IPL 2020: ಆರ್‌ಸಿಬಿ ಕಪ್ತಾನಗಿರಿಯಲ್ಲಿ ಬದಲಾವಣೆಯಾಗಬೇಕೇ?

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ಮುಂದಿನ ಆವೃತ್ತಿಗಾಗಿನ ಹರಾಜು ಪ್ರಕ್ರಿಯೆ ಹಿನ್ನಲೆಯಲ್ಲಿ ಎಲ್ಲ ಎಂಟು ತಂಡಗಳು ತನಗೆ ಅಗತ್ಯವಿಲ್ಲದ ಆಟಗಾರರನ್ನು ಬಿಡುಗಡೆಗೊಳಿಸಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತಮಗೆ ಬೇಡವಾದ 12 ಆಟಗಾರನ್ನು ಬಿಡುಗಡೆಗೊಳಿಸಿದೆ. ಈ ಮೂಲಕ ಡಿಸೆಂಬರ್ 19ರಂದು ಕೋಲ್ಕೊತಾದಲ್ಲಿ ನಡೆಯಲಿರುವ ಹರಾಜಿಗೆ ಪೂರ್ವ ಸಿದ್ಧತೆಯನ್ನು ನಡೆಸುತ್ತಿದೆ. ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿಗೆ ಕಾಲಿಡುತ್ತಿರುವಂತೆಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇದುವರೆಗೆ ಟ್ರೋಫಿ ಗೆದ್ದಿಲ್ಲ. ಕಳೆದ ಹಲವಾರು ವರ್ಷಗಳಿಂದ ತಂಡವನ್ನು ಮುನ್ನಡೆಸುತ್ತಿದ್ದರೂ ಕಪ್ ಗೆಲ್ಲಲು ಸಾಧ್ಯವಾಗದಿರುವುದು ವ್ಯಾಪಕ ಟೀಕೆಗಳಿಗೆ ಕಾರಣವಾಗಿತ್ತು. ಇದರಿಂದಾಗಿ ವಿರಾಟ್ ಕೊಹ್ಲಿ ನಾಯಕತ್ವ ಬದಲಾವಣೆ ಮಾಡುವಂತೆ ಒತ್ತಡಗಳು ಕೇಳಿಬಂದಿದ್ದವು. 2013ನೇ ಇಸವಿಯಿಂದ ತಂಡವನ್ನು ಕೊಹ್ಲಿ ಮುನ್ನಡೆಸುತ್ತಿದ್ದಾರೆ. ಆದರೆ ಟ್ರೋಫಿ ಮಾತ್ರ ದೂರದ ಮಾತಾಗಿದೆ. 2016ನೇ ಸಾಲಿನಲ್ಲಿ ರನ್ನರ್ ಅಪ್ ಸ್ಥಾನ ಪಡೆದಿರುವುದೇ ಕೊಹ್ಲಿ ನಾಯಕತ್ವದಲ್ಲಿ ಆರ್‌ಸಿಬಿಯ ದೊಡ್ಡ ಸಾಧನೆಯಾಗಿದೆ. ನಿರ್ಣಾಯಕ ಹಂತದಲ್ಲಿ ಕೆಟ್ಟ ತೀರ್ಮಾನ ತೆಗೆದುಕೊಳ್ಳುತ್ತಿರುವುದು ಕೊಹ್ಲಿ ನಾಯಕತ್ವಕ್ಕೆ ಹಿನ್ನಡೆಯಾಗಿ ಪರಿಣಮಿಸಿದೆ. ಐಪಿಎಲ್‌ನಲ್ಲಿ ಮಹೇಂದ್ರ ಸಿಂಗ್ ಧೋನಿ ಹಾಗೂ ರೋಹಿತ್ ಶರ್ಮಾಗೆ ಹೋಲಿಸಿದಾಗ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರಿ ವೈಫಲ್ಯ ಅನುಭವಿಸಿದ್ದಾರೆ. ರೋಹಿತ್ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ನಾಲ್ಕು ಬಾರಿ ಮತ್ತು ಧೋನಿ ಕಪ್ತಾನಗಿರಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮೂರು ಬಾರಿ ಚಾಂಪಿಯನ್ ಪಟ್ಟ ಆಲಂಕರಿಸಿದೆ. ಆರ್‌ಸಿಬಿಗೆ ಮೇಜರ್ ಸರ್ಜರಿ, ಕೊಹ್ಲಿಯೇ ನಾಯಕ... ಈ ಮಧ್ಯೆ 2020 ಆವೃತ್ತಿಗಾಗಿ ಆರ್‌ಸಿಬಿ ತಂಡದಲ್ಲಿ ಮೇಜರ್ ಸರ್ಜರಿ ಮಾಡಲಾಗಿದೆ. ಹಾಗಿದ್ದರೂ ನಾಯಕರಾಗಿ ವಿರಾಟ್ ಕೊಹ್ಲಿ ಅವರನ್ನೇ ಉಳಿಸಲಾಗಿದೆ. ಆರ್‌ಸಿಬಿ ಮ್ಯಾನೇಜ್‌ಮೆಂಟ್‌ನಲ್ಲಿ ಭಾರಿ ಬದಲಾವಣೆ ತರಲಾಗಿತ್ತು. ನ್ಯೂಜಿಲೆಂಡ್‌ನ ಹೆಸರಾಂತ ಮೈಕ್ ಹೆಸ್ಸನ್ ಅವರನ್ನು ಕ್ರಿಕೆಟ್ ಕಾರ್ಯಾಚರಣೆಯ ನಿರ್ದೇಶಕರಾಗಿ ನೇಮಕಗೊಳಿಸಲಾಗಿದೆ. ಹಾಗೆಯೇ ಸೈಮನ್ ಕ್ಯಾಟಿಚ್ ಮುಖ್ಯ ಕೋಚ್, ಆ್ಯಡಂ ಗ್ರಿಫಿತ್ ಬೌಲಿಂಗ್ ಕೋಚ್ ಮತ್ತು ಶ್ರೀಧರನ್ ಶ್ರೀರಾಮ್ ಬ್ಯಾಟಿಂಗ್ ಹಾಗೂ ಸ್ಪಿನ್ ಬೌಲಿಂಗ್ ಕೋಚ್ ಆಗಿ ನೇಮಕಗೊಂಡಿದ್ದಾರೆ. ಒಟ್ಟಿನಲ್ಲಿ ಈ ಸಲ ಆರ್‌ಸಿಬಿ ಟ್ರೋಫಿ ಎತ್ತಿ ಹಿಡಿಯಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ. ಆರ್‌ಸಿಬಿ ತನ್ನ ಬಳಿಯೇ ಉಳಿಸಿಕೊಂಡ ಆಟಗಾರರ ಪಟ್ಟಿ ಇಂತಿದೆ: ವಿರಾಟ್ ಕೊಹ್ಲಿ, ಮೊಯಿನ್ ಅಲಿ, ಯುಜ್ವೇಂದ್ರ ಚಹಲ್, ಎಬಿ ಡಿ ವಿಲಿಯರ್ಸ್, ಪಾರ್ಥಿವ್ ಪಟೇಲ್, ಮೊಹಮ್ಮದ್ ಸಿರಾಜ್, ಪವನ್ ನೇಗಿ, ಉಮೇಶ್ ಯಾದವ್, ಗುರ್‌ಕೀರಾತ್ ಮನ್, ದೇವದತ್ ಪಡಿಕ್ಕಲ್, ಶಿವಂ ದುಬೆ, ವಾಷಿಂಗ್ಟನ್ ಸುಂದರ್ ಮತ್ತು ನವದೀಪ್ ಸೈನಿ. ಆರ್‌ಸಿಬಿ ಬಿಡುಗಡೆಗೊಳಿಸಿದ ಆಟಗಾರರ ಪಟ್ಟಿ ಇಂತಿದೆ: ಮಾರ್ಕಸ್ ಸ್ಟೋಯ್ನಿಸ್, ಶಿಮ್ರಾನ್ ಹೆಟ್ಮಾಯೆರ್, ಅಕ್ಷದೀಪ್ ನಾಥ್, ನಥನ್ ಕೌಲ್ಟರ್ ನೈಲ್, ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ಪ್ರಯಸ್ ಬರ್ಮನ್, ಟಿಮ್ ಸೌಥಿ, ಕುಲ್ವಂತ್ ಕೆಜ್ರೋಲಿಯಾ, ಹಿಮ್ಮತ್ ಸಿಂಗ್, ಹೆನ್ರಿಚ್ ಕ್ಲಾಸೆನ್, ಮಿಲಿಂದ್ ಕುಮಾರ್ ಮತ್ತು ಡೇಲ್ ಸ್ಟೇನ್.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/342KF7Q

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...