಸಲ್ಲಿಸುತ್ತಿದ್ದರು. ಸಚಿವರಿಗೆ ಕೊರೊನಾ ಸೋಂಕು ದೃಢಪಟ್ಟ ನಂತರ ಜುಲೈ 18ರಂದು ಎಸ್ಜಿಪಿಜಿಐ ಆಸ್ಪತ್ರೆಗೆ ದಾಖಲಾಗಿದ್ದರು. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಸೋಂಕು ತಗುಲಿದ ನಂತರ ಹೈಪರ್ ಟೆನ್ಷನ್ ಹಾಗೂ ಬಹು ಅಂಗಾಂಗ ವೈಫಲ್ಯದಿಂದ ಭಾನುವಾರ ಸಾವನ್ನಪ್ಪಿದ್ದಾರೆ ಎಂದು ಎಸ್ಜಿಪಿಜಿಐ ನಿರ್ದೇಶಕ ಡಾ.ಆರ್.ಕೆ.ಧಿಮನ್ ಹೇಳಿದ್ದಾರೆ. ಸಚಿವೆಯ ಸಾವಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಕೂಡ ವಿಷಾದ ವ್ಯಕ್ತಪಡಿಸಿದ್ದು, ಕಮಲ್ ರಾಣಿ ವರುಣ್ ಗ್ರಾಮೀಣ ಮಟ್ಟದದಲ್ಲಿ ಜನರ ಸೇವೆ ಮಾಡುತ್ತಾ ಹೆಸರುಗಳಿಸಿದ್ದರು. ಜೊತೆಗೆ ಎರಡು ಬಾರಿ ಲೋಕಸಭಾ ಸಂಸದರಾಗಿದ್ದರು. ಅವರ ಸಾವು ದುಃಖ ತರಿಸಿದೆ. ಅವರ ಕುಟುಂಬ ಹಾಗೂ ಕಾರ್ಯಕರ್ತರಿಗೆ ದು:ಖ ಭರಿಸುವ ಶಕ್ತಿ ನೀಡಲಿ ಎಂದು ಟ್ವೀಟ್ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡ ಸಚಿವೆ ಕಮಲ್ ರಾಣಿ ವರುಣ್ ಸಾವಿಗೆ ಕಂಬನಿ ಮಿಡಿದಿದ್ದು, ಉತ್ತರಪ್ರದೇಶದಲ್ಲಿ ಬಿಜೆಪಿಯ ಬಲವೃದ್ಧಿಯಲ್ಲಿ ಮಹತ್ವದ ಪಾತ್ರವನ್ನು ಕಮಲ್ ರಾಣಿ ವಹಿಸಿದ್ದರು. ಇಡೀ ಜೀವನವನ್ನು ಸಮಾಜ ಸೇವೆಗಾಗಿ ಮುಡಿಪಾಗಿಟ್ಟಿದ್ದರು ಎಂದು ಟ್ವೀಟ್ ಮಾಡಿರುವ ಮೋದಿ ವಿಷಾದ ವ್ಯಕ್ತಪಡಿಸಿದ್ದಾರೆ.
from India & World News in Kannada | VK Polls https://ift.tt/31eAFYI